ಸಾಕಿನಾಕಾ :ದೇವಸ್ಥಾನದ ವಾರ್ಷಿಕ ಮಹೋತ್ಸವ ಧಾರ್ಮಿಕ ಸಭೆ
Team Udayavani, Feb 26, 2019, 4:46 PM IST
ಮುಂಬಯಿ: ಜನರ ಆಸಕ್ತಿ ಎಲ್ಲಿಯವರೆಗೆ ಬೆಳೆಯುತ್ತದೋ ಅಲ್ಲಿ ಕಲೆ, ಸಂಸ್ಕೃತಿ, ಭದ್ರ ನೆಲೆಯನ್ನು ಕಾಣುತ್ತದೆ. ತುಳುನಾಡಿನ ಯಕ್ಷಗಾನ ಗಂಡುಕಲೆಯನ್ನು ಇಲ್ಲಿನ ಪರಿಸರದ ಅಭಿಮಾನಿಗಳು ಒಗ್ಗಟ್ಟಾಗಿ ಪ್ರೋತ್ಸಾಹಿಸುತ್ತಿರುವುದರಿಂದ ಮಹಾನಗರದಲ್ಲಿ ಯಕ್ಷಗಾನ ಕಲೆಯ ಉಳಿವಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ. ಪೌರಾಣಿಕ ಕಥೆಗಳನ್ನು ವ್ಯಕ್ತಿ ಮಾಧ್ಯಮದ ಮೂಲಕ ಮಕ್ಕಳಿಗೆ ತಿಳಿಸುವ ಕಟೀಲು ಸದಾನಂದ ಶೆಟ್ಟಿ ಅವರ ಕಾರ್ಯ ಸ್ತುತ್ಯರ್ಹವಾಗಿದೆ ಎಂದು ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ ನುಡಿದರು.
ಫೆ. 24ರಂದು ಸಾಕಿನಾಕಾದ ಮೊಹಿಲಿ ವಿಲೇಜ್ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಠಾರದಲ್ಲಿ ಜರಗಿದ ಮಂದಿರದ 52ನೇ ವಾರ್ಷಿಕ ಮಹೋತ್ಸವ ಧಾರ್ಮಿಕ ಸಭಾ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕಲಾವಿದರನ್ನು ದೇವರಂತೆ ಪ್ರೀತಿಸುವ ನಮಗೆ ನಮ್ಮೂರಲ್ಲಿ ಗೌರವಿಸುವವರು ಇಲ್ಲ. ಆದರೂ ಮಹಾನಗರದಲ್ಲಿ ಯಕ್ಷಗಾನ ಅಭಿಮಾನಿಗಳ ಪ್ರೀತಿ, ವಿಶ್ವಾಸದಿಂದ ಯಕ್ಷಗಾನ ಕಲೆಗೆ ಎಲ್ಲಿಯೂ ದುರಂತವಾಗದು. ನಾವೆಲ್ಲ ಇಲ್ಲಿ ಕಲೆಗೆ ಗೌರವ ನೀಡುವ ವ್ಯಕ್ತಿಗಳಾಗಬೇಕು ಎಂದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್. ಕೆ. ಶೆಟ್ಟಿ ಮಾತನಾಡಿ, ಸಂಸ್ಕೃತಿ ಸೌಂದರ್ಯ ತುಂಬಿದ ನಮ್ಮ ದೇಶದಲ್ಲಿ ಸಂಸ್ಕೃತಿ, ಕಲೆ ಭದ್ರವಾಗಿದ್ದು, ಯಾಂತ್ರಿಕ ಜೀವನದ ನಡುವೆಯೂ ನಮ್ಮ ಸಂಸ್ಕಾರ, ಸಂಸ್ಕೃತಿ, ಕಲೆಯನ್ನು ಮಕ್ಕಳಿಗೆ ತಿಳಿಸುವ ಈ ಸಂಸ್ಥೆಯ ಸಾಧನೆ ಮಹತ್ವದ್ದು, ಈ ಪುಣ್ಯ ಕ್ಷೇತ್ರದಲ್ಲಿ ಇನ್ನಷ್ಟು ಜನೋಪಯೋಗಿ ಕಾರ್ಯಕ್ರಮಗಳಿಂದ ಕ್ಷೇತ್ರ ಪಾವನವಾಗಲಿ ಎಂದು ಹಾರೈಸಿದರು.
