ಸಾಧಿಸುವ ಛಲವೇ ಯಶಸ್ಸಿನ ಗುಟ್ಟು
Team Udayavani, Feb 18, 2019, 1:00 AM IST
ಉಡುಪಿ: ಆಕೆ ನಕ್ಕರೆ ಹಾಲು ಬೆಳದಿಂಗಳು. ಮಾತು ಅರಳು ಹುರಿದಂತೆ. ಈಕೆ ಮಿಸೆಸ್ ಸೌತ್ ಇಂಡಿಯಾ 2019, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಉಡುಪಿ ಮೂಲದ ಡಾ| ಪದ್ಮಾ ಗಡಿಯಾರ್. ಕನ್ನಡಿಗರು ಹೆಮ್ಮೆ ಪಡುವಂತಹ ಸಾಧನೆ ತೋರಿದ ಇವರು ಆ.1ರಿಂದ 7ರ ವರೆಗೆ ಮೆಕ್ಸಿಕೋದಲ್ಲಿ ನಡೆಯಲಿರುವ “ಮಿಸೆಸ್ ಯೂನಿವರ್ಸ್’ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾರೆ.
ಗುರುವಾರ ಉಡುಪಿಗೆ ಆಗಮಿಸಿದ ಇವರೊಂದಿಗೆ “ಉದಯವಾಣಿ’ ನಡೆಸಿದ ಕಿರು ಸಂದರ್ಶನವಿದು.
– ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಹೇಗಾಯಿತು?
ಚಿಕ್ಕಂದಿನಲ್ಲೇ ಆಸಕ್ತಿ ಇತ್ತು. ಮದುವೆಯ ಅನಂತರ ಇದಕ್ಕೆ ಸಹಕಾರ ಸಿಕ್ಕಿತು. ಬರೀ ಆಕಾಶಕ್ಕೆ ಲಗ್ಗೆಯಿಡುವ ಕನಸು ಕಾಣಬಾರದು. ಅದಕ್ಕಿಂತ ದೂರವಿರುವ ನಕ್ಷತ್ರವನ್ನು ನಮ್ಮದಾಗಿಸುವ ಕನಸು ಕಾಣಬೇಕು. ಇದೇ ನನ್ನ ಯಶಸ್ಸಿಗೆ ಕಾರಣ.
– ಮಾಡೆಲಿಂಗ್ ಕ್ಷೇತ್ರದಲ್ಲಿ ಮೈಬಣ್ಣವೇ ಮುಖ್ಯ ಎಂದು ನಿಮಗೆ ಅನಿಸುತ್ತಾ?
ಖಂಡಿತ ಇಲ್ಲ. ಸೌಂದರ್ಯವನ್ನು ಕೇವಲ ಮೈಬಣ್ಣದಿಂದ ಅಳೆಯಲು ಸಾಧ್ಯವಿಲ್ಲ. ಕಪ್ಪು ಬಣ್ಣದ ರೂಪದರ್ಶಿಯರು ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ.
– ಈ ಕ್ಷೇತ್ರದಲ್ಲಿ ನೀವು ತುಂಬಾ ಒತ್ತಡ ಎದುರಿಸಿದ್ದೀರಾ?
ಅತಿ ಒತ್ತಡ ನಾನು ಎದುರಿಸಿಲ್ಲ. ಈ ಕ್ಷೇತ್ರದಲ್ಲಿ ತುಂಬಾ ಸ್ಪರ್ಧೆಯಿದೆ ನಿಜ. ಮಾಡೆಲಿಂಗ್ನ ಆರಂಭದ ದಿನಗಳಲ್ಲಿ ನಾನೂ ಕಷ್ಟಪಟ್ಟಿದ್ದೇನೆ. ನನಗೆ ಪ್ರೋತ್ಸಾಹ ನೀಡಿದ್ದು ನನ್ನ ಪತಿ ಹಾಗೂ ಸಹೋದರಿ.
– ಮಹಿಳಾ ಸಶಕ್ತೀಕರಣಕ್ಕೆ ನಿಮ್ಮ ನಡೆ ಏನು?
