ಬಿಜೆಪಿ ಸೇರಲು ಯಾರೂ ಸಂಪರ್ಕಿಸಿಲ್ಲ: ಶಿವಾನಂದ
Team Udayavani, Jul 8, 2019, 3:00 AM IST
ವಿಜಯಪುರ: “ಸರ್ಕಾರ ಅಥವಾ ಪಕ್ಷದಲ್ಲಿ ನಾನು ಅಸಮಾಧಾನಿತನಲ್ಲ, ಬಿಜೆಪಿ ಸೇರುವಂತೆ ಯಾವ ನಾಯಕರೂ ನನ್ನನ್ನು ಸಂಪರ್ಕಿಸಿಲ್ಲ. ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ತೊರೆಯುವುದಿಲ್ಲ. ಹೀಗಾಗಿ ದೊಡ್ಡ ಮಟ್ಟದ ಆಫರ್ ನೀಡುವ ಪ್ರಶ್ನೆ ಉದ್ಭವಿಸುವುದೇ ಇಲ್ಲ’ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ,”ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರೊಂದಿಗೆ ಪಕ್ಷದ ವರಿಷ್ಠರು ಸಂಪರ್ಕದಲ್ಲಿದ್ದಾರೆ. ಶಾಸಕರಿಗೆ ಭಿನ್ನಾಭಿಪ್ರಾಯಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಲು ಅವಕಾಶ ಇತ್ತು, ರಾಜೀನಾಮೆ ನೀಡಿರುವ ಕ್ರಮ ಸರಿಯಲ್ಲ.
ಮೈತ್ರಿ ಸರ್ಕಾರದ ಉಳಿವಿಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷದಿಂದ ಯಾವುದೇ ಸೂಚನೆ ಬಂದಿಲ್ಲ. ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸುವ ಕೆಲಸ ಯಶಸ್ವಿಯಾಗುವ ಕಾರಣ ಸರ್ಕಾರಕ್ಕೆ ಯಾವುದೇ ಧಕ್ಕೆ ಆಗದು’ ಎಂದರು.