ಬಿಎಂಟಿಸಿಯಿಂದ ಒಲಾ ಮಾದರಿ ಸೇವೆ
Team Udayavani, Jan 2, 2019, 6:46 AM IST
ಬೆಂಗಳೂರು: ಒಲಾ-ಉಬರ್ ಮಾದರಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕೂಡ “ಆ್ಯಪ್ ಆಧಾರಿತ ಸೇವೆ’ ಆರಂಭಿಸಲು ಚಿಂತನೆ ನಡೆಸಿದೆ.
ಪ್ರಯಾಣಿಕರಿಗೆ “ಲಾಸ್ಟ್ ಮೈಲ್ ಕನೆಕ್ಟಿವಿಟಿ’ ನೀಡಲು ಸ್ವತಃ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿ, ಅಗ್ರಿಗೇಟರ್ಗಳೊಂದಿಗೆ ಒಪ್ಪಂದ ಮಾಡಿಕೊಂಡು ಆ್ಯಪ್ ಆಧಾರಿತ ಸೇವೆ ಕಲ್ಪಿಸಲು ಚಿಂತನೆ ನಡೆದಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಮುಂಬರುವ ದಿನಗಳಲ್ಲಿ ಒಲಾ-ಉಬರ್ನಂತೆಯೇ ಬಿಎಂಟಿಸಿಯಿಂದಲೂ “ಕ್ಯಾಬ್ ಸೇವೆ’ ದೊರೆಯಲಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.
ಒಂದೆಡೆ ಈಗಾಗಲೇ ಇರುವ ಆ್ಯಪ್ ಆಧಾರಿತ ಕ್ಯಾಬ್ಗಳು, ಮತ್ತೂಂದೆಡೆ “ನಮ್ಮ ಮೆಟ್ರೋ’ದಿಂದ ಬಿಎಂಟಿಸಿ ಆದಾಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಜತೆಗೆ ಮುಂದಿನ ದಿನಗಳಲ್ಲಿ ಉಪನಗರ ರೈಲು ಯೋಜನೆ ಹಾಗೂ ಎರಡನೇ ಹಂತದ ಮೆಟ್ರೋ ಕೂಡ ನಗರ ಸಾರಿಗೆ ಸೇವೆಯಲ್ಲಿ ಸೇರ್ಪಡೆಯಾಗಲಿದೆ.
ಇವೆಲ್ಲವುಗಳ ಮಧ್ಯೆ ಪರ್ಮಿಟ್ ಇಲ್ಲದಿದ್ದರೂ ನಗರದಲ್ಲಿ ಖಾಸಗಿ ಬಸ್ಗಳ ಹಾವಳಿ ಇದೆ. ಈ ಎಲ್ಲ ದೃಷ್ಟಿಯಿಂದ ಬಿಎಂಟಿಸಿ ತನ್ನ ಸೇವಾ ವ್ಯಾಪ್ತಿ ವಿಸ್ತರಿಸಿಕೊಳ್ಳುವುದರ ಜತೆಗೆ ಹೊಸ ಪ್ರಯಾಣಿಕ ವರ್ಗದ ಹುಡುಕಾಟ ನಡೆಸಿದೆ. ಈ ಹಿನ್ನೆಲೆಯಲ್ಲಿ ಆ್ಯಪ್ ಆಧಾರಿತ ಸೇವೆಯ ಸಾಧಕ-ಬಾಧಕಗಳ ಕುರಿತಂತೆ ಚಿಂತನೆ ನಡೆಸಿದೆ.
ಈಗಾಗಲೇ ದೆಹಲಿಯಲ್ಲಿ “ಆ್ಯಪ್ ಆಧಾರಿತ ಹವಾನಿಯಂತ್ರಿತ ಬಸ್ ಸೇವೆ’ ಆರಂಭಿಸಲಾಗಿದೆ. ಬೆಂಗಳೂರಿನಲ್ಲೂ ಇದನ್ನು ಪರಿಚಯಿಸಬಹುದೇ ಎಂಬುದರ ಬಗ್ಗೆಯೂ ಆಲೋಚನೆ ನಡೆದಿದೆ. ಈ ಹೊಸ ಯೋಜನೆ ಅನುಷ್ಠಾನಕ್ಕಾಗಿ ಬಿಎಂಟಿಸಿ ಟ್ಯಾಕ್ಸಿಗಳು ಅಥವಾ ಮಿಡಿ ಬಸ್ಗಳನ್ನು ಖರೀದಿಸುವುದಿಲ್ಲ. ತಾನು ಕೇವಲ ಆ್ಯಪ್ ಅಭಿವೃದ್ಧಿಪಡಿಸಿ, ಅದನ್ನು ನಿಯಮದ ಪ್ರಕಾರ ನಿರ್ವಹಣೆ ಮಾಡಲಿದೆ.
