ರಫೇಲ್: ಭ್ರಷ್ಟಾಚಾರ ತಡೆ ನಿಬಂಧನೆ ರದ್ದು
Team Udayavani, Feb 12, 2019, 12:30 AM IST
ಹೊಸದಿಲ್ಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದರೆ ದಂಡ ವಿಧಿಸುವ ಅವಕಾಶವನ್ನು ಕೇಂದ್ರ ಸರಕಾರ ರದ್ದುಗೊಳಿಸಿತ್ತು ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದ್ದು, ಸರಕಾರ ಹಾಗೂ ವಿಪಕ್ಷಗಳ ಮಧ್ಯೆ ಮತ್ತೂಂದು ಸುತ್ತಿನ ವಾಗ್ಧಾಳಿಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಒಂದು ನಿರ್ಲಿಪ್ತ ಖಾತೆ ಸ್ಥಾಪಿಸಿ, ಅದರ ಮೂಲಕ ಪಾವತಿ ಮಾಡುವ ಹಣಕಾಸು ಸಲಹೆಗಾರರ ಶಿಫಾರಸನ್ನೂ ಸರಕಾರ ನಿರ್ಲಕ್ಷಿಸಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ. ಭ್ರಷ್ಟಾಚಾರ ನಿರ್ಮೂಲನೆಯನ್ನು ಎನ್ಡಿಎ ಸರಕಾರ ಹಿಂದಿನಿಂದಲೂ ಪ್ರಸ್ತಾವಿಸುತ್ತಿರುವ ಹಿನ್ನೆಲೆಯಲ್ಲಿ ಈ ಆರೋಪ ಮಹತ್ವ ಪಡೆದಿದ್ದು, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಭಾರೀ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.
ಒಪ್ಪಂದಕ್ಕೆ ಸಂಬಂಧಿಸಿ ಮಾತುಕತೆ ತಂಡ ಸದಸ್ಯರು ಈ ನಿಬಂಧನೆಗಳನ್ನು ತೆಗೆದು ಹಾಕುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಭಾರತದಿಂದ ಒಪ್ಪಂದಕ್ಕೆ ಸಂಬಂಧಿಸಿದ ಹಣವನ್ನು ಫ್ರಾನ್ಸ್ನ ಪೂರೈಕೆದಾರರಿಗೆ ನೀಡಲಾಗುತ್ತದೆಯೇ ವಿನಾ ಫ್ರಾನ್ಸ್ನ ಸರಕಾರಕ್ಕೆ ನೀಡುತ್ತಿಲ್ಲ. ಹೀಗಾಗಿ ಭ್ರಷ್ಟಾಚಾರ ತಡೆ ಸಂಬಂಧದ ನಿಬಂಧನೆ ತೆಗೆದುಹಾಕುವುದು ಸರಿಯಲ್ಲ ಎಂದು ಈ ಸದಸ್ಯರು ಟಿಪ್ಪಣಿಯಲ್ಲಿ ನಮೂದಿಸಿದ್ದರು ಎನ್ನಲಾಗಿದೆ. ಅಲ್ಲದೆ, ಇದೇ ಕಾರಣಕ್ಕೆ ಫ್ರಾನ್ಸ್ ಸರಕಾರ ಕೇವಲ ಲೆಟರ್ ಆಫ್ ಕಂಫರ್ಟ್ ನೀಡಿದ್ದು, ಬ್ಯಾಂಕ್ ಗ್ಯಾರಂಟಿ ಯನ್ನು ನೀಡಿಲ್ಲ. ಲೆಟರ್ ಆಫ್ ಕಂಫರ್ಟ್ ಕಾನೂನು ಬದ್ಧವಲ್ಲ ಎಂದು ವರದಿಯಲ್ಲಿ ವಿವರಿಸ ಲಾಗಿದೆ. ಒಟ್ಟು 8 ನಿಯಮಗಳನ್ನು ಉಲ್ಲಂ ಸಲಾಗಿದ್ದು, ಈ ಪೈಕಿ 2 ನಿಯಮಗಳ ಉಲ್ಲಂಘನೆ ಪ್ರಶ್ನಾರ್ಹ ವಾಗಿದೆ ಎಂದು ವರದಿ ಹೇಳಿದೆ.
