ಶಾಲಾ ಹಾಜರಾತಿಗೆ ಜಾಗೃತಿ ಜಾಥಾ
Team Udayavani, May 31, 2019, 2:41 PM IST
ಬೈಲಹೊಂಗಲ: ತಾಲೂಕಿನ ದೊಡವಾಡ ಹೊಸ ಬಡಾವಣೆ ಸರಕಾರಿ ಶಾಲೆ ಮಕ್ಕಳಿಂದ ಗುರುವಾರ ಅಕ್ಷರ ಬಂಡಿ ಜಾಥಾ ನಡೆಯಿತು.
ಬೈಲಹೊಂಗಲ: ಬೇಸಿಗೆ ರಜೆಯ ಮಜಾ ಸವಿದು ಈಗಾಗಲೇ ಶಾಲೆಗೆ ಮರಳಿರುವ ತಾಲೂಕಿನ ದೊಡವಾಡ ಗ್ರಾಮದ ಶಾಂತಿ ನಗರದ ಹೊಸ ಬಡಾವಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆಗೆ ಬಾರದೆ ಮನೆಯಲ್ಲಿ ಉಳಿದ ತಮ್ಮ ಸಹಪಾಠಿಗಳು, ಹೊಸದಾಗಿ ಒಂದನೇ ತರಗತಿಗೆ ದಾಖಲಾದ ಮಕ್ಕಳು ಕೂಡ ಆದಷ್ಟು ಬೇಗ ಶಾಲೆಗೆ ಬಂದು ಆಟ ಪಾಠ ಅಭ್ಯಾಸ ಚಟುವಟಿಕೆಗಳಲ್ಲಿ ತೊಡಗಲಿ ಎಂಬ ಉದ್ದೇಶದಿಂದ ತಮ್ಮ ಶಿಕ್ಷಕರ ಜತೆಗೂಡಿ ಗ್ರಾಮದಲ್ಲಿ ಗುರುವಾರ ಅಕ್ಷರಬಂಡಿ ಮೆರವಣಿಗೆ ಜಾಥಾ ನಡೆಸಿದರು.
ತಾಪಂ ಸದಸ್ಯ ಸಂಗಯ್ಯ ದಾಭಿಮಠ ಜಾಥಾಗೆ ಚಾಲನೆ ನೀಡಿದರು. ಮಕ್ಕಳು ಡೊಳ್ಳು ಬಾರಿಸುತ್ತ ಮೆರವಣಿಗೆಯಲ್ಲಿ ಸಾಗಿದರು. ಸರಕಾರಿ ಶಾಲೆಗಳ ಸೌಲಭ್ಯ ಕುರಿತ ಜಾಗೃತಿ ಘೊಷಣಾ ಫಲಕಗಳನ್ನು ಪ್ರದರ್ಶಿಸಿ ಪಾಲಕರ ಗಮನ ಸೆಳೆದರು. ಶಿಕ್ಷಕರು ಧ್ವನಿ ವರ್ಧಕದ ಮೂಲಕ ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಘೋಷಣೆ ಕೂಗಿದರು. ಬಿಆರ್ಪಿ ಎ.ಎಂ.ಜಖಾತಿ, ಸಿಆರ್ಪಿ ರಾಜು ಹಕ್ಕಿ, ಮುಖ್ಯ ಶಿಕ್ಷಕ ಜಿ.ಸಿ.ಬೆಳವಡಿ ಹಾಗೂ ಶಿಕ್ಷಕರು ಇದ್ದರು.