ದೇಶ ವಿಭಜಿಸ ಬಯಸುವವರಿಗೆ ಮಮತಾ ಬ್ಯಾನರ್ಜಿ ಬೆಂಬಲ : ಅಮಿತ್ ಶಾ ಆರೋಪ
Team Udayavani, May 1, 2019, 3:50 PM IST
ಕಲ್ಯಾಣಿ : ಮಮತಾ ಬ್ಯಾನರ್ಜಿ ವಿರುದ್ಧ ವಾಕ್ ದಾಳಿ ಮುಂದುವರಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ‘ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಿ ದೇಶವನ್ನು ವಿಭಜಿಸಲು ಬಯಸುವವರಿಗೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬೆಂಬಲ ನೀಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಬೊಂಗಾವ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರಾಲಿಯಲ್ಲಿ ಮಾತನಾಡುತ್ತಿದ್ದ ಅಮಿತ್ ಶಾ, “ಕೇಂದ್ರದಲ್ಲಿ ಯಾರೇ ಅಧಿಕಾರದಲ್ಲಿರಲಿ, ಭಾರತೀಯ ಜನತಾ ಪಕ್ಷ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿಯೇ ಇರುವಂತೆ ಮಾಡುವಲ್ಲಿನ ತನ್ನ ಹೋರಾಟವನ್ನು ಮುಂದುವರಿಸಲಿದೆ’ ಎಂದು ಹೇಳಿದರು.
“ಇವತ್ತು ನಾವು (ಬಿಜೆಪಿ) ಅಧಿಕಾರದಲ್ಲಿದ್ದೇವೆ. ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿದ್ದಾರೆ. ಮುಂಬರುವ ದಿನಗಳಲ್ಲೂ ಅವರೇ ಪ್ರಧಾನಿಯಾಗಿ ಇರಲಿದ್ದಾರೆ. ಆದರೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇಲ್ಲದ ದಿನ ಬಂದಾಗ, ಪಕ್ಷದ ಕಾರ್ಯಕರ್ತರು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಮುಂದುವರಿಯವುದಕ್ಕಾಗಿ ಹೋರಾಡಲಿದ್ದಾರೆ’ ಎಂದು ಅಮಿತ್ ಶಾ ಹೇಳಿದರು.