ಕುಂದಾಪುರ ನಗರ-ಮಳೆ ಅವಾಂತರ
Team Udayavani, Jun 27, 2019, 5:15 AM IST
ಕುಂದಾಪುರ: ನಗರಾದ್ಯಂತ ಬುಧವಾರ ಸುರಿದ ಮಳೆಗೆ ಹೆದ್ದಾರಿ ಅವ್ಯವಸ್ಥೆಗೆ ಪ್ರಯಾಣಿಕರು, ಚಾಲಕರು, ಪಾದಚಾರಿಗಳು ಕಂಗಾಲಾದರು. ಸರ್ವಿಸ್ ರಸ್ತೆಯಲ್ಲಿ ನೀರು ಹರಿಯಲು ಚರಂಡಿಗೆ ಸಂಪರ್ಕ ಇಲ್ಲದ ಕಾರಣ ರಸ್ತೆಯಲ್ಲೇ ನೀರು ಹರಿದು ಪಾದಚಾರಿಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿತ್ತು. ನೆಹರೂ ಮೈದಾನದಲ್ಲಿ ಮೂರು ದಿನಗಳ ಹಿಂದೆ ಬಿದ್ದ ಮರವನ್ನು ಇನ್ನೂ ತೆರವು ಮಾಡಿಲ್ಲ. ನೆಹರೂ ಮೈದಾನದಲ್ಲಿ ನೀರು ನಿಂತು ಕೆರೆಯಂತಾಗಿದ್ದರೆ ಅಲ್ಲೇ ಪಕ್ಕದ ಹಾಸ್ಟೆಲ್ ಎದುರು ಕೂಡಾ ಮೈದಾನದಲ್ಲಿ ನೀರು ಸಂಗ್ರಹವಾಗಿತ್ತು. ನೆಹರೂ ಮೈದಾನದ ಬಳಿಯ ಸರ್ವಿಸ್ ರಸ್ತೆಯಿಂದ ಇನ್ನೊಂದು ಪಾರ್ಶ್ವದ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುವಲ್ಲಿ ಕೂಡಾ ನೀರು ಸಂಗ್ರಹವಾಗಿ ತೊಂದರೆಯಾಗಿತ್ತು. ಶಾಸ್ತ್ರಿ ಸರ್ಕಲ್ ಬಳಿ, ಫ್ಲೈಓವರ್ ಬಳಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿ ನೀರು ನಿಂತಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆಯಂತೂ ಇದಕ್ಕೂ ತನಗೂ ಸಂಬಂಧವೇ ಇಲ್ಲದಂತೆ ಕುಳಿತಿದೆ.