ಹೈಟೆನ್ಷನ್ ತಂತಿಗಳ ಕೆಳಗೆ ಅಪಾಯದ ಬದುಕು
Team Udayavani, Apr 26, 2019, 12:06 PM IST
ಕೆ.ಆರ್.ಪುರ: ಹೈಟೆನ್ಷನ್ ತಂತಿ ಹಾದುಹೋಗಿರುವ ಸ್ಥಳದ ಆಸುಪಾಸು ಯಾವುದೇ ಕಟ್ಟಡ ನಿರ್ಮಿಸಬಾರದೆಂಬ ನಿಯಮ ಉಲ್ಲಂಘಿಸಿ ಕೆಲವರು ಕಟ್ಟಡ ನಿರ್ಮಿಸುತ್ತಿದ್ದು, ಅಂತಹ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಮೂಲಕ ಅಧಿಕಾರಿಗಳು, ಸಾವುನೋವುಗಳಿಗೆ ಕಾರಣರಾಗುತ್ತಿದ್ದಾರೆ.
ಕೆ.ಆರ್.ಪುರದ ಬಸವನಪುರ ವಾರ್ಡ್ನ ಮನೇಶ್ವರ ಬಡಾವಣೆ, ಅಯ್ಯಪ್ಪನಗರ, ಹೂಡಿ, ಕೃಷ್ಣನಗರ, ಭಟ್ಟರಹಳ್ಳಿ ಮೂಲಕ ಹಾದುಹೋಗುವ ಈ ಹೈಟೆನ್ಷನ್ ವೈರಗಳು, ಹೂಡಿ ಕೆಪಿಟಿಸಿಎಲ್ ಘಟಕ ಸೇರುತ್ತವೆ. ಹೀಗೆ ವಿವಿಧ ಬಡಾವಣೆಗಳ ಮೂಲಕ ಸಾಗುವ ವಿದ್ಯುತ್ ತಂತಿಗಳು, ಮುನೇಶ್ವರ ಬಡಾವಣೆ, ಅಯ್ಯಪ್ಪನಗರ, ಕೃಷ್ಣನಗರದಲ್ಲಿ ಕೈಗೆಟುಕುವ ಮಟ್ಟಕ್ಕಿವೆ. ಭೂಮಿಗೆ ಬಂಗಾರದ ಬೆಲೆ ಇರುವುದರಿಂದ ಒಂದಡಿ ಜಾಗವನ್ನೂ ಬಿಡದೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಪ್ರಾಣ ಹಾನಿಯಾಗುವ ಬಗ್ಗೆ ಯಾರೊಬ್ಬರಿಗೂ ಪರಿವೆಯಿಲ್ಲ.
ಅಧಿಕಾರಿಗಳಿಂದ ಅನುಮತಿ: ಭೂ ಮಾಲೀಕರು ಸರ್ಕಾರದ ನಿಯಮಗಳನ್ನು ಪಾಲಿಸದೆ ಕಟ್ಟಡ ನಿರ್ಮಿಸುತ್ತಾರೆ. ಇವರು ಅಪಾಯಕಾರಿ ಸ್ಥಳದಲ್ಲಿ, ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟುತ್ತಿದ್ದಾರೆ ಎಂದು ತಿಳಿದಿದ್ದರೂ ಪಾಲಿಕೆ ಅಧಿಕಾರಿಗಳು ನಕ್ಷೆ ಮಂಜೂರು ಮಾಡಿ, ಅನುಮತಿ ನೀಡುತ್ತಾರೆ. ಕೆಲವೊಮ್ಮೆ ಪ್ರಭಾವಿಗಳ ಒತ್ತಡಕ್ಕೆ ಮಣಿಯುವ ಬೆಸ್ಕಾಂ ಮತ್ತು ಬಿಬಿಎಂಪಿ ಅಧಿಕಾರಿಗಳು, ಅಪಾಯಕಾರಿ ಸ್ಥಳದಲ್ಲಿ ನಿಯಮಬಾಹಿರವಾಗಿ ಕಟ್ಟಡ ನಿರ್ಮಿಸಲು ಅನುಮತಿ ನೀಡುತ್ತಾರೆ.
ಇವರೆಲ್ಲರ ನಿರ್ಲಕ್ಷ್ಯದಿಂದ ವಿದ್ಯುತ್ ಪ್ರವಹಿಸಿ ಹಲವು ಕೂಲಿ ಕಾರ್ಮಿಕರು ಪ್ರಾಣ ಕಳೆದು ಕೊಂಡಿದ್ದಾರೆ. ಎರಡು ವರ್ಷದಲ್ಲಿ ವಿದ್ಯುತ್ ತಗುಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಆದರೂ, ಇಂತಹ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ಅಧಿಕಾರಿಗಳು ಅನುಮತಿ ನೀಡುತ್ತಲೇ ಇದ್ದಾರೆ.