ಚಿನ್ನ ಮಾರಾಟಕ್ಕೆ ಬಂದಾತ ಜುವೆಲರಿ ಮಾಲಕ ವಿಚಾರಿಸಿದಾಗ ಪರಾರಿ
Team Udayavani, Jan 17, 2019, 12:30 AM IST
ಕುಂಬಳೆ: ಇಲ್ಲಿನ ರಾಜಧಾನಿ ಗೋಲ್ಡ್ ಚಿನ್ನದಂಗಡಿಗೆ 7 ಪವನಿನ ಸರವನ್ನು ಮಾರಾಟ ಮಾಡಲು ಬಂದ ವ್ಯಕ್ತಿಯೋರ್ವ, ಆಭರಣದ ಬಗ್ಗೆ ಹೆಚ್ಚಿನ ವಿವರ ಕೇಳಿದಾಗ ಸರವನ್ನು ಬಿಟ್ಟು ಪರಾರಿಯಾಗಿದ್ದಾನೆ.
ನೌಫಲ್ ಎಂಬಾತ ಜ.15ರಂದು ಜುವೆಲರಿಗೆ ಆಗಮಿಸಿ ಸರವನ್ನು ಮಾರಲು ಮುಂದಾದ. ಈತನ ಬಗ್ಗೆ ಸಂಶಯಗೊಂಡ ಅಂಗಡಿ ಮಾಲಕ ಅಬ್ದುಲ್ ಹಮೀದ್ ಅವರು ಆಭರಣದ ಮೂಲದ ಬಗ್ಗೆ ಪ್ರಶ್ನಿಸಿದಾಗ ಅದು ತನ್ನ ತಾಯಿಯದ್ದೆಂದು ಹೇಳಿದ. ಮತ್ತಷ್ಟು ವಿಚಾರಿಸಿದಾಗ ಉಪಾಯದಿಂದ ಸ್ಥಳದಿಂದ ಪರಾರಿಯಾಗಿದ್ದಾನೆ.
ಸಹಕಾರಿಯಾಯ್ತು ವಾಟ್ಸಪ್ ಸಂದೇಶ
ಕಾಸರಗೋಡಿನ ಅಡ್ಕತ್ತಬೈಲಿನ ಓರ್ವ ಯುವತಿಯ 7 ಪವ ನಿನ ಸರವೊಂದು ಮದುವೆ ಸಮಾರಂಭದಲ್ಲಿ ಕಳೆದು ಹೋಗಿದೆ. ಇದನ್ನು ಯಾರಾದರೂ ಮಾರಾಟ ಮಾಡಲು ಜುವೆಲರಿಗೆ ಬಂದರೆ ಜಾಗ್ರತೆ ವಹಿಸುವಂತೆ ವಾಟ್ಸಪ್ ಮೂಲಕ ಪ್ರಸಾರ ಮಾಡಲಾಗಿತ್ತು. ಇದು ಈ ಜುವೆಲರಿ ಮಾಲಕರಿಗೂ ತಿಳಿದಿತ್ತು. ಇದೇ ಕಾರಣದಿಂದ ಅವರು ನೌಫಲ್ನನ್ನು ಹೆಚ್ಚು ವಿಚಾರಿಸಲು ಮುಂದಾಗಿದ್ದರು. ತಾನು ಸಿಕ್ಕಿ ಬೀಳುವುದು ಖಚಿತ ಎಂದಾದಾಗ ಆತ ಮೊಬೈಲ್ ಮೂಲಕ ಮಿತ್ರನಲ್ಲಿ ಮಾತನಾಡುವಂತೆ ನಟಿಸಿ ಅಂಗಡಿಯಿಂದ ಹೊರ ಹೋಗಿ ಅಲ್ಲಿಂದ ಪರಾರಿಯಾದ.
ಬಳಿಕ ಜುವೆಲರಿ ಮಾಲಕರು ಕುಂಬಳೆ ಪೊಲೀಸ್ ಠಾಣೆಗೆ ತೆರಳಿ ಆಭರಣವನ್ನು ಎಸ್. ಐ. ಜಯರಾಜ್ ಅವರಿಗೆ ಹಸ್ತಾಂತರಿಸಿದರು. ಪೊಲೀಸರು ಚಿನ್ನದ ಅಂಗಡಿಗೆ ಆಗಮಿಸಿ ಸಿಸಿಕೆಮರಾ ಚಿತ್ರ ಪರಿಶೀಲಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.