ಪ.ಬಂಗಾಲದಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಹಲವು ಕ್ರಮ: ECಗೆ BJP ಆಗ್ರಹ
Team Udayavani, May 16, 2019, 4:01 PM IST
ಹೊಸದಿಲ್ಲಿ : ಪಶ್ಚಿಮ ಬಂಗಾಲದಲ್ಲಿ ಆಡಳಿತೆಯು ಸಾಂವಿಧಾನಿಕವಾಗಿ ಸಂಪೂರ್ಣವಾಗಿ ಕುಸಿದು ಬಿದ್ದಿರುವುದರಿಂದ ಚುನಾವಣಾ ಆಯೋಗ ಅಲ್ಲಿ ಮುಕ್ತ, ನಿರ್ಭೀತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆ ನಡೆಸಲು ಹಲವಾರು ಕಠಿನ ಉಪಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಜೆಪಿ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಮುಖ್ತರ್ ಅಬ್ಟಾಸ್ ನಕ್ವಿ, ವಿಜಯ್ ಗೋಯಲ್ ಅವರನ್ನು ಒಳಗೊಂಡ ಬಿಜೆಪಿ ನಿಯೋಗ ಇಂದು ಚುನಾವಣಾ ಆಯೋಕ್ತರನ್ನು ಭೇಟಿಯಾಗಿ ಈ ಆಗ್ರಹವನ್ನು ಮಂಡಿಸಿತು.
ಪ.ಬಂಗಾಲದಲ್ಲಿ ಮುಕ್ತ ಮತ್ತು ನಿರ್ಭೀತ ಚುನಾವಣೆ ನಡೆಯಲು ಅಲ್ಲಿನ ಕ್ರಿಮಿನಲ್ಗಳು ಮತ್ತು ಹಿಸ್ಟರಿ ಶೀಟರ್ ಗಳ ವಿರುದ್ದ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿತು.
ಕೋಲ್ಕತದಲ್ಲಿ ನಿನ್ನೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ವೇಳೆ ಹಿಂಸೆ, ದೊಂಬಿ, ಮಾರಾಮಾರಿ, ವಾಹನಗಳಿಗೆ ಕಿಚ್ಚಿಡುವಿಕೆಯೇ ಮೊದಲಾದ ಘಟನೆಗಳು ನಡೆದಿದ್ದವು. ಇದನ್ನು ಅನುಸರಿಸಿ ಚುನಾವಣಾ ಆಯೋಗ ಸಂವಿಧಾನದ 324ನೇ ವಿಧಿಯನ್ನು ಪ್ರಯೋಗಿಸಿ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರವನ್ನು ಮೊಟಕುಗೊಳಿಸಿತ್ತು.