ಸಿವಿಲ್ ಸರ್ವೀಸ್ ಅಕಾಡೆಮಿ ಮಕ್ಕಳ ಕನಸು
Team Udayavani, Mar 6, 2019, 5:43 AM IST
ಡಾ. ರಾಜಕುಮಾರ್ ಅವರ ಸ್ಮರಣಾರ್ಥ ರಾಜಕುಮಾರ್ ಕುಟುಂಬದ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ “ಡಾ. ರಾಜ್ಕುಮಾರ್ ಸಿವಿಲ್ ಸರ್ವೀಸಸ್ ಅಕಾಡೆಮಿ’ ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಇದೇ ವೇಳೆ ಸಂಸ್ಥೆ ನಡೆದು ಬರುತ್ತಿರುವ ಹಾದಿ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ರಾಘವೇಂದ್ರ ರಾಜಕುಮಾರ್, “ನಮ್ಮ ಅಪ್ಪಾಜಿ-ಅಮ್ಮ ಎಲ್ಲರೂ ಕಲೆಯನ್ನ ನಂಬಿ ಬದುಕಿದವರು.
ನಮ್ಮ ಮನೆಯಲ್ಲೂ ಆರಾಧಿಸಿದ್ದು ಕಲೆಯನ್ನ, ಹಾಗಾಗಿ ನಮಗೆ ಬಣ್ಣ ಹಚ್ಚೋದು, ಸಿನಿಮಾ ಮಾಡೋದು ಬಿಟ್ಟು ಬೇರೇನೂ ಗೊತ್ತಿಲ್ಲ. ಆದ್ರೆ ಶಿಕ್ಷಣದ ಮೂಲಕ ನಮ್ಮ ಮಕ್ಕಳು ಬೇರೆ ಏನಾದ್ರೂ ಮಾಡಬಹುದು ಅನ್ನೋದನ್ನ ಡಾ. ರಾಜ್ಕುಮಾರ್ ಸಿವಿಲ್ ಸರ್ವೀಸಸ್ ಅಕಾಡೆಮಿ ಮೂಲಕ ತೋರಿಸಿ ಕೊಡುತ್ತಿದ್ದಾರೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲೂ ಸೇವೆ ಮಾಡುವ ಅವಕಾಶ ನಮಗೆ ಸಿಕ್ಕಿದೆ’ ಎಂದರು.
ಸಂಸ್ಥೆಯ ಬೆಳವಣಿಗೆ ಬಗ್ಗೆ ಮಾತನಾಡಿದ ರಾಘಣ್ಣ, “2017ರ ಏಪ್ರಿಲ್ 24ರಂದು ಡಾ. ರಾಜಕುಮಾರ್ ಜನ್ಮದಿನದಂದು ಅವರ ಹೆಸರಿನಲ್ಲೇ ಈ ಸಿವಿಲ್ ಸರ್ವೀಸಸ್ ಅಕಾಡೆಮಿಯನ್ನು ಪ್ರಾರಂಭಿಸಲಾಯಿತು. 2017-18ನೇ ಸಾಲಿನಲ್ಲಿ ಅಕಾಡೆಮಿಯ ಮೂಲಕ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಪರೀಕ್ಷೆಗಾಗಿ ಸುಮಾರು 650ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದರು.
2018-19ನೇ ಸಾಲಿನಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಕಾಡೆಮಿಯ ಮೂಲಕ ತರಬೇತಿ ಪಡೆದಿದ್ದಾರೆ. ಈ ವರ್ಷ ರಾಜ್ಯದಾದ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅರ್ಹ 150 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದೆ’ ಎಂದರು. ಪತ್ರಿಕಾಗೋಷ್ಠಿಯಲ್ಲಿ “ಡಾ. ರಾಜ್ಕುಮಾರ್ ಸಿವಿಲ್ ಸರ್ವೀಸಸ್ ಅಕಾಡೆಮಿ’ಯ ಉಸ್ತುವಾರಿ ಗಿರೀಶ್ ಮತ್ತಿತರು ಹಾಜರಿದ್ದು, ಸಂಸ್ಥೆಯ ಮುಂಬರುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.