ಹಿಂದುಳಿದ ಕಲಬುರಗಿ ಅಭಿವೃದ್ಧಿಯೇ ಗುರಿ
ಚುನಾವಣೆ ನಂತರ ಸಮುದಾಯ ಸಂಘರ್ಷ ಬೇಡ . ಸಚಿವ ಸ್ಥಾನ ಸಿಕ್ಕರೆ ಖುಷಿ-ಸಿಗದಿದ್ರೆ ಬೇಜಾರಿಲ್ಲ
Team Udayavani, May 29, 2019, 10:05 AM IST
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿರುವ ಡಾ| ಉಮೇಶ ಜಾಧವ ಮೇಲೆ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಡಾ| ಖರ್ಗೆ ಅವರಿಗಿಂತ ಒಂದು ಹೆಜ್ಜೆ ಮುಂದೆ ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎನ್ನುವ ಅಭಿಲಾಷೆ ಹೊಂದಿದ್ದಾರೆ. ಜನರ ಅಪೇಕ್ಷೆಗೆ ಅನುಗುಣವಾಗಿ ಹಾಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕುರಿತಾಗಿ ಹೊಂದಿರುವ ಯೋಜನೆಗಳನ್ನು ಡಾ| ಜಾಧವ ‘ಉದಯವಾಣಿ’ ಜತೆ ಹಂಚಿಕೊಂಡಿದ್ದಾರೆ.
•ಚುನಾವಣೆಯಲ್ಲಿ ಜನ ನಿಮ್ಮ ನಿರೀಕ್ಷೆ ಮೀರಿ ಆಶೀರ್ವಾದ ಮಾಡಿದ್ದಾರೆ. ಇದಕ್ಕೇನಂತಿರಿ?
– ಹೌದು. ಜನ ನಿರೀಕ್ಷೆ ಮೀರಿ ಬೆಂಬಲಿಸಿದ್ದಾರೆ. ಹೀಗಾಗಿ ಹಗಲಿರಳು ಕೆಲಸ ಮಾಡುವೆ. ಐದು ವರ್ಷದ ಅವಧಿಯುದ್ದಕ್ಕೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಲ್ಲ ಶಾಸಕರ ಹಾಗೂ ಅಧಿಕಾರಿಗಳ ಸಭೆ ಕರೆದು ಸಮಗ್ರ ಕ್ರಿಯಾ ಯೋಜನೆ ರೂಪಿಸಿ, ಅದಕ್ಕೆ ಕೇಂದ್ರದಿಂದ ಅನುದಾನ ತರಲು ಶ್ರಮಿಸಲಾಗುವುದು. ಯುವಕರ ಕೌಶಲ್ಯಾಭಿವೃದ್ಧಿ ಹೆಚ್ಚಳಕ್ಕೆ ಪರಿಶ್ರಮಿಸಲಾಗುವುದು, ಉದ್ಯೋಗಾವಕಾಶ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು.
•50 ವರ್ಷ ಏನೂ ಅಭಿವೃದ್ಧಿ ಮಾಡಿಲ್ಲವೆಂದು ಚುನಾವಣೆಯಲ್ಲಿ ಹೇಳಲಾಗಿದೆ. ಈ ನಿಟ್ಟಿನಲ್ಲಿ ನೀವು ಹಾಕಿಕೊಂಡ ಕಾರ್ಯಗಳೇನು?
