ಬಾರ್ಡರ್ ಸಿನೆಮಾ ಕೈದೋರಿತು ಸೇನೆಯತ್ತ
Team Udayavani, Feb 12, 2019, 1:00 AM IST
ಕಾರ್ಕಳ: ಅದು ಇಸವಿ 1997. ಭಾರತ- ಪಾಕಿಸ್ಥಾನದ ನಡುವಣ 1971ರ ಯುದ್ಧದ ಲೋಂಗೇವಾಲಾ ಕದನವನ್ನು ಆಧರಿಸಿದ “ಬಾರ್ಡರ್’ ಹಿಂದಿ ಸಿನೆಮಾ ಬಿಡುಗಡೆಗೊಂಡಿತ್ತು. ದೇಶದ ಲಕ್ಷಾಂತರ ಮಂದಿಯಲ್ಲಿ ದೇಶಪ್ರೇಮದ ಕಿಚ್ಚು ಹಚ್ಚಿತ್ತು. ಆ ಸಿನೆಮಾವನ್ನು ನೋಡಿದವರಲ್ಲಿ ಕುಕ್ಕುಂದೂರು ಗ್ರಾಮದ ಪ್ರವೀಣ್ ಕುಮಾರ್ ಶೆಟ್ಟಿ ಅವರೂ ಓರ್ವರು. ಆಗ ಅವರು ಪದವಿಪೂರ್ವ ಕಾಲೇಜು ವಿದ್ಯಾರ್ಥಿಯಾಗಿದ್ದರು.
ಪ್ರವೀಣ್ ಆ ಸಿನೆಮಾವನ್ನು ಮತ್ತೆ ಮತ್ತೆ ನೋಡಿದರು, ಒಂದೆ ರಡು ಬಾರಿಯಲ್ಲ; ಭರ್ತಿ ನಾಲ್ಕು ಬಾರಿ! ನೋಡಿ ಸುಮ್ಮನಿರಲಿಲ್ಲ. ಸಿನೆಮಾ ಅವರಲ್ಲಿ ಸೈನಿಕ ಜೀವನದ ಹಂಬಲವನ್ನು ಮೂಡಿಸಿತು, ಸೇನೆ ಸೇರಬೇಕು ಎಂಬ ಹಠ ಹಿಡಿಸಿತು. 1999ರಲ್ಲಿ ಅತ್ತ ಕಾರ್ಗಿಲ್ ಯುದ್ಧ ನಡೆಯುತ್ತಿದ್ದರೆ ಇತ್ತ ಮಂಗಳೂರಿನಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಪ್ರವೀಣ್ ಕುಮಾರ್ ಭಾಗವಹಿ ಸಿದರು. ಆಯ್ಕೆಯೂ ಆದರು.
ಪ್ರವೀಣ್ ಕುಮಾರ್ 19 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೇನೆಗೆ ನೇಮಕಗೊಂಡ ಬಳಿಕ ಹೈದರಾಬಾದ್ನಲ್ಲಿ ಸೈನಿಕ ತರಬೇತಿ ಪಡೆದರು. 2001ರಲ್ಲಿ ಹರಿಯಾಣದ ಹಿಸ್ಸಾರ್ನಲ್ಲಿ ಸೇನೆಯ ಸೇವೆಗೆ ಸೇರ್ಪಡೆ ಯಾದ ಬಳಿಕ ಫರೀದ್ಕೋಟ್, ಲೇಹ್ ಲಢಾಕ್, ಜಮ್ಮು-ಕಾಶ್ಮೀರ, ಅಸ್ಸಾಂ, ಸಿಕಂದರಾಬಾದ್ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2018ರಿಂದ ಈಚೆಗೆ ಪಂಜಾಬ್ನಲ್ಲಿ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾರ್ಡರ್ ಸಿನೆಮಾ ನೋಡಿ ಆರ್ಮಿಗೆ ಸೇರಬೇಕೆಂಬ ಹಂಬಲ ಚಿಗುರೊಡೆಯಿತು. ರವಿ ಎಂಬವರಲ್ಲಿ ಸೇನಾ ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆದೆ. ಸ್ವಲ್ಪ ಸಮಯದ ಬಳಿಕ ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯಲಿರುವ ಬಗ್ಗೆ ಅವರು ತಿಳಿಸಿದ್ದರು. ರ್ಯಾಲಿಯಲ್ಲಿ ಭಾಗವಹಿಸಿ, ಸೇನೆಗೆ ಸೇರ್ಪಡೆ ಗೊಂಡೆ – ಇದು ನೇಮಕಾತಿಯ ಬಗ್ಗೆ ಪ್ರವೀಣ್ ಮಾತು.
ಆರು ಮಂದಿ ಭಾಗಿ
ಸೇನೆಯ ಸಂದರ್ಶನಕ್ಕಾಗಿ ಆಗ ಪ್ರವೀಣ್ ತನ್ನ ಐದು ಮಂದಿ ಗೆಳೆಯರ ಜತೆಗೆ ಮಂಗಳಾ ಕ್ರೀಡಾಂಗಣಕ್ಕೆ ಹೋಗಿದ್ದರಂತೆ. ಸೇನಾ ನೇಮಕಾತಿ ಪ್ರಕ್ರಿಯೆ ಮುಗಿಸಿ ಮನೆಗೆ ವಾಪಸಾಗಿ ಮೂರು ತಿಂಗಳ ಬಳಿಕ ಎಲ್ಲರೂ ಆರ್ಮಿಗೆ ಆಯ್ಕೆಯಾಗಿರುವುದು ಪತ್ರದ ಮೂಲಕ ತಿಳಿದುಬಂತು. ರ್ಯಾಲಿಗೆ ಹಾಜರಾಗಿದ್ದ ಪ್ರವೀಣ್, ಅಶೋಕ್, ರಾಘವೇಂದ್ರ, ಮೋಹನ್, ಯತೀಶ್ ಕರ್ತವ್ಯಕ್ಕೆ ಹಾಜರಾದರು. ಇನ್ನೋರ್ವರು ಮಾತ್ರ ಹಿಂಜರಿದರು. ತನ್ನ ಒಬ್ಬನೇ ಗಂಡುಮಗ ಆರ್ಮಿಗೆ ಸೇರುವುದು ಆತನ ತಾಯಿಗೆ ಇಷ್ಟವಿಲ್ಲದುದು ಕಾರಣವಾಗಿತ್ತು.
ನಾಲ್ಕು ಬಾರಿ “ಬಾರ್ಡರ್’ ನೋಡಿದೆ
ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ “ಬಾರ್ಡರ್’ ಮೂವಿಯನ್ನು ನಾಲ್ಕು ಬಾರಿ ನೋಡಿದ್ದೆ. ಅದಕ್ಕಾಗಿಯೇ ಅಪ್ಪನ ಕಿಸೆಯಿಂದ 5 ರೂ. ಕದಿಯುತ್ತಿದ್ದೆ ಎಂದು ಪ್ರವೀಣ್ ನೆನಪು ಮಾಡಿಕೊಂಡು ನಗುತ್ತಾರೆ.
ಮಗ ಆರ್ಮಿ ಆಫೀಸರ್ ಆಗಬೇಕು
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಅತೀವ ಹೆಮ್ಮೆ ಎನಿಸಿದೆ. ನಾನು ಯೋಧನಾಗಿರುವ ಬಗ್ಗೆ ನಮ್ಮ ಮನೆಯ ಎಲ್ಲರಿಗೂ ಖುಷಿಯಿದೆ, ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಇಬ್ಬರು ಮಕ್ಕಳಲ್ಲಿ ಒಬ್ಬನನ್ನಾದರೂ ಆರ್ಮಿ ಆಫೀಸರ್ ಆಗಿಸಬೇಕು ಎಂಬ ಕನಸಿದೆ.
-ಪ್ರವೀಣ್ ಕುಮಾರ್ ಪಿ. ಶೆಟ್ಟಿ
ಆರ್ಮಿಯಲ್ಲಿರುವುದು ಅಭಿಮಾನ
ನನ್ನವರು ಮಿಲಿಟರಿಯಲ್ಲಿದ್ದು ದೇಶಸೇವೆ ಮಾಡುತ್ತಿದ್ದಾರೆ ಎಂಬ ಹೆಮ್ಮೆ, ಗೌರವ ನನಗಿದೆ. ಅಲ್ಲಿನ ಪರಿಸ್ಥಿತಿ ಕುರಿತಾಗಿ ಯಾವತ್ತೂ ಅವರು ನಮ್ಮೊಂದಿಗೆ ಹೇಳಿಕೊಂಡದ್ದಿಲ್ಲ. ಆರ್ಮಿಯಲ್ಲಿದ್ದಾರೆ ಎಂಬ ಅಭಿಮಾನದಿಂದಲೇ ಅವರನ್ನು ಮದುವೆಯಾಗಲು ಒಪ್ಪಿದ್ದೆ.
