ಇನ್ನು ನಗರದ ಸಿಟಿ ಬಸ್ಗಳಲ್ಲೂ ಟಿಕೆಟ್ ಚೆಕ್ಕಿಂಗ್ ವ್ಯವಸ್ಥೆ
Team Udayavani, Apr 26, 2019, 6:00 AM IST
ಸಿಟಿ ಬಸ್ಗಳಲ್ಲಿ ಟಿಕೆಟ್ ತಾಪಾಸಣೆ ನಡೆಸುತ್ತಿರುವುದು.
ಮಹಾನಗರ: ಸರಕಾರಿ ಬಸ್ಗಳಲ್ಲಿ ನಡೆಯುವ ಟಿಕೆಟ್ ತಪಾಸಣೆ ಇದೀಗ ನಗರದಲ್ಲಿ ಓಡಾಡುವ ಸಿಟಿ ಬಸ್ಗಳಿಗೂ ಬಂದಿದೆ.
ನಗರದಲ್ಲಿ ಪ್ರತಿದಿನ ಓಡಾಡುವ 300ಕ್ಕೂ ಹೆಚ್ಚಿನ ಸಿಟಿ ಬಸ್ಗಳ ಪೈಕಿ ಹೆಚ್ಚಿನ ಬಸ್ಗಳಲ್ಲಿ ನಿರ್ವಾಹಕರು ಟಿಕೆಟ್ ನೀಡುವುದಿಲ್ಲ. ಇದನ್ನು ತಡೆಯುವ ಉದ್ದೇಶದಿಂದ ಸಿಟಿ ಬಸ್ಗಳಲ್ಲಿ ಟಿಕೆಟ್ ತಾಪಾಸಣೆ ವ್ಯವಸ್ಥೆಯನ್ನು ಪರಿಚಯಿಸಲು ಸಿಟಿ ಬಸ್ ಮಾಲಕರ ಸಂಘ ತೀರ್ಮಾನಿಸಿದೆ.
ಸಿಟಿ ಬಸ್ ಸಂಪರ್ಕ ವ್ಯವಸ್ಥೆ ದಿನದಿಂದ ದಿನಕ್ಕೆ ಡಿಜಿಟಲೀಕೃತವಾಗುತ್ತಿದೆ. ಮೊನ್ನೆಯಷ್ಟೇ ‘ಚಲೋ’ ಎಂಬ ಆ್ಯಪ್ ಬಿಡುಗಡೆಗೊಂಡಿದ್ದು, ನಗರದಲ್ಲಿ ಓಡಾಡುವ ಎಲ್ಲ ಬಸ್ಗಳಿಗೆ ಜಿಪಿಎಸ್ ಅಳವಡಿಕೆ ಅನುಷ್ಠಾನದಲ್ಲಿದೆ. ಸಾರಿಗೆ ವ್ಯವಸ್ಥೆಯಲ್ಲಿ ಇಷ್ಟೆಲ್ಲ ಹೊಸತನ ತಂದರೂ, ಟಿಕೆಟ್ ನೀಡದಿರುವ ಸಮಸ್ಯೆಗೆ ಮಾತ್ರ ಈವರೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಇದೀಗ ಸಿಟಿ ಬಸ್ಗಳಲ್ಲಿ ಟಿಕೆಟ್ ಚೆಕ್ಕಿಂಗ್ ಮಂದಿ ಓಡಾಡಲಿದ್ದಾರೆ.
ಸ್ಟೇಟ್ಬ್ಯಾಂಕ್-ಅತ್ತಾವರ-ಮಂಗಳಾದೇವಿ (ರೂಟ್ ನಂ.27) ರೂಟ್ನಲ್ಲಿ ಈಗಾಗಲೇ ಟಿಕೆಟ್ ಚೆಕ್ಕಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಕೆಲವೇ ದಿನಗಳಲ್ಲಿಯೇ ತಲಪಾಡಿ ಮತ್ತು ರಥಬೀದಿ ಕಡೆಗಳಲ್ಲಿ ಸಂಚರಿಸುವ ಬಸ್ಗಳಿಗೂ ಟಿಕೆಟ್ ಚೆಕ್ಕಿಂಗ್ ಮಂದಿಯನ್ನು ನಿಯೋಜಿಸಲಾಗುತ್ತಿದೆ. ಹಂತ ಹಂತವಾಗಿ ನಗರದ ಎಲ್ಲ ಸಿಟಿ ಬಸ್ ಮಾರ್ಗಗಳಲ್ಲೂ ನೂತನ ಯೋಜನೆ ಅನುಷ್ಠಾನಿಸಿ, ಬಸ್ ನಿರ್ವಾಹಕ ಪ್ರತಿ ಪ್ರಯಾಣಿಕರಿಗೂ ಟಿಕೆಟ್ ನೀಡುವಂತೆ ಮಾಡುವುದೇ ಇದರ ಉದ್ದೇಶ.
