ಯುವಕನ ಕೊಲೆ ಹಣದ ವೈಷಮ್ಯದ ಶಂಕೆ
Team Udayavani, Mar 24, 2019, 12:36 PM IST
ಬೆಂಗಳೂರು: ಮೆಕ್ಯಾನಿಕ್ ಶಾಪ್ವೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆಮಾಡಿ ಪರಾರಿಯಾಗಿರುವ ಘಟನೆ ಟ್ಯಾನರಿ ರಸ್ತೆಯಲ್ಲಿ ಶನಿವಾರ ನಡೆದಿದೆ. ವಿನೋಬಾ ನಗರದ ಸಲೀಂ ಅಲಿಯಾಸ್ ಸಮೀರ್ (22) ಕೊಲೆಯಾದವರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಕೆ.ಜಿ ಹಳ್ಳಿ ಪೊಲೀಸರು ಸಮೀರ್ ಕೊಲೆಗೆ ಹಣಕಾಸು ವೈಷಮ್ಯ ಕಾರಣವಿರಬಹುದು ಎಂದು ಶಂಕಿಸಿದ್ದಾರೆ.
ಟ್ಯಾನರಿ ರಸ್ತೆಯಲ್ಲಿರುವ ಎ.ಎಸ್ ಎಂಜಿನಿಯಂಗ್ ವರ್ಕ್ಸ್ ಹೆಸರಿನ ಮೆಕ್ಯಾನಿಕ್ ಅಂಗಡಿಯಲ್ಲಿ ಸಮೀರ್ ಕೆಲಸ ಮಾಡುತ್ತಿದ್ದ. ಶನಿವಾರ ಸಂಜೆ 6.30ರ ಸುಮಾರಿಗೆ ಬೈಕ್ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರ ಹಾಗೂ ಕಬ್ಬಿಣದ ರಾಡ್ನಿಂದ ಸಮೀರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಶಾಪ್ ಮಾಲೀಕ ಘಟನೆ ಕಂಡು ಆತಂಕಗೊಂಡು ಸ್ಥಳೀಯರ ಜತೆಗೂಡಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಮೀರ್ ಅಸುನೀಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಕೆಲದಿನಗಳ ಹಿಂದೆ ಹಣಕಾಸು ವಿಚಾರಕ್ಕೆ ಸಮೀರ್ ಯುವಕರ ಜತೆ ಜಗಳ ಮಾಡಿಕೊಂಡಿದ್ದ ಎಂಬ ಮಾಹಿತಿಯಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅದಿಕಾರಿ ತಿಳಿಸಿದರು.