ರಸ್ತೆ-ರೈಲು ಸಂಪರ್ಕ, ವಿಮಾನಯಾನ ಸೌಲಭ್ಯ
Team Udayavani, Feb 1, 2019, 7:05 AM IST
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಸ್ತೆ, ರೈಲು ಹಾಗೂ ವಿಮಾನಯಾನ ಸೌಲಭ್ಯ ಉತ್ತಮಪಡಿಸಲು ಕ್ರಮವಹಿಸಿದ್ದಾಗಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಹೆದ್ದಾರಿ ಅಭಿವೃದ್ಧಿ: ಮೈಸೂರು – ಬೆಂಗಳೂರು ಹೆದ್ದಾರಿ ಮೇಲಿನ ಒತ್ತಡದ ಹಿನ್ನೆಲೆಯಲ್ಲಿ ಈ ನಗರಗಳ ನಡುವೆ ದಶಪಥದ ರಸ್ತೆ ನಿರ್ಮಾಣ ಮಾಡುವ 7 ಸಾವಿರ ಕೋಟಿ ಮೊತ್ತದ ಯೋಜನೆ ಯನ್ನು 2018ರ ಫೆ.19ರಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಘೋಷಿಸಿದ್ದರು. ಈ ಯೋಜನೆಯ ಶಿಲಾನ್ಯಾಸವಾಗಿದ್ದು, ಕಾಮಗಾರಿ ಆರಂಭವಾಗಬೇಕಿದೆ. ನಗರದ ವರ್ತುಲ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 44 ಕೋಟಿ ಅನುದಾನ ನೀಡಿದೆ. ಮೈಸೂರು ನಗರದ ಸುತ್ತಲಿನ 42 ಕಿ.ಮೀ ಉದ್ದದ ಹೊರ ವರ್ತುಲ ರಸ್ತೆಯ ಬದಿಯಲ್ಲಿ ಹಸಿರೀಕರಣಕ್ಕೆ ಒತ್ತು ನೀಡಿ, 6 ಸಾವಿರ ಹೆಬ್ಬೇವು, 8 ಸಾವಿರ ಹಣ್ಣಿನ ಗಿಡಗಳನ್ನು ನೆಡಲಾಗಿದೆ.
ರೈಲು ಸೇವೆ: ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಮಂಜೂರಾಗಿದ್ದ ಮೈಸೂರು- ಬೆಂಗಳೂರು ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ ಹಾಗೂ ವಿದ್ಯುದ್ದೀಕರಣ ಯೋಜನೆ ಯುಪಿಎ ಅವಧಿಯಲ್ಲಿ ನೆನೆಗುದಿಗೆ ಬಿದ್ದಿತ್ತು. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಕಾಲದ ಮದ್ದಿನಮನೆ ಜೋಡಿ ರೈಲು ಮಾರ್ಗಕ್ಕೆ ಅಡ್ಡಿಯಾಗಿತ್ತು. 13 ಕೋಟಿ ಹೆಚ್ಚುವರಿ ಅನುದಾನದಲ್ಲಿ ಮದ್ದಿನಮನೆ ಯನ್ನು ಸ್ಥಳಾಂತರಿಸಿ ಜೋಡಿ ರೈಲು ಮಾರ್ಗ ಹಾಗೂ ವಿದ್ಯುದ್ದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲಾಯಿತು. 2018ರ ಫೆ.19ರಂದು ಪ್ರಧಾನಿ ನರೇಂದ್ರಮೋದಿ ಮೈಸೂರು ರೈಲು ನಿಲ್ದಾಣದಲ್ಲಿ ಈ ಕಾಮಗಾರಿಯನ್ನು ಉದ್ಘಾಟಿಸಿದರು.
ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ವಿಶ್ವ ಮಾನವ ಎಕ್ಸ್ಪ್ರೆಸ್, ಮೈಸೂರು-ಉದಯ್ಪುರ ಪ್ಯಾಲೇಸ್ ಕ್ವೀನ್ ಎಕ್ಸ್ಪ್ರೆಸ್, ಮೈಸೂರು-ವಾರಾಣಸಿ ಎಕ್ಸ್ಪ್ರೆಸ್, ಮೈಸೂರು-ಬೆಂಗಳೂರು ನಡುವೆ ಮೆಮು ರೈಲು ಸೇವೆ ಆರಂಭ, ಮೈಸೂರು-ಹುಬ್ಬಳ್ಳಿ ವಿಶ್ವಮಾನವ ಎಕ್ಸ್ಪ್ರೆಸ್ ಅಶೋಕಪುರಂವರೆಗೆ ವಿಸ್ತರಣೆ, ಅಂಧರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಮೈಸೂರು ರೈಲು ನಿಲ್ದಾಣದಲ್ಲಿ ಬ್ರೈಲ್ಲಿಪಿ ಫಲಕಗಳ ಅಳವಡಿಕೆ.
ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಅನುಕೂಲಕ್ಕಾಗಿ ಮೈಸೂರು ರೈಲು ನಿಲ್ದಾಣದಲ್ಲಿ ಲಿಫ್ಟ್, ಎಸ್ಕಲೇಟರ್ ಸ್ಥಾಪನೆ, ಬ್ಯಾಟರಿ ಕಾರು ಸೇವೆ, ಈ-ಶೌಚಾಲಯ ನಿರ್ಮಾಣ. ಕೈಗಾರಿಕೆಗಳ ಅನುಕೂಲಕ್ಕಾಗಿ ಕಡಕೊಳದಲ್ಲಿ 59 ಕೋಟಿ ರೂ. ವೆಚ್ಚದ ಗೂಡ್ಸ್ ಟರ್ಮಿನಲ್ ಮಂಜೂರು. 55 ಎಕರೆ ಪ್ರದೇಶದಲ್ಲಿ ಈ ಗೂಡ್ಸ್ ಟರ್ಮಿನಲ್ ತಲೆ ಎತ್ತಲಿದ್ದು, ಇದರಿಂದ ಕೂರ್ಗಳ್ಳಿ, ಕಡಕೊಳ, ಕೈಗಾರಿಕಾ ಪ್ರದೇಶಗಳಿಗೆ ಅನುಕೂಲ ವಾಗಲಿದೆ.
ಕೊಡಗಿಗೆ ರೈಲು: ರೈಲು ಸಂಪರ್ಕವಿಲ್ಲದ ಏಕೈಕ ಜಿಲ್ಲೆ ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಅಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಸಾಗಣೆಯ ಅನುಕೂಲಕ್ಕಾಗಿ 667 ಕೋಟಿ ರೂ. ಮೊತ್ತದ ಮೈಸೂರು-ಕುಶಾಲನಗರ (ಪಿರಿಯಾ ಪಟ್ಟಣದ ಕೊಪ್ಪ) ನಡುವೆ ನೂತನ ರೈಲು ಮಾರ್ಗ ಮಂಜೂರಾಗಿದೆ. ಕೇಂದ್ರ ರಸ್ತೆ ನಿಧಿಯಡಿ ಕೊಡಗಿನ ಎರಡು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗೆ 34 ಕೋಟಿ ಮಂಜೂರಾಗಿದೆ.
ವಿಮಾನಯಾನ: ಗಣ್ಯರ ವಿಮಾನಗಳ ಹಾರಾಟ ಕ್ಕಷ್ಟೇ ಸೀಮಿತವಾಗಿದ್ದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಒತ್ತು ನೀಡಿದ್ದು, ಉಡಾನ್ ಯೋಜನೆಯಡಿ ಮೈಸೂರು- ಚೆನ್ನೈ ನಡುವೆ ವರ್ಷದ ಹಿಂದೆ ವಿಮಾನಯಾನ ಆರಂಭವಾಗಿದ್ದು, ಸದ್ಯದಲ್ಲೇ ಇನ್ನೂ ಆರು ನಗರಗಳಿಗೆ ವಿಮಾನ ಯಾನ ಆರಂಭವಾಗಲಿದೆ.
