ಬಸ್ಪಾಸ್, ರೈತ ಬೆಳಕು ಯೋಜನೆ ಇಲ್ಲ: ಸಿದ್ದು
Team Udayavani, Feb 9, 2019, 5:48 AM IST
ಮೈಸೂರು: ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಆಧಾರದ ಮೇಲೆ ಬಜೆಟ್ ಮಂಡನೆಯಾಗಿದೆ. ಸಮಗ್ರ ವಾದ ಉತ್ತಮ ಬಜೆಟ್ ಇದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಕನಕ ಸಮು ದಾಯ ಭವನ ಉದ್ಘಾಟನೆಗೆ ಆಗಮಿಸಿದ್ದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನಿನ್ನೂ ಬಜೆಟ್ ಸಂಪೂರ್ಣವಾಗಿ ಓದಿಲ್ಲ. ಬಜೆಟ್ ಪ್ರತಿಯನ್ನು ಓದಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದ ಅವರು, ನಮ್ಮ ಸರ್ಕಾರದ ಕೃಷಿಭಾಗ್ಯ, ಕ್ಷೀರಭಾಗ್ಯ ಯೋಜನೆಗಳು ಮುಂದುವರಿದಿವೆ. ನಾನು ಮಂಡಿಸಿದ್ದ ಬಜೆಟ್ನಲ್ಲಿ ಹೇಳಲಾಗಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ಪಾಸ್, ರೈತ ಬೆಳಕು ಎರಡೂ ಯೋಜನೆಗಳು ಕಾಣುತ್ತಿಲ್ಲ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಜೊತೆಗೆ ಮಾತನಾಡುತ್ತೇನೆ ಎಂದರು.
ಜೆಡಿಎಸ್ ಶಾಸಕರ ಪುತ್ರ ಶರಣಗೌಡಗೆ ಆಮಿಷವೊಡ್ಡಿ ಯಡಿಯೂರಪ್ಪ ಬಯಲಾಗಿದ್ದಾರೆ. ಇಬ್ಬರ ನಡುವಿನ ಸಂಭಾಷಣೆಯ ಆಡಿಯೋ ಬಿಡುಗಡೆಯಾದ ನಂತರ ಆಡಿಯೋ ಮಿಮಿಕ್ರಿ ಅನ್ನುತ್ತಾರೆ. ಇದಕ್ಕಿಂತ ನಗೆಪಾಟಲು ಇನ್ನೊಂದಿಲ್ಲ. ಯಡಿಯೂರಪ್ಪ ಅವರಂಥ ಭಂಡರು ಯಾರು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಳೆ ದೆಹಲಿಗೆ: ನಾನು ತರಾತುರಿಯಲ್ಲೇ ಮೈಸೂರಿಗೆ ಬಂದಿದ್ದೇನೆ. ರಾಜ್ಯ ರಾಜಕಾರಣದಲ್ಲಿ ಏನಾಗುತ್ತಿದೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ನಾನು ರಾತ್ರಿಯೇ ಬೆಂಗಳೂರಿಗೆ ಹೋಗಿ, ಬೆಳಗ್ಗೆ ದೆಹಲಿಗೆ ಹೋಗಬೇಕು.ಅದಕ್ಕಾಗಿ ವಿಶೇಷ ವಿಮಾನದಲ್ಲಿ ಬರಬೇಕಾಯಿತು ಎಂದು ಸಿದ್ದರಾಮಯ್ಯ ತಿಳಿಸಿದರು.