ಕೋಟಿಲಿಂಗ ಶಾಂತಿಗೆ ಭಂಗ ತಂದ್ರೆ ಕ್ರಮ
Team Udayavani, Mar 2, 2019, 7:16 AM IST
ಬಂಗಾರಪೇಟೆ: ಇಲ್ಲಿನ ಕಮ್ಮಸಂದ್ರ ಕೋಟಿಲಿಂಗ ದೇಗುಲದ ಪಟ್ಟಕ್ಕಾಗಿ ಕಿತ್ತಾಟ ಮತ್ತೆ ಶುರುವಾಗಿದೆ. ಸಂಸದ ಕೆ.ಎಚ್.ಮುನಿಯಪ್ಪ ಅವರ ಸಂಧಾನ ಸಭೆ ನಂತರ ಮತ್ತೆ ಶುಕ್ರವಾರ ಪೊಲೀಸ್ ಡಿವೈಎಸ್ಪಿ ಪರಮೇಶ್ವರ ಹೆಗಡೆ ಎರಡೂ ಕಡೆಯವರನ್ನು ಕರೆಸಿ ಶಾಂತಿಭಂಗ ಮಾಡದಂತೆ ಖಡಕ್ ಎಚ್ಚರಿಕೆ ನೀಡಿದರು.
ಮಾ.2ರಿಂದ 6ರವರೆಗೆ ಮಹಾಶಿವರಾತ್ರಿ ಅಂಗವಾಗಿ ಐದು ಜನರ ನೇತೃತ್ವದಲ್ಲಿ ಎಲ್ಲಾ ಪೂಜಾ ಕಾರ್ಯಗಳು ದೇಗುಲದಲ್ಲಿ ನಡೆಯಬೇಕಾಗಿದೆ. ಇದರಲ್ಲಿ ಬೇರೆಯವರು ಯಾರೇ ಹಸ್ತಕ್ಷೇಪ ಮಾಡಿದರೂ ಪೊಲೀಸ್ ಬಂದೋಬಸ್ತ್ನಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳೊಂದಿಗೆ ಮಹಾಶಿವರಾತ್ರಿ ಜಾತ್ರೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಎರಡೂ ಗುಂಪುಗಳ ವಾದ -ವಿವಾದ ಆಲಿಸಿದ ನಂತರ ಮಾತನಾಡಿದ ಡಿವೈಎಸ್ಪಿ ಪರಮೇಶ್ವರ್ ಹೆಗಡೆ, ದೇಗುಲದಲ್ಲಿ ಮಹಾಶಿವರಾತ್ರಿ ಆಚರಣೆ ಮಾಡಲು ದೇಗುಲದ ಟ್ರಸ್ ಅಧ್ಯಕ್ಷ ಕೆ.ಎನ್.ನಾರಾಯಣಮೂರ್ತಿ, ಕಾರ್ಯದರ್ಶಿ ಕೆ.ವಿ.ಕುಮಾರಿ, ಧರ್ಮಾಧಿಕಾರಿ ಡಾ.ಶಿವಪ್ರಸಾದ್, ದೇಗುಲದ ಪ್ರಧಾನ ಅರ್ಚಕ ವೆಂಕಟಾಚಲಪತಿ ಹಾಗೂ ವೇಣುಗೋಪಾಲ್ರ ನೇತೃತ್ವದಲ್ಲಿ ಮಾತ್ರ ನಡೆಯಬೇಕೆಂದು ಸೂಚನೆ ನೀಡಿದರು.
ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಯಾರ ಗಮನಕ್ಕೂ ತರದೇ ಸ್ವಾಮೀಜಿಗಳ ಸಹೋದರ ಕೆ.ಎನ್.ನಾರಾಯಣಮೂರ್ತಿ ಟ್ರಸ್ಟ್ ಅಧ್ಯಕ್ಷರಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಡಾ.ಶಿವಪ್ರಸಾದ್, ಮಾತನಾಡುವ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಯತ್ನ ಮಾಡಿದಾಗ ಡಿವೈಎಸ್ಪಿ ಪರಮೇಶ್ವರ್ ಹೆಗಡೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ನೀವೊಬ್ಬ ವೈದ್ಯರಾಗಿ ವಲ್ಗರ್ ಭಾಷೆ ಮಾತನಾಡಬಾರೆದೆಂದು ಎಚ್ಚರಿಕೆ ನೀಡಿದರು.
