ಉಪ ಸಮರದ ಕಲಿಗಳ ಹಣೆಬರಹ ನಿರ್ಧಾರಕ್ಕಿಂದು ಮತಮುದ್ರೆ
Team Udayavani, May 19, 2019, 9:03 AM IST
ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕುಂದಗೋಳ ಹಾಗೂ ಕಲಬುರಗಿ ಜಿಲ್ಲೆ ಚಿಂಚೊಳಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರಕ್ಕೆ ಮತದಾರ ಪ್ರಭು ತನ್ನ ಮತ ಮುದ್ರೆ ಒತ್ತಲು ಕ್ಷಣಗಣನೆ ಆರಂಭವಾಗಿದೆ.
ರಾಜ್ಯ ರಾಜಕೀಯ ಮೇಲೆ ತನ್ನದೇ ಪ್ರಭಾವ ಬೀರಬಹುದೆಂಬ ನಿರೀಕ್ಷೆ ಹೊಂದಲಾದ ಎರಡು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಏನೆಂಬುದನ್ನು ಮತದಾರರು ರವಿವಾರ ನಿರ್ಧರಿಸಲಿದ್ದಾರೆ. ಸಂಖ್ಯಾ ದೃಷ್ಟಿಯಿಂದ ಅಲ್ಲದಿದ್ದರೂ ರಾಜ್ಯ ರಾಜಕೀಯ ವಾತಾವರಣದ ಮೇಲೆ ಉಪ ಚುನಾವಣೆ ಪ್ರಭಾವ ಮಹತ್ವದಾಗಿದೆ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಎರಡು ಕ್ಷೇತ್ರಗಳ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನೀನಾ-ನಾನಾ ಎಂಬಂತೆ ಪೈಪೋಟಿಗಿಳಿದಿವೆ. ತನ್ನದೇಯಾದ ಎರಡು ಸ್ಥಾನಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರ ಯತ್ನಿಸುತ್ತಿದ್ದರೆ, ಕ್ಷೇತ್ರ ವಶದ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಮುಖಭಂಗ ಉಂಟು ಮಾಡಲು, ತನ್ನ ಪ್ರಬಲ್ಯ ಮೆರೆಯಲು ಬಿಜೆಪಿ ಹವಣಿಸುತ್ತಿದೆ.
ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಕುಂದಗೋಳ ಕ್ಷೇತ್ರದಲ್ಲಿ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಮೈತ್ರಿ ಅಭ್ಯರ್ಥಿಯಾಗಿದ್ದರೆ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸುಮಾರು 97,527 ಪುರುಷರು, 91,910 ಮಹಿಳೆಯರು ಸೇರಿದಂತೆ ಒಟ್ಟು 1,89,441 ಮತದಾರರು ತಮ್ಮ ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ.
ಕಾಂಗ್ರೆಸ್ ಶಾಸಕರಾಗಿದ್ದ ಡಾ| ಉಮೇಶ ಜಾಧವ ಅವರ ರಾಜೀನಾಮೆಯಿಂದ ತೆರವಾದ ಚಿಂಚೊಳಿ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದ್ದು, ಮೈತ್ರಿ ಅಭ್ಯರ್ಥಿಯಾಗಿ ಸುಭಾಸ ರಾಠೊಡ ಸ್ಪರ್ಧಿಸಿದ್ದರೆ, ಡಾ| ಉಮೇಶ ಜಾಧವ ಅವರ ಪುತ್ರ ಡಾ| ಅವಿನಾಶ ಜಾಧವ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸುಮಾರು 99,047 ಪುರುಷರು, 94,814 ಮಹಿಳೆಯರು ಸೇರಿದಂತೆ ಒಟ್ಟು 1,93,877 ಮತದಾರರು ಮತ ಚಲಾಯಿಸಬೇಕಿದೆ.
ವಿವಾದಗಳಿಗೆ ವೇದಿಕೆ: ಉಪ ಚುನಾವಣೆಗಳು ಎಂದ ಕೂಡಲೇ ಪ್ರಮುಖ ರಾಜಕೀಯ ಪಕ್ಷಗಳು ಕ್ಷೇತ್ರವನ್ನೇ ಕೇಂದ್ರೀಕರಿಸುತ್ತವೆ. ಶಾಸಕರು, ಸಚಿವರು, ಸಂಸದರು ಹಾಗೂ ಪಕ್ಷಗಳ ನಾಯಕರ ದಂಡೇ ಕ್ಷೇತ್ರದಲ್ಲಿ ಠಿಕಾಣಿ ಹೂಡುತ್ತಾರೆ. ಪ್ರಚಾರ-ತಂತ್ರಗಾರಿಕೆ ನಡೆಸುತ್ತಾರೆ. ಪರಸ್ಪರ ಆರೋಪ-ಪ್ರತ್ಯಾರೋಪ, ನಿಂದನೆಗೆ ಮುಂದಾಗುತ್ತಾರೆ. ಕುಂದಗೋಳ-ಚಿಂಚೊಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಗಿದ್ದು ಇದೆ.