ಯುಪಿಎ ಸರಕಾರದ ನೀತಿ
ರಫೇಲ್ ಒಪ್ಪಂದದಲ್ಲಿ ಯುಪಿಎ ಮಾಡಿಕೊಂಡಿದ್ದ ನಿಯಮಗಳನ್ನೇ ಎನ್ಡಿಎ ಸರಕಾರ ಅನುಸರಿಸಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. 2013ರಲ್ಲಿ ಯುಪಿಎ ಮಾಡಿದ್ದ ನಿಯಮ ಗಳನ್ನು ಅನುಸರಿಸಲಾಗಿದೆ. ಸ್ನೇಹಿ ರಾಷ್ಟ್ರಗಳೊಂದಿಗೆ ಅಂತರ್ ಸರಕಾರಿ ಒಪ್ಪಂದಕ್ಕೆ ಸಹಿ ಹಾಕುವಾಗ ನಿಯಮ ಮೀರಲು ರಕ್ಷಣಾ ಸಚಿವಾಲಯಕ್ಕೆ 2013ರ ಯುಪಿಎ ನೀತಿ ಅವಕಾಶ ನೀಡಿತ್ತು ಎಂದು ವರದಿ ಹೇಳಿದೆ.
ಈ ಹಿಂದೆ ಅಮೆರಿಕ ಮತ್ತು ರಷ್ಯಾ ಸರಕಾರದ ಜತೆಗೂ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಆಗಲೂ ಈ ನಿಬಂಧನೆಗಳು ಇರ ಲಿಲ್ಲ. ಹಾಗಾಗಿ ಫ್ರಾನ್ಸ್ ಜತೆಗೆ ರಫೇಲ್ ಒಪ್ಪಂದ ಮಾಡಿಕೊಳ್ಳುವಾ ಗಲೂ ಈ ನಿಬಂಧನೆ ಕೈಬಿಡಲಾಗಿದೆ. ಭಾರತೀಯ ತಂಡ ಈ ಒಪ್ಪಂದವನ್ನು ವಿರೋಧವಿಲ್ಲದೆ ಸಮ್ಮತಿಸಿದೆ.
ಎಸ್.ಬಿ.ಪಿ. ಸಿನ್ಹಾ, ನಿವೃತ್ತ ಏರ್ ಮಾರ್ಷಲ್
ಪ್ರಧಾನಿ ಮೋದಿ ಯೋಚಿಸಿದ್ದಕ್ಕಿಂತ ವೇಗವಾಗಿ ರಫೇಲ್ ವಿಮಾನದಲ್ಲಿನ ಹಗರಣಗಳು ಬೆಳಕಿಗೆ ಬರುತ್ತಿವೆ. ಬ್ಯಾಂಕ್ ಗ್ಯಾರಂಟಿ, ಎಸ್ಕ್ರೋ ಖಾತೆಗಳನ್ನು ಸ್ಥಾಪಿಸಿಲ್ಲ. ಆದರೂ ಭಾರಿ ಮೊತ್ತ ಪಾವತಿಸಲಾಗಿದೆ. ಇದರಿಂದ ಡಸ್ಸಾಲ್ಟ್ಗೆ ಭಾರಿ ಲಾಭವಾದಂತಿದೆ.
ಪಿ.ಚಿದಂಬರಂ, ಕಾಂಗ್ರೆಸ್ ಮುಖಂಡ
ಲೋಕಪಾಲ ಜಾರಿಗೆ ತಂದಿದ್ದರೆ ರಫೇಲ್ ಒಪ್ಪಂದದಲ್ಲಿ ಪ್ರಮುಖ ಆರೋಪಿಯೇ ಪ್ರಧಾನಿ ಮೋದಿ ಆಗಿರುತ್ತಿದ್ದರು. ಮೋದಿಯ ವಿಶಾಲ ಎದೆಯು ಭ್ರಷ್ಟಾಚಾರದ ಗುಂಡಿನ ದಾಳಿಯ ಎದುರು ನಿಲ್ಲದು.
ವೀರಪ್ಪ ಮೊಲಿ, ಮಾಜಿ ಸಚಿವ