ಪಿಯುಸಿ ಪರೀಕ್ಷೆ ಆಗುಂಬೆ ಘಾಟಿ ಬಂದ್ ಸದ್ಯಕ್ಕಿಲ್ಲ
Team Udayavani, Mar 1, 2019, 1:00 AM IST
ಹೆಬ್ರಿ: ದ್ವಿತೀಯ ಪಿಯುಸಿ ಪರೀಕ್ಷೆ ಮಾ. 1ರಿಂದ ನಡೆಯುವ ಹಿನ್ನೆಲೆಯಲ್ಲಿ ಪೂರ್ವಯೋಜಿತ ಆಗುಂಬೆ ಘಾಟಿ ದುರಸ್ತಿ ಕಾಮಗಾರಿಯನ್ನು ಮುಂದೂಡಲಾಗಿದೆ. ಮಾ. 19ರಿಂದ ಒಂದು ತಿಂಗಳ ಕಾಲ ರಸ್ತೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದ್ದಾರೆ.
ಮಾ. 1ರಿಂದ 31ರ ತನಕ ಸಂಚಾರವನ್ನು ಬಂದ್ ಮಾಡಿ ಘಾಟಿ ರಸ್ತೆಯನ್ನು ದುರಸ್ತಿ ಮಾಡಲಾಗುವುದೆಂದು ಅದೇಶ ಹೊರಡಿಸಲಾಗಿತ್ತು. ಆದರೆ ಅದೇ ಅವಧಿಯಲ್ಲಿ ಪಿಯುಸಿ ಪರೀಕ್ಷೆ ನಡೆಯುವುದರಿಂದ ಆಗುಂಬೆ, ಸೋಮೇಶ್ವರ, ನಾಡಾ³ಲು ಮುಂತಾದ ಕಡೆಗಳಿಂದ ಹೆಬ್ರಿ, ಉಡುಪಿಯತ್ತ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ ಎಂದು ಅವರು ಹೇಳಿದ್ದಾರೆ.
ದುರಸ್ತಿಗೆ ಸಿದ್ಧತೆ
ಮಾ. 19ರ ವರೆಗೆ ದುರಸ್ತಿಗೆ ಬೇಕಾದ ಸಿದ್ಧತೆ ಮಾಡಲು ಜಿಲ್ಲಾಧಿಕಾರಿಯವರು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ಗಳಿಗೆ ಸೂಚನೆ ನೀಡಿದ್ದಾರೆ.
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತೊಂದರೆ
ಪರೀಕ್ಷೆ ಸಂದರ್ಭದಲ್ಲಿ ಘಾಟಿ ರಸ್ತೆ ಬಂದ್ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂಬ ವರದಿಯನ್ನು ಉದಯವಾಣಿ ಪತ್ರಿಕೆ ಫೆ. 26ರಂದು ಪ್ರಕಟಿಸಿತ್ತು. ಪೋಷಕರ ಆಗ್ರಹ ಹಾಗೂ ಪತ್ರಿಕೆಯ ವರದಿಯನ್ನು ಗಮನಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಜಿಲ್ಲಾಡಳಿತ ಈ ನಿರ್ಣಯಕ್ಕೆ ಬಂದಿದೆ. ಪಿಯುಸಿ ಪರೀಕ್ಷೆ ಮಾ. 18ರಂದು ಮುಗಿಯುತ್ತದೆಯಾದರೂ ಎಸ್ಎಸ್ಎಲ್ಸಿ ಪರೀಕ್ಷೆ ಎ. 4ರ ತನಕ ನಡೆಯುವುದರಿಂದ ಈ ಭಾಗದಿಂದ ಹೆಬ್ರಿಗೆ ಬರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪೋಷಕರ ದೂರು ಹಾಗೂ ಪತ್ರಿಕೆಯಲ್ಲಿ ಬಂದ ವರದಿ ಗಮನಿಸಿ ವಿದ್ಯಾರ್ಥಿ ಗಳಿಗೆ ತೊಂದರೆ ಯಾಗ ಬಾರದು ಎಂಬ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜತೆ ಮಾತನಾ ಡಿದ್ದೇನೆ. ಮಾ. 1ರಿಂದ ಘಾಟಿ ಸಂಚಾರ ಎಂದಿನಂತೆ ಇದ್ದು ಮಾ. 19ರಿಂದ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಬಂದ್ ಆಗಲಿದೆ.
– ಕೆ.ಎ. ದಯಾನಂದ, ಶಿವಮೊಗ್ಗ ಜಿಲ್ಲಾಧಿಕಾರಿ