-ರೈಲ್ವೆ ವಿಭಾಗೀಯ ಕಚೇರಿ, ವಿಮಾನ ನಿಲ್ದಾಣ ಕಾರ್ಯಾರಂಭ ತಮ್ಮ ಮುಂದಿರುವ ಪ್ರಮುಖ ಕಾರ್ಯಗಳಾಗಿವೆ. ಅದೇ ರೀತಿ ಕಲಬುರಗಿಯಲ್ಲಿ ಸ್ಥಾಪನೆಯಾಗದೇ ಬಹು ದಿನಗಳ ಬೇಡಿಕೆಯಾಗಿ ಉಳಿದಿರುವ ವಿಶೇಷ ಕೈಗಾರಿಕಾ ಆರ್ಥಿಕ ವಲಯ (ನಿಮ್l) ಸ್ಥಾಪಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟವರೊಡನೆ ಸಮಾಲೋಚಿ ಸಲಾಗುವುದು. ರಸ್ತೆಗಳ ಅಭಿವೃದ್ಧಿ ಸೇರಿದಂತೆ ಇತರ ಕಾರ್ಯಗಳಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಒಟ್ಟಾರೆ ಅಭಿವೃದ್ಧಿ ಕಾರ್ಯವನ್ನು ಮತ್ತೂಬ್ಬರೊಂದಿಗೆ ಹೊಲಿಕೆ ಮಾಡುವುದಿಲ್ಲ. ತಮ್ಮದೇಯಾದ ಯೋಜನೆ ಹೊಂದಲಾಗಿದೆ.
•ಚಿಂಚೋಳಿಯಲ್ಲಿ ತಮ್ಮದೇಯಾದ (ಬಂಜಾರ) ಸಮುದಾಯಕ್ಕೆ ಮಣೆ ಹಾಕಿದ್ದೀರಿ ಎನ್ನುವ ಅಪವಾದವಿದೆಯಲ್ಲ?
– ಚಿಂಚೋಳಿ ಕ್ಷೇತ್ರದ ಶಾಸಕನಾಗಿ ಆರು ವರ್ಷಗಳ ಅವಧಿಯಲ್ಲಿ ಎಲ್ಲ ಸಮುದಾಯವರೊಂದಿಗೆ ಒಗ್ಗೂಡಿ ಕೆಲಸ ಮಾಡಿದ್ದರಿಂದಲೇ ಉಪ ಚುನಾವಣೆಯಲ್ಲೂ ಜನತೆ ಆಶೀರ್ವಾದ ಮಾಡಿದ್ದಾರೆ. ಆದರೆ ಚುನಾವಣೆಯಲ್ಲಿ ಗೆಲ್ಲಬೇಕೆಂದವರು ಈ ನಿಟ್ಟಿನಲ್ಲಿ ಆರೋಪ ಮಾಡಿದ್ದರು. ಚಿಂಚೋಳಿ ಕ್ಷೇತ್ರದಲ್ಲಿ ತಾಂಡಾಗಳು ಅತ್ಯಂತ ಹಿಂದುಳಿದಿದ್ದರಿಂದ ರಸ್ತೆ, ಕುಡಿಯುವ ನೀರಿನ ಕಾಮಗಾರಿ ಕೈಗೊಂಡಿದ್ದಕ್ಕೆ ಈ ರೀತಿ ಆಪಾದನೆ ಮಾಡಿದ್ದಾರೆ. ಆದರೆ ತಮ್ಮ ರಾಜಕೀಯ ಜೀವನುದುದ್ದಕ್ಕೂ ಒಂದೇ ಸಮುದಾಯಕ್ಕೆ ಮಣೆ ಹಾಕುವುದಿಲ್ಲ. ಎಲ್ಲರನ್ನು ಜತೆ-ಜತೆಯಲ್ಲಿ ಕರೆದುಕೊಂಡು ಹೋಗಲಾಗುವುದು.
•ಚಿಂಚೋಳಿಯಲ್ಲಿ ಲಿಂಗಾಯತರು ಬಿಜೆಪಿಗೆ ಮತ ಹಾಕಿಲ್ಲವೆಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಹೇಳುತ್ತಿದ್ದಾರಲ್ಲ?