ಯಾವ ರೀತಿ ನಿರ್ವಹಣೆ?
ಸಿಟಿ ಬಸ್ ಮಾಲಕರ ಸಂಘ ಮತ್ತು ‘ಚಲೋ’ ಆ್ಯಪ್ ಸಂಸ್ಥೆಯ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆಯುತ್ತದೆ. ಟಿಕೆಟ್ ಚೆಕ್ಕಿಂಗ್ ಮಾಡುವ ಸಲುವಾಗಿ ನಾಲ್ಕರಿಂದ ಐದು ಮಂದಿಯನ್ನು ನಿಯೋಜಿಸಲಾಗುತ್ತದೆ. ಅವರು ಪ್ರತೀದಿನ ಬಸ್ ಸಂಚರಿಸುವ ವೇಳೆ ದಿಢೀರ್ ಆಗಮಿಸಿ, ಪ್ರಯಾಣಿಕರ ಟಿಕೆಟ್ ಪರಿಶೀಲನೆ ಮಾಡುತ್ತಾರೆ. ಒಂದು ವೇಳೆ ಪ್ರಯಾಣಿಕ ಟಿಕೆಟ್ ತೆಗೆದುಕೊಳ್ಳದಿದ್ದರೆ, ಟಿಕೆಟ್ ಬಗೆಗಿನ ಮಹತ್ವವನ್ನು ಹೇಳಲಾಗುತ್ತದೆ. ನಿರ್ವಾಹಕ ಟಿಕೆಟ್ ನೀಡದಿದ್ದರೆ ಅವರಿಗೆ ಎಚ್ಚರಿಕೆ ನೀಡಲಾಗುತ್ತದೆ.
ಸ್ಪಾಟ್ ಟಿಕೆಟಿಂಗ್ ವ್ಯವಸ್ಥೆ
ಟಿಕೆಟ್ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಬೇಕು ಎಂಬ ಉದ್ದೇಶದಿಂದ ಸ್ಪಾಟ್ ಟಿಕೆಟಿಂಗ್ ವ್ಯವಸ್ಥೆ ಆರಂಭಿಸಲಾಗಿದೆ. ಮೊದಲನೇ ಹಂತವಾಗಿ ನಗರದ ಅತ್ತಾವರ ಬಸ್ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿದೆ. ಈ ಬಸ್ ನಿಲ್ದಾಣದಲ್ಲಿ ಸದಾ ಜನಜಂಗುಳಿ ಇರುತ್ತದೆ. ಈ ಸಮಯದಲ್ಲಿ ಚಲೋ ಕಂಪೆನಿಯ ಅಧಿಕಾರಿಯೊಬ್ಬರು ಟಿಕೆಟ್ ವ್ಯವಸ್ಥೆಗೆಂದು ಬಸ್ ನಿಲ್ದಾಣದಲ್ಲಿ ನಿಂತಿರುತ್ತಾರೆ. ಪ್ರಯಾಣಿಕರಿಗೆ ಸ್ಥಳದಲ್ಲಿಯೇ ಟಿಕೆಟ್ ವ್ಯವಸ್ಥೆ ಕಲ್ಪಿಸುತ್ತಾರೆ.
ಟಿಕೆಟ್ನಲ್ಲೇ ಅರಿವು
ಮುಂದಿನ ದಿನಗಳಲ್ಲಿ ಸಿಟಿ ಬಸ್ಗಳಲ್ಲಿ ನೀಡುವ ಟಿಕೆಟ್ನಲ್ಲಿ ಪ್ರಯಾಣಿಕರು ದೂರುಗಳನ್ನು ನೀಡಲು ವಾಟ್ಸಾಪ್ ಸಂಖ್ಯೆ, ಜತೆಗೆ ಟಿಕೆಟ್ ತೆಗೆದುಕೊಳ್ಳುವ ಬಗ್ಗೆ ಅರಿವು ಮೂಡಿಸುವ ಸಂದೇಶ ಇರಲಿದೆ. ಈಗಾಗಲೇ ಅತ್ತಾವರ ರೂಟ್ ಬಸ್ ಟಿಕೆಟ್ನಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