ಚುನಾವಣಾ ಅಧಿಕಾರಿ ಹೃದಯಾಘಾತದಿಂದ ನಿಧನ
Team Udayavani, Apr 21, 2019, 3:00 AM IST
ಕಾರವಾರ: ಲೋಕಸಭಾ ಚುನಾವಣೆಯಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರದ ಸೆಕ್ಟರ್ ಅಧಿ ಕಾರಿಯಾಗಿದ್ದ ರವಿಕಾಂತ ಆರ್. ಮಾಳ್ಸೇಕರ್ (52) ಶುಕ್ರವಾರ ತಡರಾತ್ರಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಕಾರವಾರ ತಾಲೂಕಿನ ಬಿಣಗಾದವರಾದ ಮಾಳವೇಕರ್, ಸಮಾಜ ಕಲ್ಯಾಣ ಇಲಾಖೆ ಅಂಕೋಲಾದ ಕಚೇರಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಅಂಕೋಲಾ ಸಮೀಪ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು.
ಈ ಸಂಬಂಧ ತಮ್ಮ ಮನೆಯಿಂದ ವಾಹನದಲ್ಲಿ ಹೊರಟಿದ್ದರು. ರಾತ್ರಿ 12ರ ಸುಮಾರಿಗೆ ಎದೆ ನೋಯುತ್ತಿರುವುದಾಗಿ ವಾಹನ ಚಾಲಕರಿಗೆ ತಿಳಿಸಿದ್ದರು. ಕೂಡಲೇ ಅವರನ್ನು ಪಟ್ಟಣದ ಕಮಲಾಬಾಯಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅವರು ಆಗಲೇ ಮೃತಪಟ್ಟಿದ್ದರು.