ಬಿಸಿಲಿಗೆ ಬಸವಳಿದು ಕಾರ್ಮಿಕ ಸಾವು
Team Udayavani, Feb 28, 2019, 12:30 AM IST
ರಾಯಚೂರು: ರಾಜ್ಯದಲ್ಲಿ ಬೇಸಗೆ ಉರಿ ಈಗಲೇ ತಟ್ಟ ಲಾರಂಭಿಸಿದ್ದು, ಬಿಸಿಲ ಝಳಕ್ಕೆ ಬಸವಳಿದು ಉದ್ಯೋಗ ಖಾತರಿ ಕಾರ್ಮಿಕ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ತಾಲೂಕಿನ ಯದ್ಲಾಪುರ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಕೂಲಿ ಕೆಲಸಕ್ಕೆ ಬಂದಿದ್ದ ಬುಡ್ಡೆ ಯಲ್ಲಪ್ಪ (55) ಮೃತ ಕಾರ್ಮಿಕ. ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದ ಹೊರವಲಯದಲ್ಲಿ ಹಳ್ಳದ ಹೂಳೆತ್ತುವ ಕೆಲಸ ನಡೆದಿತ್ತು. ಈ ವೇಳೆ ಉರಿ ಬಿಸಿಲಿಗೆ ಬಸವಳಿದ ಯಲ್ಲಪ್ಪ ದಾಹ ತಾಳದೆ ಕುಸಿದು ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಅಧಿಕಾರಿಗಳು ಕುಡಿಯುವ ನೀರು ಕೂಡ ಇಟ್ಟಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಕಾರ್ಮಿಕರು ಶವವನ್ನು ಅಲ್ಲಿಯೇ ಇಟ್ಟು ಪ್ರತಿಭಟಿಸಿದರು. ಅಧಿಕಾರಿಗಳು ಸ್ಥಳದಲ್ಲಿ ಕುಡಿಯಲು ನೀರಾಗಲಿ, ಪ್ರಥಮ ಚಿಕಿತ್ಸೆಗಾಗಲಿ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದರು.