ಐಟಿ ರೈಡ್ ಬಿಜೆಪಿ ಕೃಪಾಪೋಷಿತ, ಐಟಿ ಮುಖ್ಯಸ್ಥ ಬಿಜೆಪಿ ಅಧ್ಯಕ್ಷರ ಕೈಗೊಂಬೆ- ಪುಟ್ಟರಾಜು
Team Udayavani, Mar 28, 2019, 9:47 AM IST
ಬೆಂಗಳೂರು: ನನ್ನ ಹಾಗು ಇತರ ಜೆಡಿಎಸ್ ಮುಖಂಡರ ಮನೆ ಮೇಲೆ ನಡೆದ ಐಟಿ ದಾಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯೇ ಕಾರಣ. ಇದರಿಂದ ಚುನಾವಣೆಯಲ್ಲಿ ಗೆಲ್ಲಬಹುದೆಂದು ಎಂದುಕೊಂಡರೇ ಅದು ಅವರ ಭ್ರಮೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ ನೀಡಿದ್ದಾರೆ.
ಗುರುವಾರ ಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಸೇರಿ ಹತ್ತಕ್ಕೂ ಹೆಚ್ಚು ಜೆಡಿಎಸ್ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ.
ದಾಳಿ ನಂತರ ಮಾತನಾಡಿದ ಪುಟ್ಟರಾಜು, ‘ಇದು 100 ಪ್ರತಿಶತ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಮೂಲಕ ನಡೆದ ದಾಳಿ. ಐಟಿ ಮುಖ್ಯಸ್ಥರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕೈಗೊಂಬೆ. ಐಟಿ ದಾಳಿಯ ಬಗ್ಗೆ ನಿನ್ನೆಯೇ ಮುಖ್ಯಮಂತ್ರಿಗಳಿಗೆ ಬಿಜೆಪಿ ನಾಯಕರಿಂದ ಮಾಹಿತಿ ಬಂದಿದೆ. ‘ ಎಂದು ಕಿಡಿಕಾರಿದರು.
ಐಟಿ ದಾಳಿ ನಡೆಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲ್ಲಬಹುದು ಎಂದು ಕೊಂಡರೆ ಅದು ಅವರ ಭ್ರಮೆ. ಆದರೆ ಜೆಡಿಎಸ್ ಕಾರ್ಯಕರ್ತರು ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುತ್ತಾರೆ . ಹಾಗಾಗಿ ಚುನಾವಣೆ ಗೆಲುವು ನಮ್ಮದೇ ಎಂದರು.