ಪದವಿಯ ಜೊತೆಗೆ ಕೌಶಲ್ಯವೂ ಇರಲಿ
Team Udayavani, Mar 29, 2019, 11:47 AM IST
ಬೆಂಗಳೂರು: ವಿದ್ಯಾರ್ಥಿಗಳು ಪದವಿಗಳಿಸುವುದರ ಜೊತೆಗೆ ಕೌಶಲ್ಯವೃದ್ಧಿಗೂ ಗಮನ ನೀಡಬೇಕು ಎಂದು ಬೆಂಗಳೂರು ಕೇಂದ್ರ ವಿ.ವಿಯ ಕುಲಸಚಿವ ಡಾ. ಎಂ ರಾಮಚಂದ್ರಗೌಡ ಹೇಳಿದರು.
ಆರ್.ಸಿ ಕಾಲೇಜಿನ ಆವರಣದಲ್ಲಿ ಬುಧುವಾರ ಆಯೋಜಿಸಿದ್ದ “ಸಾರಂಗ್- ತಾರಂಗ್’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ವಿದ್ಯಾರ್ಥಿಗಳು ಪದವಿ ಮುಗಿಸಿದರೂ ಉದ್ಯೋಗಕ್ಕೆ ಬೇಕಾದ ಕೌಶಲ್ಯವನ್ನು ರೂಢಿಸಿಕೊಳ್ಳದೆ ಇರುವುದರಿಂದ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ವಲಯದ ಮೇಲೆ ಸಹ ಇದು ಪರಿಣಾಮ ಬೀರುತ್ತಿದೆ.
ಉದ್ಯೋಗ ವಲಯದಲ್ಲಿ ಕೆಲಸಗಾರರ ಕೊರತೆಗೂ ಇದು ಕಾರಣವಾಗಿದೆ. ಪದವಿ ಮುಗಿಸಿರುವ ಶೇ 90 ವಿದ್ಯಾರ್ಥಿಗಳಲ್ಲಿ ಕೌಶಲ್ಯದ ಕೊರತೆ ಇರುವುದು ಆಘಾತಕಾರಿ ಬೆಳವಣಿಗೆ ಎಂದರು.
ಬೆಂಗಳೂರು ಕೇಂದ್ರ ವಿವಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಭಾಷಾ ಕೌಶಲ್ಯ ಅಭಿವೃದ್ಧಿ, ವಿವಿಧ ಸಾಂಸ್ಕೃತಿಕ ಮತ್ತು ಕೌಶಲ್ಯ ವೃದ್ಧಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಈ ಹಿಂದೆ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದರು ಹೀಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಷ್ಟವಾಗಿತ್ತು. ಈಗ ವಿವಿ ವಿಭಜನೆಯಾಗಿರುವುದರಿಂದ ಒತ್ತಡ ಕಡಿಮೆಯಾಗಿದ್ದು, ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಸೈಯದ್ ಯೂಸಫ್, ಪ್ರತಿ ವರ್ಷ ವಾಣಿಜ್ಯ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಸೃಜನಶೀಲತೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ನಟ ವಿಕ್ಕಿ ವರುಣ್, ನಟಿ ನಿಮಿಕಾ ಮತ್ತಿತರರು ಉಪಸ್ಥಿತರಿದ್ದರು.