ವಾಹನ ಲಿಂಕ್ ಮಾಡಲು ಅವಕಾಶ: ಆ್ಯಪ್ ಆಧರಿತ ಸೇವೆ ನಿರ್ವಹಣೆಗೆ ಅಗ್ರಿಗೇಟರ್ಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳಲಿರುವ ಬಿಎಂಟಿಸಿ, ನಂತರ ಒಲಾ, ಉಬರ್ ಸಂಸ್ಥೆಗಳೊಂದಿಗೆ ಚಾಲಕರು ತಮ್ಮ ವಾಹನವನ್ನು “ಜೋಡಣೆ’ ಮಾಡಿದಂತೆಯೇ ಬಿಎಂಟಿಸಿ ಜತೆ ಕೂಡ “ಜೋಡಣೆ’ (ಲಿಂ ಕ್) ಮಾಡಿಕೊಳ್ಳಲು ಅವಕಾಶ ಇರಲಿದೆ.
ಯೋಜನೆ ಕಾರ್ಯರೂಪಕ್ಕೆ ಬಂದರೆ, ಯಾವುದೇ ಹೂಡಿಕೆ ಇಲ್ಲದೆ ಸೇವೆ ವಿಸ್ತಾರಗೊಳ್ಳಲಿದೆ. ಹಾಗೇ ಸಂಸ್ಥೆಯ ಆದಾಯ ಕೂಡ ಹೆಚ್ಚಲಿದೆ. ಆದರೆ, ಈ ಪರಿಕಲ್ಪನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಅಂತಿಮ ಸ್ವರೂಪ ಪಡೆದುಕೊಂಡಿಲ್ಲ ಎಂದು ನಿಗಮದ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೊನೆ ಹಂತದ ಸಂಪರ್ಕವೇ ಸವಾಲು: ನಗರದಲ್ಲಿ ಲಾಸ್ಟ್ ಮೈಲ್ ಕನೆಕ್ಟಿವಿಟಿ (ಕೊನೆಯ ಹಂತ ಸಂಪರ್ಕಿಸುವಿಕೆ) ದೊಡ್ಡ ಸವಾಲಾಗಿದೆ. ಮೆಟ್ರೋದಲ್ಲಿ ಬಂದಿಳಿಯುವ ಲಕ್ಷಾಂತರ ಜನ, ಮನೆಗಳನ್ನು ತಲುಪಲು ಈಗಲೂ ಆಟೋ ಅಥವಾ ಟ್ಯಾಕ್ಸಿಗಳನ್ನು ಅವಲಂಬಿಸಿದ್ದಾರೆ. ಇದೇ ಕಾರಣಕ್ಕಾಗಿ ಮೆಟ್ರೋ ನಡುವೆಯೂ ಒಲಾ ಮತ್ತು ಉಬರ್ ಸೇವೆಗಳು ಅಲ್ಪಾವಧಿಯಲ್ಲೇ ಹೆಚ್ಚು ಜನರನ್ನು ತಲುಪಿವೆ.