ಪಾಸ್ಪೋರ್ಟ್ ಸೇವಾ ಕೇಂದ್ರ: ದೇಶ ದಲ್ಲಿಯೇ ಮೊಟ್ಟ ಮೊದಲು ಅಂಚೆ ಕಚೇರಿಯಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭವಾಗಿದ್ದು, ಮೈಸೂರಿನಲ್ಲಿ. ನಗರದ ಕೆಆರ್ಎಸ್ ರಸ್ತೆಯಲ್ಲಿ ರುವ ಮೇಟಗಳ್ಳಿಯ ಅಂಚೆಕಚೇರಿಯಲ್ಲಿ ಕಾರ್ಯಾರಂಭ ಮಾಡಿರುವ ಪಾಸ್ಪೋರ್ಟ್ ಸೇವಾ ಕೇಂದ್ರದಲ್ಲಿ ಈವರೆಗೆ 4 ಸಾವಿರ ಜನರು ಪಾಸ್ಪೋರ್ಟ್ ಮಾಡಿಸಿದ್ದಾರೆ.
ಮೇಲ್ಸೇತುವೆ ನಿರ್ಮಾಣ: ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ ಮೈಸೂರಿನ ಮೊದಲ ಮೇಲ್ಸೇತುವೆ (ಫ್ಲೈಓವರ್) ನಿರ್ಮಾಣಕ್ಕೆ ಅಮೃತ್ ಯೋಜನೆಯಡಿ 19 ಕೋಟಿ ರೂ. ನೀಡಲಾಗಿದೆ.
•ಘನತ್ಯಾಜ್ಯ ಸಂಗ್ರಹಣಾ ಘಟಕ: ಮೈಸೂರು ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವಿದ್ಯಾರಣ್ಯನಲ್ಲಿ ಒಂದೇ ಕಡೆ ವಿಲೇವಾರಿ ಮಾಡು ತ್ತಿದ್ದರಿಂದ ಉಂಟಾಗಿದ್ದ ಸಮಸ್ಯೆ ನಿವಾರಿಸಲು ಕೆಸರೆ ಮತ್ತು ರಾಯನಕೆರೆಗಳಲ್ಲಿ ಹೊಸದಾಗಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಸ್ವಚ್ಛ ಭಾರತ್ ಮಿಷನ್ನಡಿ 53.7 ಕೋಟಿ ಮಂಜೂರಾಗಿದೆ. ನಗರದ ಲಿಂಗಾಂಬುಧಿ ಕೆರೆಯನ್ನು 1.4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಮೈಸೂರು ನಗರದ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ವಿಜಯನಗರ ಮೊದಲ ಹಂತದಲ್ಲಿ 29 ಕೋಟಿ ವೆಚ್ಚದಲ್ಲಿ 3 ಕೋಟಿ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಬೃಹತ್ ಟ್ಯಾಂಕ್ ನಿರ್ಮಾಣ. ಮೈಸೂರು ಜಿಲ್ಲಾಧಿಕಾರಿಗಳ ನೂತನ ಕಚೇರಿ ನಿರ್ಮಾಣಕ್ಕೆ ಸಿದ್ಧಾರ್ಥ ನಗರ ಬಡಾವಣೆಯಲ್ಲಿನ ಕೇಂದ್ರ ಸರ್ಕಾರಿ ಸ್ವಾಮ್ಯದ ಜರ್ಮನ್ ಪ್ರಸ್ ಆವರಣದಲ್ಲಿ 15 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರ ಬಿಟ್ಟುಕೊಟ್ಟಿದೆ.
ಕೆಆರ್ಎಸ್ ರಸ್ತೆಯಲ್ಲಿ 9 ಕೋಟಿ ವೆಚ್ಚದಲ್ಲಿ ಕಾರ್ಮಿಕರ ವಿಮಾ ಆಸ್ಪತ್ರೆ, 35 ಭಾರತೀಯ ಜನೌಷಧಿ ಕೇಂದ್ರಗಳ ಸ್ಥಾಪನೆ, ಮೈಸೂರು ನಗರದಲ್ಲಿ 25 ಕೋಟಿ ವೆಚ್ಚದಲ್ಲಿ ಎಸ್ಟಿಪಿಐ ಕೇಂದ್ರ ಆರಂಭ ಮಾಡಲಾಗಿದೆ.
ತಂಬಾಕು ರೈತರಿಗೆ ಅನುಕೂಲ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕುಗಳ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಬೆಳೆಗಾರರ ಅನುಕೂಲಕ್ಕಾಗಿ ಎಸ್ಒಪಿ ರಸಗೊಬ್ಬರವನ್ನು ಕಡಿಮೆ ದರದಲ್ಲಿ ದೊರೆಯುವಂತೆ ಮಾಡಲಾಗಿದೆ.