ವ್ಯಕ್ತಿತ್ವ ರೂಪಿಸಿಕೊಳ್ಳಿ: ಸ್ವಾಮೀಜಿ
Team Udayavani, Mar 5, 2019, 6:36 AM IST
ಬೆಂಗಳೂರು: ಐಷಾರಾಮಿ ಜೀವನಕ್ಕಿಂತ ಸರಳವಾಗಿ ಬದುಕುವ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದರು. ಭಾರತೀಯ ಲಲಿತಕಲಾ ಸಂಸ್ಥೆ ಹಾಗೂ ಕರ್ನಾಟಕ ಪ್ರತಿಭಾ ವರ್ಧಕ ಅಕಾಡೆಮಿ ಎಡಿಎ ರಂಗಮಂದಿರದಲ್ಲಿ ಆಯೋಜಿಸಿದ್ದ “ಶಿವರಾತ್ರಿ ಅಭಿನಂದನಾ ಉತ್ಸವ’ದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನತೆಯು ಒಳ್ಳೆಯ ಉದ್ಯೋಗ ಪಡೆದು ಹಣ ಗಳಿಸಿ ಐಷಾರಾಮಿ ಜೀವನ ನಡೆಸಬೇಕೆಂದು ಬಯಸುತ್ತಾರೆ. ಅದನ್ನು ಸಕಾರಗೊಳಿಸಲು ಮುಂದೆ ಸಾಗುತ್ತಾರೆ. ಆದರೆ, ಹಣಕ್ಕಿಂತಲೂ ಗುಣ ಮುಖ್ಯವಾಗಿದೆ. ಹೀಗಾಗಿ, ಮಕ್ಕಳು ಬಾಲ್ಯದಿಂದಲೇ ವ್ಯಕ್ತಿತ್ವ ರೂಪಿಸಿಕೊಳ್ಳುವ ಕಡೆ ಚಿಂತಿಸಬೇಕು. ಜತೆಗೆ ದೇಶಾಭಿಮಾನದಿಂದ ಎಲ್ಲರೂ ಭಾರತಾಂಬೆಯ ಮಕ್ಕಳು ಎಂಬ ವಿಶಾಲ ಮನೋಭಾವದಿಂದ ಬೆಳಸಿಕೊಳ್ಳಬೇಕು ಎಂದರು.
ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಚಿಕ್ಕ ವಯಸ್ಸಿನಲ್ಲೇ ಗುರುತಿಸಬೇಕು. ಮಕ್ಕಳಲ್ಲಿ ನಕಾರಾತ್ಮಕ ಚಿಂತನೆಗಳು ಬಾರದಂತೆ ಆತ್ಮವಿಶ್ವಾಸ ತುಂಬಿ, ಪ್ರೀತಿ, ವಿಶ್ವಾಸದಿಂದ ಎಲ್ಲರಲ್ಲೂ ಕಾಣುವಂತಹ ಮನೋಭಾವ ರೂಢಿಸಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಈ ವೇಳೆ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಗಾಯಕ ಆರ್.ಕೆ.ಪದ್ಮನಾಭ, ಸಮಾಜ ಸೇವಕ ಪಿ.ಸೆಲ್ವಿದಾಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ “ಕರ್ನಾಟಕ ನವಚೇತನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಕುರಿತ “ಶಿವಶರಣ ದಾಸೋಹಿ’ ಕವನ ಸಂಕಲನ ಬಿಡುಗಡೆ ಮಾಡಲಾಯಿತು.