ಇದರ ಮುಂದುವರಿದ ಭಾಗವಾಗಿ ಈಗ ಬೈಕ್ ಟ್ಯಾಕ್ಸಿ ಸೇವೆಗೂ ಸರ್ಕಾರ ಅನುಮತಿ ನೀಡಲು ಹೊರಟಿದೆ. ಹೀಗಿರುವಾಗ, ನಿಗಮದಿಂದಲೇ ಆ್ಯಪ್ ಆಧಾರಿತ ಸೇವೆ ನೀಡಲು ಉದ್ದೇಶಿಸಲಾಗಿದೆ.ಆದರೆ, ಏಕಾಏಕಿ ಇದನ್ನು ಜಾರಿಗೊಳಿಸುವುದು ಕಷ್ಟ. ಮೊದಲು ಸಾರಿಗೆ ಇಲಾಖೆಯಿಂದ ಪರ್ಮಿಟ್ ಪಡೆಯಬೇಕಾಗುತ್ತದೆ. ಸೀಟುಗಳನ್ನು ಮೊದಲೇ ಬುಕಿಂಗ್ ಮಾಡಬೇಕಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಪ್ರಯಾಣಿಕರ ಸ್ಪಂದನೆ ಹೇಗಿರುತ್ತದೆ ಎಂಬುದನ್ನೂ ನೋಡಬೇಕು. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಒಂದು ಮಾರ್ಗದಲ್ಲಿ ಇದನ್ನು ಪರಿಚಯಿಸಲಾಗುವುದು. ನಂತರ ಉಳಿದೆಡೆ ವಿಸ್ತರಿಸುವ ಬಗ್ಗೆ ಆಲೋಚಿಸಬಹುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಶೇರ್ಡ್ ಆಟೋ ಅನುಕೂಲ?: ನಗರದಲ್ಲಿ ಲಾಸ್ಟ್ ಮೈಲ್ ಕನೆಕ್ಟಿವಿಟಿ ಬೇಕೇ ಬೇಕು. ಆದರೆ, ಅದಕ್ಕಾಗಿ ಆ್ಯಪ್ ಆಧಾರಿತ ಸೇವೆಗಳಿಗಿಂತ ಹೆಚ್ಚಾಗಿ ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಶೇರ್ಡ್ ಆಟೋ ಅಥವಾ ಇ-ಆಟೋ ಸೇವೆ ಅವಶ್ಯಕತೆ ಇದೆ ಎನ್ನುತ್ತಾರೆ ಬಿಎಂಟಿಸಿ ಬಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್.
50 ಲಕ್ಷ ಜನ ನಿತ್ಯ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸುತ್ತಾರೆ. ಅವರಲ್ಲಿ ಬಹುತೇಕರು ಕೂಲಿ ಕಾರ್ಮಿಕರು, ಬಡ ಮತ್ತ ಮಧ್ಯಮ ವರ್ಗದವರಾಗಿದ್ದು, ಈಗಲೂ ಅವರೆಲ್ಲರ ಬಳಿ ಸ್ಮಾರ್ಟ್ಫೋನ್ ಇಲ್ಲ. ಅಷ್ಟಕ್ಕೂ ಆ್ಯಪ್ ಆಧಾರಿತ ಸೇವೆ ತುಂಬಾ ದುಬಾರಿ ಆಗಿರುತ್ತದೆ. ಹೀಗಿರುವಾಗ, ಇದು ಯಾವ ವರ್ಗಕ್ಕೆ ಹೆಚ್ಚು ಅನುಕೂಲ ಆಗಲಿದೆ ಎಂಬುದನ್ನೂ ಯೋಚಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಒಲಾ ಹಾಗೂ ಉಬರ್ ಮಾದರಿಗಿಂತ ಶೇರ್ಡ್ ಆಟೋಗಳಿಗೆ ಒತ್ತು ನೀಡುವ ಅವಶ್ಯಕತೆ ಇದೆ. ಈ ಸಂಬಂಧ ಸಾರಿಗೆ ಇಲಾಖೆ ನಿಯಮ ತಿದ್ದುಪಡಿ ಮಾಡಬೇಕು ಎಂದು ವಿನಯ್ ಶ್ರೀನಿವಾಸ್ ಆಗ್ರಹಿಸುತ್ತಾರೆ.
ಈ ಯೋಜನೆ ಇನ್ನೂ ಪರಿಶೀಲನೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಇದರ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಡಾ.ಎನ್.ವಿ.ಪ್ರಸಾದ್, ಬಿಎಂಟಿಸಿ ಎಂ.ಡಿ
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
PU ಕಂಪ್ಯೂಟರ್ ಸೈನ್ಸ್, ಸೈಕಾಲಜಿಗೂ ಎನ್ಸಿಇಆರ್ಟಿ ಪಠ್ಯ
ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು
Karkala ಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ
Hyderabad: ನಟಿ ಪವಿತ್ರ ಜಯರಾಂ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ, ಗೆಳೆಯ ಚಂದು ಆತ್ಮಹತ್ಯೆ
ರಾಜ್ಯದಲ್ಲಿ 12 ವರ್ಷಗಳಲ್ಲಿ 881ಸಾವು! ಸಿಡಿಲಾಘಾತದಿಂದ ಸಾವು ಬೆಳಗಾವಿ,ಬೀದರ್ನಲ್ಲೇ ಹೆಚ್ಚು