ಮುಗಿಯದ ಕಾಮಗಾರಿಯಿಂದ ನಿತ್ಯ ಸಮಸ್ಯೆ
•ತೆರವುಗೊಂಡ ಸೇತುವೆ •2018ರಲ್ಲಿ ಕಾಮಗಾರಿ ಆರಂಭ •ಇನ್ನೂ ಈಡೇರದ ಭರವಸೆ
Team Udayavani, May 13, 2019, 9:51 AM IST
ನಿಧಾನಗತಿಯಲ್ಲಿ ಸಾಗುತ್ತಿರುವ ಪಚ್ಚನಾಡಿ ರೈಲ್ವೇ ಮೇಲ್ಸೇತುವೆ ಕಾಮಗಾರಿ.
ಮಹಾನಗರ, ಮೇ 12: ನಗರದ ಪಚ್ಚನಾಡಿಯಲ್ಲಿ ರೈಲ್ವೇ ಇಲಾಖೆಯು ನಿರ್ಮಿಸಲು ಉದ್ದೇಶಿಸಿರುವ ನೂತನ ಮೇಲ್ಸೇತುವೆ ಕಾಮಗಾರಿ ಹಲವು ತಿಂಗಳಿನಿಂದ ನಿಧಾನವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ನಿತ್ಯ ಸಮಸ್ಯೆ ಉಂಟಾಗುತ್ತಿದೆ.
ಮಂಗಳೂರು ಜಂಕ್ಷನ್ನಿಂದ ತೋಕೂರು ವರೆಗಿನ ಹಳಿ ದ್ವಿಪಥ, ವಿದ್ಯುದೀಕರಣ ಕಾಮಗಾರಿ ಉದ್ದೇಶ ದಿಂದಾಗಿ ಪಚ್ಚನಾಡಿಯಲ್ಲಿನ ಹಳೆ ಸೇತುವೆಯನ್ನು ಒಂದೂವರೆ ವರ್ಷಗಳ ಹಿಂದೆಯೇ ತೆರವುಗೊಳಿಸಲಾಗಿತ್ತು.
ಹಳೆ ಸೇತುವೆಯ ಪಿಲ್ಲರ್ ಇದ್ದ ಸ್ಥಳದಲ್ಲೇ ರೈಲ್ವೇ ಹೊಸ ಹಳಿ ಸಾಗುತ್ತಿದ್ದು, ಹೀಗಾಗಿ ಸೇತುವೆಯನ್ನು ವಿಸ್ತರಿಸುವ ಜತೆಗೆ ಕೊಂಚ ಎತ್ತರಕ್ಕೆ ಏರಿಸಲು ಈ ಹಿಂದೆ ಯೋಜನೆ ರೂಪಿಸಲಾಗಿತ್ತು.
ನೂತನ ಮೇಲ್ಸೇತುವೆ ಕಾಮಗಾರಿ 2018ರ ಜನವರಿಯಲ್ಲಿ ಆರಂಭಗೊಂಡಿತ್ತು. ಕೇವಲ ಆರು ತಿಂಗಳಿನಲ್ಲಿ ಸೇತುವೆ ಪೂರ್ಣಗೊಂಡು ಸುಗಮ ಸಂಚಾರಕ್ಕೆ ಬಿಟ್ಟುಕೊಡುತ್ತೇವೆ ಎಂದು ಸಂಬಂಧಪಟ್ಟ ಇಲಾಖೆ ಸ್ಥಳೀಯರಿಗೆ ಭರವಸೆ ನೀಡಿತ್ತಾದರೂ ಇನ್ನೂ ಪೂರ್ಣಗೊಂಡಿಲ್ಲ. ಸ್ಥಳದಲ್ಲಿ ಸದ್ಯ ಮೂರರಿಂದ ನಾಲ್ಕು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂದಿನ ಮಳೆಗಾಲ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ ಎನ್ನುತ್ತಾರೆ ಸ್ಥಳೀಯರು.
ರೈಲ್ವೇ ಗೇಟ್ ಹಾಕಿದರೆ ಸವಾರರ ಪರದಾಟ:
ಹಳೆ ಸೇತುವೆಯ ತೆರವಿನಿಂದ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ರೈಲ್ವೇ ಇಲಾಖೆಯು ಇನ್ನೊಂದು ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿ, ತಾತ್ಕಾಲಿಕ ಲೆವೆಲ್ ಕ್ರಾಸಿಂಗ್ ವ್ಯವಸ್ಥೆ ಮಾಡಿ ಗೇಟ್ ಅಳವಡಿಸಿದೆ. ಇದರಿಂದಾಗಿ ಸಾರ್ವಜನಿಕರಿಗೆ ಮತ್ತು ಸ್ಥಳೀಯರು ದಿನಂಪ್ರತಿ ಸಮಸ್ಯೆ ಅನುಭವಿಸುತ್ತಿದ್ದಾರೆ.