– ಮಾಜಿ ಸಚಿವ, ಹಿರಿಯ ನಾಯಕ ಬಾಬುರಾವ ಚಿಂಚನಸೂರ ಹೇಳಿಕೆ ತಿರುಚಲಾಗಿದೆ. ಕೆಲವರು ತಮ್ಮ ಅನುಕೂಲವಾಗುವ ರೀತಿಯಲ್ಲಿ ಹೇಳಿಕೆಯನ್ನು ವೈರಲ್ ಮಾಡಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯ ಬಗ್ಗೆ ಅಪಾರ ನಂಬಿಕೆ ಹೊಂದಲಾಗಿದೆ. ಒಂದು ವೇಳೆ ನೋವಾಗಿದ್ದರೆ ಕ್ಷಮೆ ಕೋರುವೆ ಎಂದಿದ್ದಾರೆ. ಚಿಂಚೋಳಿಯಲ್ಲಿ ಎಲ್ಲ ಸಮುದಾಯ ಬೆಂಬಲಿಸಿದ್ದರಿಂದಲೇ ತಮ್ಮ ಮಗ ಎಂಟು ಸಾವಿರ ಮತಗಳಿಂದ ಗೆಲ್ಲಲು ಸಾಧ್ಯವಾಗಿದೆ.
•ಚುನಾವಣೆ ನಂತರ ಈಗ ಹಳ್ಳಿಗಳಲ್ಲಿ ಸವರ್ಣಿಯರ ಹಾಗೂ ದಲಿತರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆಯಲ್ಲ?
-ಚುನಾವಣೆಯಲ್ಲಿ ಹಲವರು ತಮ್ಮ ಸಿದ್ಧಾಂತಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಾರೆ. ಆದರೆ ಅದನ್ನು ಚುನಾವಣೆ ನಂತರ ವೈಮನಸ್ಸು ಇಟ್ಟುಕೊಂಡು ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು. ಯಾವುದೇ ಸಮುದಾಯದವರು ಚುನಾವಣೆ ಹಿನ್ನೆಲೆಯನ್ನಿಟ್ಟುಕೊಂಡು ಸಂಘರ್ಷಕ್ಕೆ ಇಳಿಯುವುದು ಹಾಗೂ ಕಾನೂನು ಕೈಗೆತ್ತಿಕೊಳ್ಳುವುದು ಕಾನೂನಿಗೆ ವಿರುದ್ದವಾಗಿದೆ. ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಆದ್ದರಿಂದ ಯಾರೂ ಸಮುದಾಯ ಸಂಘರ್ಷಕ್ಕೆ ಇಳಿಯಬಾರದೆಂದು ಸರ್ವರಲ್ಲಿ ಕೋರುವೆ.
•ಕೇಂದ್ರದಲ್ಲಿ ಸಚಿವರಾಗುವ ಭರವಸೆ ಇದೆಯಾ?
-ಸಚಿವ ಸ್ಥಾನ ನೀಡಿ ಎಂದು ತಾವಂತೂ ಕೇಳಿಲ್ಲ. ಒಂದು ವೇಳೆ ನೀಡಿದರೆ ಸಮರ್ಥವಾಗಿ ನಿರ್ವಹಿಸುವೆ. ಸಚಿವ ಸ್ಥಾನ ನೀಡಿದರೆ ಖುಷಿ. ಒಂದು ವೇಳೆ ಸಿಗದಿದ್ದರೂ ಯಾವುದೇ ಬೇಜಾರಿಲ್ಲ. ನರೇಂದ್ರ ಮೋದಿ ಅವರ ಪ್ರಮಾಣಿಕತೆ, ಅಭಿವೃದ್ಧಿ ಕಾರ್ಯ ನೋಡಿ ಮತದಾರರು ಆಶೀರ್ವಾದ ಮಾಡಿದ್ದಾರೆ. ಸಚಿವರಾದರೆ ಒಂದಷ್ಟು ಕೆಲಸಗಳನ್ನು ಹೆಚ್ಚಿಗೆ ಮಾಡಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
MUST WATCH
ಹೊಸ ಸೇರ್ಪಡೆ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