ಫೋನಿ: 12 ಲಕ್ಷ ಜನರ ಸ್ಥಳಾಂತರ, ಕನಿಷ್ಠ ಜೀವಬಲಿ; ಭಾರತಕ್ಕೆ ವಿಶ್ವಸಂಸ್ಥೆ ಪ್ರಶಂಸೆ
Team Udayavani, May 4, 2019, 12:19 PM IST
ವಿಶ್ವಸಂಸ್ಥೆ : ಒಡಿಶಾದ ಪುರಿಗೆ ನಿನ್ನೆ ಶುಕ್ರವಾರ ಬೆಳಗ್ಗೆ ಅಪ್ಪಳಿಸಿದ್ದ ಅತ್ಯಂತ ವಿನಾಶಕಾರಿ ಹಾಗೂ ಕಳೆದ 20 ವರ್ಷಗಳಲ್ಲೇ ಅತ್ಯಂತ ಪ್ರಬಲ ಎನಿಸಿರುವ ಫೋನಿ ಚಂಡಮಾರುತಕ್ಕೆ ಕನಿಷ್ಠ ಸಂಖ್ಯೆಯ ಜೀವಬಲಿ ಆಗುವಲ್ಲಿ ಗರಿಷ್ಠ ಮುಂಜಾಗ್ರತೆ, 12 ಲಕ್ಷ ಜನರ ಸ್ಥಳಾಂತರ ಮತ್ತು ಪರಿಣಾಮಕಾರಿ ಪರಿಹಾರ ಕ್ರಮ ತೆಗೆದುಕೊಂಡ ಭಾರತದ ಯತ್ನವನ್ನು ವಿಶ್ವಸಂಸ್ಥೆ ಬಹುವಾಗಿ ಪ್ರಶಂಸಿಸಿದೆ.
ಫೋನಿ ಚಂಡಮಾರುತವು ಅಪ್ಪಳಿಸುವ ನಿಖರ ಕಾಲ, ಸ್ಥಳ ಹಾಗೂ ಅದು ಒಳಗೊಳ್ಳುವ ಪ್ರದೇಶಗಳನ್ನು ನಿಖರವಾಗಿ ಮತ್ತು ಸಾಕಷ್ಟು ಮುಂಚಿತವಾಗಿಯೇ ಗುರುತಿಸಿ ಎಚ್ಚರಿಕೆ ನೀಡಿ 12 ಲಕ್ಷ ಜನರ ಸ್ಥಳಾಂತರ ಸಕಾಲದಲ್ಲಿ ಆಗುವಂತೆ ಮಾಡಿರುವ ಭಾರತೀಯ ಹವಾಮಾನ ಇಲಾಖೆಯ ನಿಖರತೆ ಮತ್ತು ಸೂಕ್ಷ್ಮತೆಯನ್ನು ವಿಶ್ವಸಂಸ್ಥೆಯ ನೈಸರ್ಗಿಕ ಪ್ರಕೋಪ ನಾಶ ನಷ್ಟ ಕಡಿಮೆ ಮಾಡುವ ಸಂಸ್ಥೆಯು ಕೊಂಡಾಡಿದೆ.
ಫೋನಿ ಚಂಡಮಾರುತ ತನ್ನೆಲ್ಲ ಶಕ್ತಿಯೊಂದಿಗೆ ಗಂಟೆಗೆ 200 ಕಿ.ಮೀ. ವೇಗದಲ್ಲಿ ನಿನ್ನೆ ಶುಕ್ರವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಒಡಿಶಾ ಕರಾವಳಿಗೆ ಅಪ್ಪಳಿಸಿ ವ್ಯಾಪಕ ಸೊತ್ತು, ಸೌಕರ್ಯಗಳ ನಾಶ ನಷ್ಟ ಉಂಟುಮಾಡಿತ್ತು. ಪರಿಣಾಮವಾಗಿ ಕನಿಷ್ಠ 8 ಮಂದಿ ಮಡಿದಿದ್ದರು.