ಜಾತ್ರೆ ನಡೆಯುವ ಆರು ದಿನಗಳ ಕಾಲ ದೇಗುಲದ ಪ್ರವೇಶ, ವಾಹನಗಳ ನಿಲುಗಡೆ, ಕ್ಯಾಮರಾ ಬಳಸುವುದು ಸೇರಿ ದೇವಾಲಯದಲ್ಲಿ ನಡೆಯುವ ಎಲ್ಲಾ ಸೇವೆಗಳನ್ನು ಶ್ರೀಗಳ ಜ್ಞಾಪಕಾರ್ಥವಾಗಿ ಉಚಿತವಾಗಿ ನೀಡಬೇಕೆಂದು ಟ್ರಸ್ಟ್ ತೀರ್ಮಾನ ಕೈಗೊಂಡಿದೆ. ಈ ಬಗ್ಗೆ ಹಾಗೂ ಜಾತ್ರೆ ಸಮಯದಲ್ಲಿ ಎರಡೂ ಗುಂಪುಗಳು ನಡೆದುಕೊಳ್ಳುವ ಬಗ್ಗೆ ಜಂಟಿ ಹೇಳಿಕೆಯನ್ನು ಪೊಲೀಸ್ ಇಲಾಖೆ ಸಿದ್ಧಪಡಿಸಿದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಡಾ.ಶಿವಪ್ರಸಾದ್, ತಾನೇ ಬರವಣಿಗೆಯಲ್ಲಿ ಬರೆದುಕೊಡುತ್ತೇನೆ. ಪೊಲೀಸ್ ಇಲಾಖೆ ಬರೆದಿರುವ ಹೇಳಿಕೆಯಲ್ಲಿ ಸಹಿ ಮಾಡುವುದಿಲ್ಲ ಎಂದು ತಿರಸ್ಕಾರ ಮಾಡಿದರು.
ದೇವಾಲಯ ಆರಂಭವಾದಾಗಿನಿಂದ ಸ್ವಾಮೀಜಿಗಳು ಶಿವಪಾರ್ವತಿ ಕಲ್ಯಾಣೋತ್ಸವ ನಡೆಸಲು ಉತ್ಸವ ಮೂರ್ತಿಗಳನ್ನು ಸ್ಥಾಪನೆ ಮಾಡಿದ್ದಾರೆ. ಆದರೆ, ಶ್ರೀಗಳ ಪುತ್ರ ಶಿವಪ್ರಸಾದ್ ಹೊಸ ಉತ್ಸವ ಮೂರ್ತಿ ತಂದಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೆ.ವಿ.ಕುಮಾರಿ, ಹಳೆ ಪದ್ಧತಿಯಲ್ಲಿ ಉತ್ಸವ ಮೂರ್ತಿಗಳ ಆರಾಧನೆಯಾಗಬೇಕೆಂದು ಪಟ್ಟುಹಿಡಿದರು. ಇದಕ್ಕೆ ಸಭೆಯಲ್ಲಿ ಸ್ವಾಮೀಜಿಗಳು ಉಪಯೋಗಿಸುತ್ತಿದ್ದ ಉತ್ಸವ ಮೂರ್ತಿಗಳನ್ನೇ ಪೂಜಿಸಲು ತೀರ್ಮಾನಿಸಿದರು.
ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪ, ಬೆಂಗಳೂರು ನ್ಯೂ ಬಾಲ್ಡವಿನ್ ಶಾಲೆ ಮುಖ್ಯಸ್ಥ ವೇಣುಗೋಪಾಲ್, ಕಮ್ಮಸಂದ್ರ ಗ್ರಾಪಂ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಪ್ರಸಾದ್, ದಲಿತ ಮುಖಂಡ ಹೂವರಸನಹಳ್ಳಿ ರಾಜಪ್ಪ, ತಾಪಂ ಮಾಜಿ ಉಪಾಧ್ಯಕ್ಷ ಒ.ಎಂ.ಗೋಪಾಲ್, ಕಪಾಲಿ ಶಂಕರ್ ಮತ್ತಿತರರಿದ್ದರು.
