ಪತ್ರಕರ್ತನ ಕೊಲೆ ಕೇಸು: ಗುರ್ಮೀತ್, ಇತರ ಮೂವರಿಗೆ ಜೀವಾವಧಿ ಜೈಲು
Team Udayavani, Jan 17, 2019, 1:34 PM IST
ಹೊಸದಿಲ್ಲಿ : ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣದಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಗೆ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿ ಇಂದು ಗುರುವಾರ ತೀರ್ಪು ನೀಡಿದೆ.
ಇದೇ ಪ್ರಕರಣದ ಇನ್ನೂ ಮೂವರು ಅಪರಾಧಿಗಳಾಗಿರುವ ಕುಲದೀಪ್ ಸಿಂಗ್, ನಿರ್ಮಲ್ ಸಿಂಗ್ ಮತ್ತು ಕೃಷನ್ ಲಾಲ್ ಗೆ ಕೂಡ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ನೀಡಿದೆ.
ಮಾತ್ರವಲ್ಲ ಈ ಎಲ್ಲರಿಗೂ ತಲಾ 50,000 ರೂ. ದಂಡವನ್ನು ಕೂಡ ಕೋರ್ಟ್ ವಿಧಿಸಿದೆ.
ನ್ಯಾಯಾಲಯ ಇಂದು ಈ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕಟಿಸಿತು.
ಪಂಚಕುಲ ವಿಶೇಷ ಸಿಬಿಐ ನ್ಯಾಯಾಲಯ ಕಳೆದ ವಾರ ಡೇರಾ ಮುಖ್ಯಸ್ಥ ಮತ್ತು ಇತರ ಮೂವರನ್ನು ಕೊಲೆ ಅಪರಾಧಿಗಳೆಂದು ಘೋಷಿಸಿತ್ತು.
ಈ ಅಪರಾಧಿಗಳಿಗೆ ಮರಣ ದಂಡನೆಯ ಶಿಕ್ಷೆ ವಿಧಿಸಬೇಕೆಂದು ಹತ ಪತ್ರಕರ್ತನ ಕುಟುಂಬದವರು ಆಗ್ರಹಿಸಿದ್ದರು. ಪತ್ರಕರ್ತ ಛತ್ರಪತಿ ಅವರನ್ನು 2002ರ ಅಕ್ಟೋಬರ್ ನಲ್ಲಿ ಹರಿಯಾಣದ ಸಿರ್ಸಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಡೇರಾ ಮುಖ್ಯಸ್ಥ ರಾಮ್ ರಹೀಮ್ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಎಸಗುತ್ತಿದ್ದಾನೆ ಎಂದು ಆರೋಪಿಸುವ ಪತ್ರವನ್ನು ಛತ್ರಪತಿ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿದ್ದರು.
ಈ ಕೊಲೆ ಪ್ರಕರಣದಲ್ಲಿ ರಾಮ್ ರಹೀಮ್ ನನ್ನು ಮುಖ್ಯ ಸಂಚುಕೋರನೆಂದು ಹೆಸರಿಸಲಾಗಿತ್ತು.