ಭವಿಷ್ಯ ಭದ್ರತೆಗಾಗಿ ಆರೋಗ್ಯ ರಕ್ಷಣೆ: ಡಾ| ಯಶೋವರ್ಮ
Team Udayavani, Jun 9, 2019, 5:50 AM IST
ಬೆಳ್ತಂಗಡಿ: ಭವಿಷ್ಯದಲ್ಲಿ ಆರೋಗ್ಯ ಮತ್ತು ಸಮಯದ ಮಹತ್ವವನ್ನು ಕಡೆಗಣಿಸುವಂತಿಲ್ಲ. ಇರುವಾಗ ಕಡೆಗಣಿಸಿದಲ್ಲಿ ಅದನ್ನು ಕಳೆದುಕೊಂಡಾಗ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಹೇಳಿದರು.
ಉಜಿರೆಯಲ್ಲಿ ಎಸ್.ಡಿ.ಎಂ. ಆಸ್ಪತ್ರೆ ಆಶ್ರಯದಲ್ಲಿ ಶುಕ್ರವಾರ ಆರಂಭಿಸಲಾದ ಮಾರ್ಪಡಿಸಿದ ಉದ್ಯೋಗ ದಾತರ ಉಪಯೋಗಿ ಚಿಕಿತ್ಸಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭವಿಷ್ಯದ ದಿನಗಳು ಸುರಕ್ಷಿತವಾಗಿ, ಸುಖಮಯ ವಾಗಿರಲು ವಿಮೆ ಅತ್ಯವಶ್ಯ. ಆದರೆ ನಮ್ಮ ದೇಶದಲ್ಲಿ ವಿಮಾ ವ್ಯಾಪ್ತಿಗೆ ಬರುವವರ ಸಂಖ್ಯೆ ಬಹಳ ಕಡಿಮೆ ಇದೆ. ಈ ಕುರಿತು ಅರಿವು, ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ ಅವರು, ಉಜಿರೆಯ ಚಿಕಿತ್ಸಾಲಯ ಮಾದರಿ ಕೇಂದ್ರವಾಗಿ ಬೆಳೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ ಕೆ. ಹರೀಶ್ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಎಸ್.ಡಿ.ಎಂ. ಆಸ್ಪತ್ರೆ ಹಾಗೂ ಸಂಚಾರಿ ಆಸ್ಪತ್ರೆಯ ಆರೋಗ್ಯ ಸೇವೆಯನ್ನು ಶ್ಲಾಘಿಸಿ, ಅಭಿನಂದಿಸಿದರು. ನೋಂದಾಯಿತ ಕಾರ್ಮಿಕರಿಗೆ ಇ.ಎಸ್.ಐ. ಆಸ್ಪತ್ರೆ ಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಈ ಸೇವೆಯನ್ನು ಅಸಂಘಟಿತ ಕಾರ್ಮಿಕರಿಗೂ ವಿಸ್ತರಿಸಬೇಕು ಎಂದು ಸಲಹೆ ನೀಡಿದರು.
ಮಂಗಳೂರಿನ ಇ.ಎಸ್.ಐ. ಆಸ್ಪತ್ರೆಯ ಪ್ರಭಾರ ನಿರ್ದೇಶಕ ಶಿವರಾಮಕೃಷ್ಣನ್, ವೈದ್ಯಕೀಯ ಅಧೀಕ್ಷಕ ಡಾ| ಕೃಷ್ಣ ನಾಯ್ಕ ಮತ್ತು ಉಜಿರೆ ಗ್ರಾ.ಪಂ. ಅಧ್ಯಕ್ಷ ಕೆ. ಶ್ರೀಧರ ಪೂಜಾರಿ ಶುಭಹಾರೈಸಿದರು. ಎಸ್ಡಿಎಂ ಆಸ್ಪತ್ರೆಯ ಡಾ| ಪ್ರಭಾಶ್ ಕುಮಾರ್ ಉಪಸ್ಥಿತರಿದ್ದರು. ಎಸ್.ಡಿ.ಎಂ. ಆಸ್ಪತ್ರೆ ಕಾರ್ಯನಿರ್ವಹಣಾಧಿಕಾರಿ ಮನ್ಮಥ್ ಕುಮಾರ್ ನೆಲ್ಲಿಕಾರು ಸ್ವಾಗತಿಸಿ, ಎಸ್.ಡಿ.ಎಂ. ಮೆಡಿಕಲ್ ಟ್ರಸ್ಟ್ನ ಕಾರ್ಯದರ್ಶಿ ಶಿಶುಪಾಲ ಪೂವಣಿ ವಂದಿಸಿದರು. ಡಾ| ಉಷಾ ಶೆಟ್ಟಿ ನಿರೂಪಿಸಿದರು.