ಅತಿಥಿಯಾಗಿ ಆಗಮಿಸಿದ ವಸಾಯಿ ಕರ್ನಾಟಕ ಸಂಘದ ನೂತನ ಅಧ್ಯಕ್ಷ ಪಾಂಡು ಎಲ್. ಶೆಟ್ಟಿ ಮಾತನಾಡಿ, ಈ ಸಂಸ್ಥೆ ಯಕ್ಷಗಾನ ಕಲೆಗೆ ಮಹತ್ತರವಾದ ಕೊಡುಗೆ ನೀಡುತ್ತಿದ್ದು, ಕಳೆದ 3 ವರ್ಷಗಳಿಂದ ನಮ್ಮ ಸಂಘದ ಯಕ್ಷಗಾನ ಕಾರ್ಯಕ್ರಮ ನಡೆಯುತ್ತ ಇರುವುದು ಸಂತಸದ ವಿಷಯವಾಗಿದೆ. ಸಂಘದ ವತಿಯಿಂದ ಕಳೆದ ತಿಂಗಳು ಉದ್ಘಾಟನೆಗೊಂಡ ಶ್ರೀ ಕಟೀಲು ಯಕ್ಷಕಲಾ ವೇದಿಕೆಯು ಮಕ್ಕಳಲ್ಲಿ ಯಕ್ಷಗಾನದ ಸದಭಿ ರುಚಿಯನ್ನು ಬೆಳೆಸುವ ಉದ್ದೇಶದಿಂದ ಜಾತಿ, ಮತ ಭೇದವಿಲ್ಲದೆ ಯಕ್ಷಗಾನ ಪಾತ್ರಧಾರಿಗಳನ್ನು ದೇವ ಸ್ವರೂಪವಾಗಿ ನೋಡುವ ಭಾಗ್ಯ ನಮ್ಮ ಸಂಸ್ಥೆ ಒದಗಿಸಿದೆ. ಈ ಸಂಸ್ಥೆ ಕಲಾಕ್ಷೇತ್ರದಲ್ಲಿ ಉತ್ತುಂಗಕ್ಕೇರಲಿ. ನಿಮ್ಮೆಲ್ಲರ ಪ್ರೋತ್ಸಾಹ ಸದಾಯಿರಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವದಿಸಿದ ಜೆರಿಮರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್. ಎನ್. ಉಡುಪ ಅವರು ಮಾತನಾಡಿ, ಯಕ್ಷಗಾನ ಹೆಸರೇ ನಮ್ಮ ಕಲೆ, ಸಂಸ್ಕೃತಿಯ ಕೊಡುಗೆ. ಈ ಕಲೆ ನಮ್ಮ ರಾಜ್ಯದ ಸಂಸ್ಕೃತಿಯಲ್ಲಿ ನಿಂತ ನೀರಾಗದೆ ಸದಾ ಹರಿಯುವ ನೀರಾಗಿ ನದಿಯಾಗಬೇಕು. ಯಕ್ಷಗಾನಕ್ಕೆ ಎಂದೂ ಅಳಿವಿಲ್ಲ. ಕಳೆದ 52 ವರ್ಷಗಳಿಂದಲೂ ಈ ಸಂಸ್ಥೆ ಯಕ್ಷಗಾನವನ್ನು ಪ್ರೋತ್ಸಾಹಿಸುತ್ತಾ ಮಹಾನಗರದಲ್ಲಿ ಯಕ್ಷಕಲಾ ಕ್ಷೇತ್ರವಾಗಿ ಬೆಳೆದಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮೋಹನ್ ಆರ್. ಗುಜರನ್ ಮಾತನಾಡಿ, ಧಾರ್ಮಿಕ ಕ್ಷೇತ್ರದ ಪ್ರಾರಂಭಿಕ ಅರ್ಚಕರ ಪ್ರೇರಣೆಯಿಂದ ಈ ಸಂಸ್ಥೆಯಲ್ಲಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ಜತೆಗೆ ಸದಾ ನನ್ನೊಂದಿಗೆ ಸಹಕರಿಸುತ್ತಿರುವ ಸದಸ್ಯರು, ಮಹಿಳಾ ವಿಭಾಗ, ಯುವಕರಿಂದ ಈ ಧಾರ್ಮಿಕ ಕ್ಷೇತ್ರ ಇಷ್ಟೊಂದು ಬೆಳವಣಿಗೆ ಕಾಣಲು ಸಾಧ್ಯವಾಯಿತು. ಮುಂದೆಯೂ ಇಲ್ಲಿ ಯಕ್ಷಗಾನ ಕಲೆ ಸದಾ ಹಸಿರಾಗಿಯೇ ಉಳಿಯಲಿ ಎಂದರು.