-ಮಮತಾ ಪ್ರವೀಣ್ ಪ್ರವೀಣ್ ಅವರ ಪತ್ನಿ
ಮದುವೆಯಾಗಿ ಮೂರೇ ದಿನಗಳಲ್ಲಿ ಕರ್ತವ್ಯ ಕರೆಯಿತು
ಪ್ರವೀಣ್ ಕುಮಾರ್ ಅವರಿಗೆ 2008ರ ಅ. 18ರಂದು ಮಮತಾ ಅವರ ಜತೆಗೆ ಮದುವೆಯಾಯಿತು. ಅದಾಗಿ ಮೂರೇ ದಿನಗಳಲ್ಲಿ ಕರ್ತವ್ಯ ಮರಳಿ ಕರೆಯಿತು. ಅ.21ರಂದು ಪ್ರವೀಣ್ ಜಮ್ಮುವಿಗೆ ವಾಪಸ್ ತೆರಳಿದ್ದರು. ಆ ಕಾಲದಲ್ಲಿ ಮೊಬೈಲ್ ಫೋನ್ ಅಷ್ಟಾಗಿ ಬಳಕೆಗೆ ಬಂದಿರಲಿಲ್ಲ. ಜತೆಗೆ ಜಮ್ಮುವಿನಲ್ಲಿ ರಾಷ್ಟ್ರೀಯ ರೈಫಲ್ಸ್ನವರು ಮೊಬೈಲ್ ಬಳಸುವಂತೆಯೂ ಇರಲಿಲ್ಲ.
ಕಣ್ಣೆದುರೇ ಹೊತ್ತಿ ಉರಿದ ಬಸ್
2007ರಲ್ಲಿ ಪ್ರವೀಣ್ ಕುಮಾರ್ ಜಮ್ಮು- ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವು ಸಹೋದ್ಯೋಗಿಗಳು ರಜೆ ಪಡೆದು ಮನೆಗೆ ತೆರಳುವ ಸಡಗರದಲ್ಲಿದ್ದರು. ಅವರು ಬಸ್ ಏರಿ ಕುಪ್ವಾಡ್ ತಲುಪಿದಾಗ ಬಾಂಬ್ ಸಿಡಿದು ಬಸ್ ಹೊತ್ತಿ ಉರಿಯಿತು. ಆ ಉಗ್ರ ಕೃತ್ಯದಲ್ಲಿ 14 ಮಂದಿ ಸಾವನ್ನಪ್ಪಿದ್ದರು, ಅನೇಕರು ಗಾಯಗೊಂಡಿದ್ದರು. ಪ್ರವೀಣ್ ಕಣ್ಣೆದುರೇ ನಡೆದ ಈ ಘಟನೆ ಮರೆಯಲಾಗದ್ದು.
ದೀಪಾವಳಿ ಆಚರಣೆ
ಪ್ರವೀಣ್ ಸೇನೆ ಸೇರಿದ ಬಳಿಕ ಈ 19 ವರ್ಷಗಳಲ್ಲಿ ಕುಟುಂಬದವರ ಜತೆ ದೀಪಾವಳಿ ಆಚರಣೆಗೆ ಅವಕಾಶ ಸಿಕ್ಕಿದ್ದು ಎರಡು ಬಾರಿ ಮಾತ್ರ. ಕಳೆದ ದೀಪಾವಳಿ ಸಂದರ್ಭ ಊರಿಗೆ ಬಂದಿದ್ದರು. ಆಗ ನಡೆದ ಕುಕ್ಕುಂದೂರು ಉತ್ಸವದಲ್ಲಿ ಆತ್ಮೀಯ ಗೆಳೆಯರು ಒಟ್ಟು ಸೇರಿ ಅವರನ್ನು ಪ್ರೀತಿಯಿಂದ ಸಮ್ಮಾನಿಸಿದ್ದರು.
ಸುಖೀ ಕುಟುಂಬ
ಪ್ರವೀಣ್ ಅವರದ್ದು ಅವಿಭಕ್ತ ಕುಟುಂಬ. ತಂದೆ ಪ್ರಕಾಶ್ ಶೆಟ್ಟಿ, ತಾಯಿ ಜಯಂತಿ, ಪತ್ನಿ ಮಮತಾ, ಮಕ್ಕಳಾದ ವಿರಾಜ್, ವೈಷ್ಣವ್, ತಮ್ಮ ಪ್ರಾಣೇಶ್ ಶೆಟ್ಟಿ, ನಾದಿನಿ ಅಮಿತಾ, ತಮ್ಮನ ಮಗ ಚಿನ್ನು – ಹೀಗೆ ಸುಖೀ ಕುಟುಂಬ.
- ರಾಮಚಂದ್ರ ಬರೆಪ್ಪಾಡಿ