ರಾಜ್ಯದ ವಿವಿಧ ಪಕ್ಷಗಳ ಘಟಾನುಘಟಿ ನಾಯಕರ ಪ್ರಚಾರ, ಭಾಷಣ, ವ್ಯಕ್ತಿಗತ ನಿಂದನೆ, ಆಕ್ಷೇಪಾರ್ಹ ಹಾಗೂ ವಿವಾದಾತ್ಮಕ ಹೇಳಿಕೆಗಳಿಗೆ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ವೇದಿಕೆಯಾಯಿತು. ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ.ಕುಮಾರಸ್ವಾಮಿ, ಡಾ| ಜಿ.ಪರಮೇಶ್ವರ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ದಿನೇಶ ಗುಂಡೂರಾವ್, ಜಗದೀಶ ಶೆಟ್ಟರ, ಡಿ.ಕೆ.ಶಿವಕುಮಾರ, ಕೆ.ಎಸ್.ಈಶ್ವರಪ್ಪ, ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಗೋವಿಂದ ಕಾರಜೋಳ, ಎಚ್.ಕೆ.ಪಾಟೀಲ, ಬಸವರಾಜ ಹೊರಟ್ಟಿ, ಶ್ರೀರಾಮುಲು, ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ನಾಯಕರು ತಮ್ಮದೇ ಪ್ರಭಾವ ಬೀರುವ ಯತ್ನ ತೋರಿದ್ದರು. ವಿವಾದಾತ್ಮಕ ಅಸ್ತ್ರಗಳನ್ನು ತೇಲಿಬಿಟ್ಟಿದ್ದರು.
ಚಿಂಚೊಳಿ ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ವಿರುದ್ಧ ಏಕ ವಚನ ಪದ ಬಳಕೆ ಮಾಡಿದ್ದರಲ್ಲದೆ, ಆಪರೇಷನ್ ಕಮಲದ 50 ಕೋಟಿಗೆ ಡಾ| ಉಮೇಶ ಜಾಧವ ಮಾರಾಟವಾಗಿದ್ದಾರೆಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಮಲ್ಲಿಕಾರ್ಜುನ ಖರ್ಗೆ 50 ಸಾವಿರ ಕೋಟಿ ರೂ. ಆಸ್ತಿ ಮಾಡಿದ್ದಾರೆಂದು ಆರೋಪಿಸಿದ್ದರು. ವೀರೇಂದ್ರ ಪಾಟೀಲರಿಗೆ ಕಿರುಕುಳ ನೀಡಿದ್ದ ಕಾಂಗ್ರೆಸ್ಗೆ ವೀರಶೈವರು ಮತ ಹಾಕಬಾರದೆಂಬ ಯಡಿಯೂರಪ್ಪ ಅವರ ಹೇಳಿಕೆ ವಿವಾದ ರೂಪ ಪಡೆದಿತ್ತು. ಖರ್ಗೆಯವರು ಎಂದೋ ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಮಿತ್ರಪಕ್ಷಗಳ ಜಟಾಪಟಿಗೂ ಕಾರಣವಾಗಿತ್ತು.
ಕುಂದಗೋಳದಲ್ಲಿ ಸಿ.ಎಸ್.ಶಿವಳ್ಳಿ ಅವರ ಸಾವಿಗೆ ಕಾಂಗ್ರೆಸ್-ಸಮ್ಮಿಶ್ರ ಸರ್ಕಾರದ ಕಿರುಕುಳ ಕಾರಣವೆಂಬ ಶ್ರೀರಾಮುಲು ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕರು ನರಸತ್ತವರು, ಗಂಡಸ್ತನ ಇಲ್ಲದವರು, ಸಿದ್ದರಾಮಯ್ಯ ಕೈ ಬಳೆ ಹಾಕಿಕೊಳ್ಳಲಿ, ನೂರು ಡಿ.ಕೆ.ಶಿವಕುಮಾರ ಬಂದರೂ ಏನು ಮಾಡಲಾಗದು, ಬಿಜೆಪಿ ಕಾರ್ಯಕರ್ತರ ಸೆಳೆಯಲೆತ್ನಿಸಿದರೆ ಪರಿಸ್ಥಿತಿ ನೆಟ್ಟಗಿರದು, ಡಿಕೆಶಿ ಕೋಣ ಇದ್ದಂತೆ ಎಂಬ ಹೇಳಿಕೆಗಳು ವಿವಾದ ರೂಪ ಪಡೆದಿದ್ದವು.
ನಾಯಕರ ಹೇಳಿಕೆ, ಪ್ರತಿ ಹೇಳಿಕೆ, ವಾಗ್ವಾದಗಳ ನಡುವೆ ಕುಂದಗೋಳ-ಚಿಂಚೊಳಿಯಲ್ಲಿ ಮತಬೇಟೆ ಮುಗಿದಿದೆ. ಎರಡು ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಮೂವರು ಅಭ್ಯರ್ಥಿಗಳು ವಿಧಾನಸಭೆ ಪ್ರವೇಶಕ್ಕೆ ಕಾತುರರಾಗಿದ್ದಾರೆ, ಒಬ್ಬರು ಮಾಜಿ ಶಾಸಕ ಮತ್ತೂಮ್ಮೆ ವಿಧಾನಸಭೆ ಪ್ರವೇಶಕ್ಕೆ ಸರ್ಕಸ್ ನಡೆಸಿದ್ದಾರೆ. ಮತದಾರರು ಯಾರಿಗೆ ವಿಧಾನಸಭೆ ಪ್ರವೇಶಕ್ಕೆ ಅನುಮತಿ ನೀಡುವರೋ ಎಂಬ ಕುತೂಹಲ, ಆತಂಕ ಅಭ್ಯರ್ಥಿಗಳಲ್ಲಿ ಮನೆ ಮಾಡಿದ್ದು, ರವಿವಾರ ಮತದಾರರ ಅನುಮತಿ ಮತಯಂತ್ರದೊಳಗೆ ಬಂಧಿಯಾಗಲಿದೆ.
•ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!
Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು
Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ
BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!
Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!
Mangaluru: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ
Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!
Koratagere: ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು
Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು