ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಿ
Team Udayavani, Jan 8, 2019, 9:16 AM IST
ದೇವನಹಳ್ಳಿ: ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯಲು ಜಿಪಂ ನಿಂದ ಸುಧಾರಣಾ ಸಮಿತಿ ರಚಿಸಲಾಗಿದ್ದು, ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಆರ್.ಲತಾ ತಿಳಿಸಿದರು.
ಬೆಂಗಳೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಗಣಿತ ವಿಷಯ ಬೋಧಿಸುವ ಸಂಪನ್ಮೂಲ ಶಿಕ್ಷಕರ ಬೋಧನಾ ಬಲವರ್ಧ ನೆಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ವಿನಿಮಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಿಕೆಯಲ್ಲಿ ಹಿಂದುಳಿದಿರುವ ಹತ್ತನೇ ತರಗತಿಯ ವಿಶೇಷ ಪರಿಗಣಿತ ಗುಂಪಿನ(ವಿ.ಪಿ.ಜೆ) ಮಕ್ಕಳಿಗಾಗಿ ವಾರಾಂತ್ಯದಲ್ಲಿ ವಿಶೇಷ ತರಗತಿಗಳನ್ನು ಜಿಲ್ಲೆಯ 42 ವಿಶೇಷ ತರಗತಿ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಗ್ರಾಮಾಂತರ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವು 2016ರಲ್ಲಿ ಒಂದನೇ ಸ್ಥಾನದಲ್ಲಿ ಇದ್ದದ್ದು, 2017ರಲ್ಲಿ ಹತ್ತನೇ ಸ್ಥಾನಕ್ಕೂ, 2018ರಲ್ಲಿ 14ನೇ ಸ್ಥಾನಕ್ಕೂ ಕುಸಿದಿದೆ. ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಶಿಕ್ಷಕರ ಶ್ರಮ ಅಗತ್ಯವಾಗಿದೆ ಎಂದು ಹೇಳಿದರು.
ವಾಹನ, ಊಟದ ವ್ಯವಸ್ಥೆ: ಜಿಲ್ಲೆಯ 63 ಸರ್ಕಾರಿ ಹಾಗೂ 47 ಅನುದಾನಿತ ಪ್ರೌಢಶಾಲೆಗಳ, ಒಟ್ಟು 1954, ಹತ್ತನೇ
ತರಗತಿ ವಿಶೇಷ ಪರಿಗಣಿತ ಮಕ್ಕಳಿ ಗಾಗಿ ಗಣಿತ, ವಿಜ್ಞಾನ, ಇಂಗ್ಲಿಷ್ ಹಾಗೂ ಸಮಾಜ ವಿಜ್ಞಾನ ವಿಷಯ ಬೋಧನೆಗಾಗಿ, 160 ಸಂಪನ್ಮೂಲ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ವಿಪಿಜೆ ಮಕ್ಕಳು ಕಲಿಕಾ ಕೇಂದ್ರಕ್ಕೆ ಸುರಕ್ಷಿತವಾಗಿ ಬಂದು ಹೋಗಲು ಅನುಕೂಲ ವಾಗುವಂತೆ ವಾಹನ ಮತ್ತು ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ ಹಾಗೂ ಪ್ರತಿಯೊಂದು ಕೇಂದ್ರದ ಮಕ್ಕಳಿಗೂ ಪಠ್ಯಪುಸ್ತಕ, ಪೆನ್ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ವರದಿ ಸಲ್ಲಿಕೆ: ಜಿಲ್ಲೆಯ 33 ವಿಶೇಷ ತರಗತಿ ಕೇಂದ್ರಗಳಿಗೆ ಶಾಲಾ ದತ್ತು ಅಧಿಕಾರಿಗಳನ್ನು ನೇಮಿಸಲಾ ಗಿದ್ದು, ಇವರ
ಮೇಲ್ವಿಚಾರಣೆಗಾಗಿ ತಾಲೂಕಿ ಗೊಂದು ಅನ್ಯ ಇಲಾಖೆಯ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಶಾಲಾ ದತ್ತು ಅಧಿಕಾರಿಗಳು ತಮಗೆ ವಹಿಸಿರುವ ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಿ, 10ನೇ ತರಗತಿಯ ಮಕ್ಕಳ ಹಾಜರಾತಿ, ಕಲಿಕಾ ಆಸಕ್ತಿ ಇನ್ನಿತರ ವಿಷಯಗಳ ಕುರಿತು ಶಾಲಾ ಮುಖ್ಯೋಪಧ್ಯಾಯರು ಹಾಗೂ ಸಂಬಂಧಪಟ್ಟ ಶಿಕ್ಷಕರೊಂದಿಗೆ ಚರ್ಚಿಸಿ ಜಿಪಂಗೆ ವರದಿ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಗೈರಾಗದಂತೆ ನೋಡಿಕೊಳ್ಳಿ: ಎಸ್ಸೆಸ್ಸೆಲ್ಸಿ, ಫಲಿತಾಂಶ ಸುಧಾರಣಾ ಸಮಿತಿ ಸದಸ್ಯರು ಹಾಗೂ ಶಿಕ್ಷಣ ತಜ್ಞ ಡಾ.ನಾಗರಾ ಜಯ್ಯ ಮಾತನಾಡಿ, ಶಾಲೆಗೆ ಗೈರಾಗುವ 10ನೇ ತರಗತಿ ಮಕ್ಕಳ ಪೋಷಕರೊಂದಿಗೆ ಮಕ್ಕಳ ಭವಿಷ್ಯದ ಕುರಿತು ಚರ್ಚಿಸಿ ಶಾಲೆಗೆ ಹಾಜರಾಗುವಂತೆ ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಪರೀಕ್ಷೆ ಬಗೆಗಿರುವ ಭಯ ಹೋಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಪರೀಕ್ಷೆಯಲ್ಲಿ ಅಂಕಗಳನ್ನು ಸುಲಭವಾಗಿಗಳಿಸುವ ಬಗ್ಗೆ ಅನುಸರಿಸಬೇಕಾದ ಮಾರ್ಗದ ಕುರಿತು, ಶಿಕ್ಷಕರು ಮಕ್ಕಳಿಗೆ ಸರಳ ರೀತಿಯಲ್ಲಿ ಬೋಧಿಸಬೇಕು ಹಾಗೂ ಸೂಕ್ಷ್ಮ ಅಂಶಗಳನ್ನು ಗ್ರಹಿಸುವಂತೆ, ಕಲಿತ ವಿಷಯಗಳನ್ನು ಮನನ
ಮಾಡಿಕೊಳ್ಳುವಂತೆ ಹೇಳಬೇಕು ಎಂದರು.
ಜಿಲ್ಲೆಯ ನಾಲ್ಕು ತಾಲೂಕುಗಳ ವಿಷಯ ಸಂಪನ್ಮೂಲ ಶಿಕ್ಷಕರು ಭಾಗವಹಿಸಿ “ಗಣಿತದ ಪರಿಕಲ್ಪನೆಗಳು ಮತ್ತು ಮಕ್ಕಳ ಕಲಿಕೆ’ಯ ಕುರಿತು ಸಮಾಲೋಚನೆ ನಡೆಸಿದರು. ಶಿಕ್ಷಣಾಧಿಕಾರಿ ಹನುಮಂತರಾಯಪ್ಪ, ಬಯಾಪ ಎಂಡಿ ಹೇಮಂತ್ ಮಾದಯ್ಯ, ಎಎಂಡಿ ಪ್ರತಿಭಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡೆಲ್ ಅಧಿಕಾರಿಗಳು ಇದ್ದರು.