ಬುರ್ಖಾ ನಿಷೇಧ ಆಗ್ರಹಿಸಿರುವ ಶಿವ ಸೇನೆ ವಿರುದ್ಧ EC ಕ್ರಮಕ್ಕೆ ಓವೈಸಿ ಒತ್ತಾಯ
Team Udayavani, May 1, 2019, 3:33 PM IST
ಹೊಸದಿಲ್ಲಿ : ರಾಷ್ಟ್ರ ಭದ್ರತೆಗಾಗಿ ಬುರ್ಖಾ ನಿಷೇಧಿಸಬೇಕೆಂದು ಶಿವಸೇನೆ ತನ್ನ “ಸಾಮ್ನಾ’ ಮುಖವಾಣಿಯಲ್ಲಿ ಬರೆದಿರುವ ಲೇಖನಕ್ಕೆ ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್ ಹಾಲಿ ಸಂಸದ, ಅಸಾದುದ್ದೀನ್ ಓವೈಸಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಖಂಡಿಸಿದ್ದಾರೆ.
ಬುರ್ಖಾ ನಿಷೇಧಕ್ಕೆ ಆಗ್ರಹಿಸುವ ಮೂಲಕ ಶಿವಸೇನೆ, ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದೆ; ಚುನಾವಣಾ ಆಯೋಗ ಇದನ್ನು ಗಮನಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಓವೈಸಿ ಹೇಳಿದ್ದಾರೆ.
‘ಬುರ್ಖಾ ಧರಿಸುವುದು ಐಚ್ಛಿಕವಾಗಿದೆ. ಬುರ್ಖಾ ಧರಿಸುವುದರಿಂದ ರಾಷ್ಟ್ರ ಭದ್ರತೆಗೆ ಅಪಾಯ ಇದೆ ಎಂದಾದರೆ ಸಾಧ್ವಿಗಳು ತೊಡುವ ಉಡುಪಿನಿಂದಲೂ ಅದೇ ರೀತಿಯ ಪರಿಣಾಮವಾಗಲು ಸಾಧ್ಯವಿದೆ’ ಎಂದು ಓವೈಸಿ ಹೇಳಿದ್ದಾರೆ.
ಬುರ್ಖಾ ನಿಷೇಧಕ್ಕೆ ಆಗ್ರಹಿಸಿರುವ ಶಿವ ಸೇನೆಯ ಲೇಖನವನ್ನು ಪೋಪಟ್ ಮಾಸ್ಟರ್ (ಅರ್ಥಹೀನ) ಎಂದು ಕರೆದಿರುವ ಓವೈಸಿ, ತೀರ ಈಚಿನ ವರೆಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದ ಶಿವ ಸೇನೆ ಈಗ ಬಿಜೆಪಿಯೊಂದಿಗೆ ಮತ್ತೆ ಕೈಜೋಡಿಸಿದ್ದು ಅವೆರಡೂ ಒಂದಾಗಿವೆ ಎಂದು ಹೇಳಿದರು.