ಒಂದು ಬಾರಿ ಗೇಟ್ ಹಾಕಿದರೆ ಸುಮಾರು ಒಂದು ಕಿ.ಮೀ. ವರೆಗೆ ವಾಹನಗಳು ಸಾಲು ನಿಂತಿರುತ್ತವೆ. ಕೆಲವೊಮ್ಮೆ ಇದೇ ರೈಲ್ವೇ ಹಳಿಯಲ್ಲಿ ಗೂಡ್ಸ್ ರೈಲು ಸೇರಿದಂತೆ ಅರ್ಧ ಗಂಟೆಯಲ್ಲಿ ಸುಮಾರು 4-5 ರೈಲು ಸಂಚರಿಸುತ್ತದೆ.
ಈ ವೇಳೆ ಒಂದು ಬಾರಿ ಮುಚ್ಚಿದ ರೈಲ್ವೇ ಗೇಟ್ ತೆರೆಯುವುದು ಸುಮಾರು ಅರ್ಧ ಗಂಟೆತಗಲುತ್ತದೆ.
ಈ ರಸ್ತೆಯ ಮುಖೇನ ಕಟೀಲು, ಪಿಲಿಕುಳ, ಮೂಡಬಿದಿರೆ, ಸುರತ್ಕಲ್, ಪಣಂಬೂರು, ವಾಮಂಜೂರು ಸಹಿತ ಇತರ ಪ್ರದೇಶಗಳನ್ನು ಸಂಪರ್ಕಿಸಲು ಹತ್ತಿರವಾಗುತ್ತದೆ. ಜತೆಗೆ ರಸ್ತೆ ಅಗಲ ಮತ್ತು ಉತ್ತಮವಾಗಿರುವುದರಿಂದ ಹೆಚ್ಚಿನ ವಾಹನ ಸವಾರರು ಇದೇ ರಸ್ತೆ ಆಯ್ಕೆ ಮಾಡುತ್ತಾರೆ.
ಇನ್ನು ಮೂಡುಬಿದಿರೆ ಕಡೆಗೆ ತೆರಳುವ ಹೆಚ್ಚಿನ ಕಾಲೇಜು ವಿದ್ಯಾರ್ಥಿಗಳು, ಕಾಲೇಜು ವಾಹನಗಳು ಕೂಡ ಇದೇ ರಸ್ತೆಯಲ್ಲಿ ತೆರಳುತ್ತವೆ. ಇದರಿಂದಾಗಿ ಈ ರಸ್ತೆ ಸದಾ ವಾಹನ ಸಂಚಾರವಿರುತ್ತದೆ. ಈ ಸಮಯ ರೈಲ್ವೇ ಗೇಟ್ ಹಾಕಿದರೆ ಮಾರುದ್ದದ ವಾಹನಗಳ ಸಾಲು ನಿಂತಿರುತ್ತದೆ.
ಅರ್ಧಕ್ಕೆ ತಿರುಗುವ ಸಿಟಿ ಬಸ್:
ಈ ಭಾಗದ ಸುತ್ತಮುತ್ತಲು ಸ್ವಂತ ವಾಹನ ಇಲ್ಲದ ಮಂದಿ ಸಿಟಿ ಬಸ್ಗಳನ್ನು ಅವಲಂಭಿಸಿದ್ದಾರೆ. ಸ್ಟೇಟ್ಬ್ಯಾಂಕ್ ಮತ್ತು ಕಂಕನಾಡಿಯಿಂದ ಪಚ್ಚನಾಡಿ ಕಡೆಗೆ ಸಿಟಿ ಬಸ್ಗಳು ಪ್ರಯಾಣಿಸುತ್ತದೆ. ಆದರೆ ರೈಲ್ವೇ ಗೇಟ್ ಹಾಕುವುದರಿಂದ ಪಚ್ಚನಾಡಿ ಕಡೆಗೆ ಬರುವ ಕೆಲವು ಸಿಟಿ ಬಸ್ಗಳು ಬೋಂದೆಲ್ನಲ್ಲಿಯೇ ತಿರುಗಿ ಹೋಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ರಮೇಶ್ ರೈ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SIT ಎದುರು ಎಚ್.ಡಿ.ರೇವಣ್ಣ ಮೊಂಡಾಟ; ಸ್ವಇಚ್ಛಾ ಹೇಳಿಕೆಗೆ ಸಹಿ ಹಾಕಲು ನಿರಾಕರಣೆ
HD ರೇವಣ್ಣನ ಬಸವನಗುಡಿ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು
KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್
IPL; ಸೂರ್ಯ ಶತಕದ ಪ್ರತಾಪ: ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ
ಮೊಬೈಲ್ಗಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್ಐಟಿ