ಪೊಲೀಸ್ ಮಾಹಿತಿದಾರರೆಂದು ನಕ್ಸಲರಿಂದ ಈವರೆಗೆ 522 ವ್ಯಕ್ತಿಗಳ ಹತ್ಯೆ
Team Udayavani, May 8, 2019, 1:51 PM IST
ನಾಗಪುರ: ಮಹಾರಾಷ್ಟ್ರದ ಗಡಿcರೋಲಿ ಜಿಲ್ಲೆಯಲ್ಲಿ ನಕ್ಸಲರು ಪೊಲೀಸ್ ಮಾಹಿತಿದಾರರು ಎಂಬ ತಪ್ಪು ಆರೋಪದ ಮೇಲೆ ಈವರೆಗೆ 522 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಜಿಲ್ಲೆಯ ಎಟ್ಟಪಾಲಿ ತಾಲೂಕಿನ ಜಾಂಭಿಯಾ ಗಟ್ಟ ಪ್ರದೇಶದಲ್ಲಿ ಮೃತವಾಗಿ ಕಂಡುಬಂದಿರುವ ಶಿಶೀರ್ ಮಂಡಲ್(42) ಎಂದು ಗುರುತಿಸಲಾದ ವ್ಯಕ್ತಿಯು ವಾಸ್ತವದಲ್ಲಿ ಪೊಲೀಸ್ ಮಾಹಿತಿದಾರನಲ್ಲ ಎಂದು ಗಡಿcರೋಲಿ ಪೊಲೀಸ್ ಹೇಳಿಕೆ ನೀಡಿದೆ. ಛತ್ತೀಸ್ಗಢ್ನ ಬಾಂದೆ ಪ್ರದೇಶದ ನಿವಾಸಿಯಾಗಿದ್ದ ಮಂಡಲ್ ಸಾಮಾನ್ಯವಾಗಿ ನಕ್ಸಲರಿಗೆ ಸಹಾಯ ಮಾಡುತ್ತಿದ್ದ ಮತ್ತು ಹಣಕಾಸು ವಿವಾದದಲ್ಲಿ ಅವರಿಂದ ಕೊಲ್ಲಲ್ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ತಲೆಯ ಮೇಲೆ ಗುಂಡಿನ ದಾಳಿಯ ಗಾಯದೊಂದಿಗೆ ಬೆಳಗ್ಗೆ 9 ಗಂಟೆ ಸುಮಾರಿಗೆ ಜಾಂಭಿಯಾ ಗಟ್ಟ ಪ್ರದೇಶದ ಅಡೆಂಗೆ ರಸ್ತೆಯಲ್ಲಿ ಮಾಂಡಲ್ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ನಕ್ಸಲರು ಕೆಲವರನ್ನು ಪೊಲೀಸ್ ಮಾಹಿತಿ ದಾರರು ಎಂದು ಆರೋಪಿಸುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಈ ರೀತಿಯಲ್ಲಿ ನಕ್ಸಲರು ಈವರೆಗೆ ಗಡಿcರೋಲಿಯಲ್ಲಿ 522 ಮಂದಿ ಅಮಾಯಕರನ್ನು ಕೊಂದಿದ್ದಾರೆ ಎಂದು ಗಡಿcರೋಲಿ ಪೊಲೀಸರು ಹೇಳಿದ್ದಾರೆ.