ಸುರತ್ಕಲ್: ಕೊರತೆಯ ನಡುವೆಯೇ ಪೋಲಾಗುತ್ತಿದೆ ಶುದ್ಧ ನೀರು!
Team Udayavani, Apr 26, 2019, 6:00 AM IST
ಪೋಲಾಗುತ್ತಿರುವ ಶುದ್ಧ ನೀರು.
ಸುರತ್ಕಲ್: ಇಲ್ಲಿನ ಗೋವಿಂದದಾಸ ಬಳಿ ಇರುವ ಬೃಹತ್ ಟ್ಯಾಂಕ್ನ ಪೈಪ್ ತುಂಡಾಗಿ ಮೂರ್ನಾಲ್ಕು ತಿಂಗಳಿಂದ ಸಾವಿರಾರು ಲೀಟರ್ ನೀರು ಪೋಲಾಗುತ್ತಿದೆ. ಕಾರಣ ಇದಕ್ಕೆ ಮೇಲೇರುವ ಏಣಿ ತುಕ್ಕು ಹಿಡಿದು ಬೀಳುವ ಸ್ಥಿತಿಯಲ್ಲಿದೆ.
ರಸ್ತೆ ಸಮೀಪವೇ ಈ ಟ್ಯಾಂಕ್ ಇದ್ದು ಸುರತ್ಕಲ್, ಇಡ್ಯಾ ಸಹಿತ ವಿವಿಧೆಡೆ ನೀರು ಸರಬರಾಜಾಗುತ್ತದೆ. ಒಂದು ಟ್ಯಾಂಕ್ 10 ಲಕ್ಷ ಲೀಟರ್ ಸಾಮರ್ಥ್ಯದ ಇದ್ದರೆ, ಇನ್ನೊಂದು ಕಡಿಮೆ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗಿದೆ. ಸಣ್ಣ ಟ್ಯಾಂಕ್ನ ಅಡಿ ಭಾಗದ ಪೈಪ್ ಮುರಿದ ಕಾರಣ ದುರಸ್ತಿಗೆ ಮೇಲೇರುವ ಅಗತ್ಯವಿದೆ. ಆದರೆ ತುಕ್ಕು ಹಿಡಿದ ಏಣಿಯಿಂದಾಗಿ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿ ಇರುವುದರಿಂದ ದುರಸ್ತಿ ವಿಳಂಬವಾಗಿದೆ.
ಜೀವನದಿ ನೇತ್ರಾವತಿಯಲ್ಲಿ ನೀರಿನ ಒಳಹರಿವು ಕಡಿಮೆಯಾಗುತ್ತಿದ್ದಂತೆ ಮಹಾನಗರ ಪಾಲಿಕೆ ಪರ್ಯಾ ಯ ವ್ಯವಸ್ಥೆ ಮೂಲಕ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಂಡಿದೆ. ಅಲ್ಲದೆ ಮಿತವ್ಯಯದ ಮಂತ್ರ ಪಠಿಸ ಲಾಗುತ್ತಿದೆ. ಆದರೆ ಸೋರಿಕೆಯನ್ನು ತಡೆಗಟ್ಟಲು ಬೇಕಾದ ಇಚ್ಛಾಶಕ್ತಿ ಅಗತ್ಯವಿದೆ. ತತ್ಕ್ಷಣ ಇಂತಹ ಸೋರಿಕೆಗಳನ್ನು ಪತ್ತೆ ಹಚ್ಚಿ ಕುಡಿಯುವ ನೀರನ್ನು ಉಪಯೋಗಕ್ಕೆ ಬಳಸಿ ಕೊಳ್ಳಲು ಮುಂದಾಗಬೇಕಿದೆ.
ವ್ಯವಸ್ಥೆ ಸರಿಯಿಲ್ಲ
ಇಲ್ಲಿನ ಪೈಪ್ ತುಂಡಾಗಿರುವುದನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿನ ವ್ಯವಸ್ಥೆ ಸರಿ ಇಲ್ಲದ ಕಾರಣ ದುರಸ್ತಿ ಆಗಿಲ್ಲ.
ಶುದ್ಧ ನೀರು ಚರಂಡಿ ಪಾಲಾಗುತ್ತಿದೆ. ಒಂದೆರಡು ತಿಂಗಳು ನೀರನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಉಮೇಶ್ ದೇವಾಡಿಗ ಇಡ್ಯಾತಿಳಿಸಿದ್ದಾರೆ.
– ರವಿಶಂಕರ್ ವಿಭಾಗೀಯ ಆಯುಕ್ತರು, ಸುರತ್ಕಲ್ ಪಾಲಿಕೆ