ಸಮಾಜಮುಖೀ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ: ಜಿಲ್ಲಾಧಿಕಾರಿ
Team Udayavani, Feb 24, 2019, 1:00 AM IST
ಉಡುಪಿ: ರೆಡ್ಕ್ರಾಸ್ ಸಂಸ್ಥೆ ಹಮ್ಮಿಕೊಳ್ಳುವ ಸಮಾಜಮುಖೀ ಚಟುವಟಿಕೆಗಳಲ್ಲಿ ಯುವ ಸಮುದಾಯ ಪಾಲ್ಗೊಳ್ಳಬೇಕು. ರಕ್ತದಾನ ಶಿಬಿರದ ಪ್ರಯೋಜನ ಪಡೆದು ವ್ಯಕ್ತಿತ್ವ ವಿಕಸನ ವೃದ್ಧಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.
ಶನಿವಾರ ಅಂಬಲಪಾಡಿಯ ಪ್ರಗತಿಸೌಧದಲ್ಲಿ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಮತ್ತು ಮತ್ತು ಮಂಗಳೂರು ವಿವಿ ಆಶ್ರಯದಲ್ಲಿ 5 ದಿನಗಳ ಕಾಲ ನಡೆಯುವ ಯೂತ್ ರೆಡ್ಕ್ರಾಸ್ನ ರಾಜ್ಯಮಟ್ಟದ ಕಾರ್ಯಾಗಾರ, ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ವಿವಿಯ ಯೂತ್ ರೆಡ್ಕ್ರಾಸ್ ನೋಡಲ್ ಅಧಿಕಾರಿ ಪ್ರೊ| ವಿನೀತಾ ಕೆ., ಶೈಕ್ಷಣಿಕ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಯಬೇಕು. ತರಬೇತಿ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಸಮಯಪಾಲನೆ, ಶಿಸ್ತು ಮೈಗೂಡಿಸಿಕೊಳ್ಳಬೇಕು ಎಂದರು.
ಜೀವನಕಲೆ ಕರಗತ ಮಾಡಿಕೊಳ್ಳಿ
ಮುಖ್ಯ ಅತಿಥಿಯಾಗಿದ್ದ ಧರ್ಮದರ್ಶಿ ಡಾ| ಎನ್. ವಿಜಯ ಬಲ್ಲಾಳ್ ಮಾತನಾಡಿ, ವಿದ್ಯಾರ್ಥಿಗಳು ಈ ಶಿಬಿರದ ಮೂಲಕ ಜೀವನಕಲೆ ಕರಗತಮಾಡಿಕೊಳ್ಳಬೇಕು. ಯಾವುದೇ ಸನ್ನಡತೆಯ ಕೆಲಸ ಮಾಡಲು ವಿದ್ಯಾರ್ಥಿಗಳು ಹಿಂಜರಿಯದೆ ಮುನ್ನು ಗ್ಗುವ ಚಾಕಚಾಕ್ಯತೆ ಮೈಗೂಡಿಸಿ ಕೊಳ್ಳಬೇಕು ಎಂದರು.
ಪ್ರತಿ ಕಾಲೇಜಲ್ಲೂ ರೆಡ್ಕ್ರಾಸ್ ಘಟಕ ಸ್ಥಾಪನೆಯಾಗಲಿ
ರೆಡ್ ಕ್ರಾಸ್ ಸೊಸೈಟಿ ರಾಜ್ಯ ಘಟಕದ ಚೇರ್ಮನ್ ಬಸೂÅರು ರಾಜೀವ ಶೆಟ್ಟಿ, ರೆಡ್ಕ್ರಾಸ್ ಮೂಲಕ ಮಾನವೀಯ ಮೌಲ್ಯಗಳಿಗೆ ಸ್ಪಂದಿಸುವ ಕೆಲಸವನ್ನು ಯುವ ಸಮುದಾಯ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಕಾಲೇಜಿನಲ್ಲೂ ರೆಡ್ಕ್ರಾಸ್ ಘಟಕ ಸ್ಥಾಪನೆಯಾಗಬೇಕು ಎಂದರು.
ಸೊಸೈಟಿಯ ಉಡುಪಿ ಘಟಕದ ಚೇರ್ಮನ್ ಡಾ| ಉಮೇಶ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈಸ್ ಚೇರ್ಮನ್ ಡಾ| ಅಶೋಕ್ ಕುಮಾರ್ ವೈ.ಜಿ. ಉಪಸ್ಥಿತರಿದ್ದರು. ಕಾರ್ಯದರ್ಶಿ ಟಿ. ಚಂದ್ರಶೇಖರ್ ವಂದಿಸಿದರು. ಯೂತ್ರೆಡ್ಕ್ರಾಸ್ ಸೊಸೈಟಿ ಸಂಯೋಜಕ ಕೆ.ಜಯರಾಮ್ ಆಚಾರ್ಯ ಸಾಲಿಗ್ರಾಮ ಸ್ವಾಗತಿಸಿ, ನಿರೂಪಿಸಿದರು.
15 ವಿ.ವಿ.ಗಳ 80 ವಿದ್ಯಾರ್ಥಿಗಳು
ಶನಿವಾರದಿಂದ ಕಾರ್ಯಕ್ರಮ ಆರಂಭಗೊಂಡಿದ್ದು, ಫೆ.27ರ ವರೆಗೆ ನಡೆಯಲಿದೆ. ರಾಜ್ಯದ 15 ವಿಶ್ವವಿದ್ಯಾನಿಲಯಗಳ 80 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.