ಸಭೆ ನಡೆದಿದ್ದು ಏಕೆ?: ಉತ್ತರಾಧಿಕಾರಿ ಕೆ.ವಿ.ಕುಮಾರಿ ಹಾಗೂ ಧರ್ಮಾಧಿಕಾರಿ ಡಾ.ಶಿವಪ್ರಸಾದ್ ನಡುವೆ ಭುಗಿಲೆದ್ದ ಭಿನ್ನಮತದಿಂದಾಗಿ ಎರಡೂ ಕಡೆಯವರು ಪ್ರತ್ಯೇಕವಾಗಿ ಕರಪತ್ರ ಹಂಚುವುದರ ಮೂಲಕ ಪೈಪೋಟಿ ನಡೆಸುತ್ತಿದ್ದರು. ಹೀಗಾಗಿ ದೇವಾಲಯದಲ್ಲಿ ಅಶಾಂತಿ ಹಾಗೂ ಭಕ್ತರಿಗೆ ಕಿರಿಕಿರಿಯಾಗುವ ಸಂಭವ ಹೆಚ್ಚಾಗಿರುವುದರಿಂದ ಪೊಲೀಸ್ ಎಸ್ಟಿ ರೋಹಿಣಿ ಕಟೋಚ್ ಸೂಚನೆ ಮೇರೆಗೆ ಪೊಲೀಸ್ ಡಿವೈಎಸ್ಪಿ ಪರಮೇಶ್ವರ ಹೆಗಡೆ ಸಭೆ ನಡೆಸಿದರು.
10 ಹುಂಡಿಗಳ ಬೀಗ ಒಡೆದ ಶಿವಪ್ರಸಾದ್: ದೇವಾಲಯದಲ್ಲಿ ಪ್ರತಿ 2 ತಿಂಗಳಿಗೊಮ್ಮೆ ಹುಂಡಿಗಳನ್ನು ತೆರೆಯುವ ಸಂಪ್ರದಾಯವಿದೆ. ದೇಗುಲದ 10 ಹುಂಡಿಗಳ ಬೀಗಗಳು ಕಾರ್ಯದರ್ಶಿ ಕೆ.ವಿ.ಕುಮಾರಿ ಬಳಿ ಇದ್ದರೂ ಏಕಾಏಕಿಯಾಗಿ ಯಾರ ಗಮನಕ್ಕೂ ತರದೇ ಧರ್ಮಾಧಿಕಾರಿ ಡಾ.ಶಿವಪ್ರಸಾದ್ ಗುರುವಾರ ಮಧ್ಯರಾತ್ರಿ ಹುಂಡಿ ಬೀಗ ಒಡೆದು ಹಣ ದೋಚಿದ್ದಾರೆಂದು ಕೆ.ವಿ.ಕುಮಾರಿ ದೂರಿದರು. ಈ ಕುರಿತು ಜಾತ್ರೆ ನಡೆಸಲು ಹಣ ಇಲ್ಲದೇ ಇರುವುದರಿಂದ ತಾವೇ ಹುಂಡಿಗಳನ್ನು ಒಡೆದಿರುವುದಾಗಿ ಶಿವಪ್ರಸಾದ್ ಸ್ಪಷ್ಟಪಡಿಸಿದಾಗ, ಸಭೆಯಲ್ಲಿದ್ದವರು ತೀವ್ರ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಕೇಳಿಬಂದ ಸಲಹೆ ಇದು!: ಟ್ರಸ್ಟ್ನ ಜನ ಬಿಟ್ಟು 6ನೇ ವ್ಯಕ್ತಿಯಾಗಿ ದೇವಾಲಯದ ಆಡಳಿತದಲ್ಲಿ ಯಾರೇ ಹಸ್ತಕ್ಷೇಪ ಮಾಡಿದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಮುಜರಾಯಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ವಹಿಸಲಾಗುವುದು. ಅಲ್ಲದೇ, ಈ ಐದೂ ಜನರು ಕಡ್ಡಾಯವಾಗಿ ಕಮ್ಮಸಂದ್ರದಿಂದ ಹೊರಹೋಗಬೇಕಾಗುತ್ತದೆ.
ಹಾಗೆಯೇ ದೇವಾಲಯದ ಆಡಳಿತದ ವಿಚಾರದಲ್ಲಿ ಡಾ.ಶಿವಪ್ರಸಾದ್ರ ತಂಗಿ ಕೆ.ಅನುರಾಧಾ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಬಾರದು. ಗಲಭೆ ಸೃಷ್ಟಿಸಲು ಯಾರಾದರೂ ಪ್ರಯತ್ನ ಮಾಡಿದ್ದಲ್ಲಿ ಸೆಕ್ಷನ್ 107ರಂತೆ ದೂರು ದಾಖಲಿಸಿ ಪೊಲೀಸ್ ವಶಕ್ಕೆ ಪಡೆದು ದೂರು ದಾಖಲು ಮಾಡಲಾಗುವುದು ಎಂದು ಡಿವೈಎಸ್ಪಿ ಪರಮೇಶ್ವರ ಹೆಗಡೆ ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್