ಮಹಿಳೆಯರು ಮನಸ್ಸು ಮಾಡಿದರೆ ಜಗವನ್ನೇ ಗೆಲ್ಲಬಹುದು. ಮಹಿಳೆಯರು ಬಹುಮುಖ ಪ್ರತಿಭಾನ್ವಿತರು. ಅವರಿಗೆ ಹಲವಾರು ಕೆಲಸಗಳನ್ನು ಒಂದೇ ಸಲ ಮಾಡುವ ಸಾಮರ್ಥ್ಯ ಇದೆ. ಕುಟುಂಬ ನೋಡುವುದರೊಂದಿಗೆ ಸಂಪಾದನೆಯನ್ನೂ ಮಾಡಬಲ್ಲರು.
– ನಿಮ್ಮ ಸೌಂದರ್ಯದ ರಹಸ್ಯವೇನು?
ಪ್ರತೀದಿನ ಒಂದರಿಂದ ಒಂದೂವರೆ ಗಂಟೆಗಳ ಕಾಲ ವ್ಯಾಯಾಮ ಮಾಡುತ್ತೇನೆ. ಅಲ್ಲದೆ ಜಿಮ್, ಆಹಾರ ಪಥ್ಯ ಕೂಡ ಮಾಡುತ್ತಿದ್ದೇನೆ.
– ಮಹಿಳೆಯರು ಸಮಯ ಹೊಂದಿಸು ವುದು ಹೇಗೆ?
ಮಹಿಳೆಯರಿಗೆ ಸಮಯ, ಶಕ್ತಿ, ಶಿಸ್ತು, ಧೈರ್ಯ, ದೃಢ ನಿರ್ಧಾರ ಅತೀ ಅಗತ್ಯ. ಸಾಧನೆ ಮಾಡುವ ಛಲ ಮನಸ್ಸಿನಲ್ಲಿ ಹೊಂದಬೇಕು. ಇಂತಹ ಮಹಿಳೆಯರಿಗೆ ಪ್ರೋತ್ಸಾಹವೂ ಬೇಕು.
– ಪ್ರೋತ್ಸಾಹವೆಂದರೆ ಯಾವ ರೀತಿಯದ್ದು?
ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಶ್ರಮಪಟ್ಟು ದುಡಿಯುತ್ತಿದ್ದಾರೆ. ಕುಟುಂಬ, ಖಾಸಗಿ ಜೀವನವನ್ನು ಸರಿದೂಗಿಸಿಕೊಂಡು ಜೀವನ ಸಾಗಿಸುತ್ತಾರೆ. ಇವರಿಗೆ ಮನೆಯವರ, ಗಂಡನ ಪ್ರೋತ್ಸಾಹ ಸಿಗಬೇಕು. ಬಹುತೇಕರು ಇಂತಹ ಸ್ಪರ್ಧೆಗಳಿಗೆ ಹೋಗಲು ಹಿಂಜರಿಯುತ್ತಾರೆ. ಇಂತಹ ಕೀಳರಿಮೆ ಬಿಟ್ಟರೆ ಯಶಸ್ಸು ನಮ್ಮದಾಗುತ್ತದೆ.
– ಸಿನೆಮಾದಲ್ಲಿ ನಟಿಸುವ ಯೋಚನೆ ಇದೆಯೇ?
ಖಂಡಿತ ಇದೆ. ಸರಿಯಾದ ಸಮಯಕ್ಕೆ ಕಾಯುತ್ತಿದ್ದೇನೆ. ಒಳ್ಳೆಯ ಕಥೆ, ನಿರ್ದೇಶಕರು, ನಟರು ಸಿಕ್ಕಿದರೆ ನಟಿಸುತ್ತೇನೆ. ಸ್ಯಾಂಡಲ್ವುಡ್ ಮಾತ್ರವಲ್ಲದೆ ಬಾಲಿವುಡ್ ಮತ್ತು ಹಾಲಿವುಡ್ನಲ್ಲೂ ನಟಿಸಲು ಸಿದ್ಧಳಿದ್ದೇನೆ. ಪ್ರಸ್ತುತ ದಂತ ವೈದ್ಯರು ಸೇರಿದಂತೆ ವೈದ್ಯರಿಗಾಗಿ ಪುಸ್ತಕವನ್ನು ಬರೆಯುತ್ತಿದ್ದೇನೆ.