ಶ್ರೀ ಮಣಿಕಂಠ ಸೇವಾ ಸಮಿತಿಯ ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ, ವಸಾಯಿ ಕರ್ನಾಟಕ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ, ಉಪಾಧ್ಯಕ್ಷರಾದ ದೇವೇಂದ್ರ ಬುನ್ನನ್, ಮಾಜಿ ಅಧ್ಯಕ್ಷ ಓ. ಪಿ. ಪೂಜಾರಿ, ಶಾರದಾ ಹೈಸ್ಕೂಲ್ ಸಾಕಿನಾಕಾದ ಪ್ರಾಂಶುಪಾಲೆ ವನಿತಾ ಎಸ್. ಕುಮಾರ್ ಶುಭ ಹಾರೈಸಿದರು.
ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಬಾಲಚಂದ್ರ ಆರ್. ಶೆಟ್ಟಿ, ಚಂದ್ರಹಾಸ್ ಶೆಟ್ಟಿ ಉಜಿರೆ, ಶೇಖರ ವಿ. ಪೂಜಾರಿ, ಸುರೇಶ್ ಮಾರ್ಲ, ರಾಜೇಶ್ ಮೊಲಿ, ಮಹೇಶ್ ಶೆಟ್ಟಿ, ಸುನಿಲ್ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸ್ವರೂಪ್ ಆರ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಹೇಮಾ ಎಲ್. ಕೋಟ್ಯಾನ್ ಅವರು ಅತಿಥಿಗಳನ್ನು ಗೌರವಿಸಿದರು.
ವೇದಿಕೆಯಲ್ಲಿ ಕಲಾಪೋಷಕ ಜಗನ್ನಾಥ ಶೆಟ್ಟಿ, ಪ್ರಕಾಶ್ ಟಿ. ಆಳ್ವ, ಪ್ರಸಾದ್ ವಿ. ಶೆಟ್ಟಿ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಪ್ರಫುಲ್ಲಾ ಸುವರ್ಣ ಬಳಗದವರು ಪ್ರಾರ್ಥನೆಗೈದರು. ಸಮಾರಂಭದಲ್ಲಿ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಯ್ಯಪ್ಪ ಭಕ್ತ ಸುನಿಲ್ ಅಂಚನ್ ಸ್ವಾಮಿ ಹಾಗೂ ಕಳೆದ 18 ವರ್ಷಗಳಿಂದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿರುವ ಮಂಜುನಾಥ ಶೆಟ್ಟಿ ದಂಪತಿಗಳನ್ನು ಸಮ್ಮಾನಿಸಲಾಯಿತು.
ಟ್ರಸ್ಟಿ, ಯಕ್ಷ ಗುರು ಕಟೀಲು ಸದಾನಂದ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಪ್ರಾರಂಭದಲ್ಲಿ ಇತ್ತೀಚೆಗೆ ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಕಲಾವಿದರಿಂದ ರುಕಾ¾ಂಗದ ಚರಿತ್ರೆ ಯಕ್ಷಗಾನ ಪ್ರದರ್ಶನಗೊಂಡಿತು.
ಚಿತ್ರ-ವರದಿ: ರಮೇಶ್ ಉದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