ಸಂವಿಧಾನಬದ್ಧವಾಗಿ ಕ್ರಮ ಕೈಗೊಳ್ಳಲು ಸ್ಪೀಕರ್ಗೆ ಸಲಹೆ ನೀಡಿ
Team Udayavani, Jul 11, 2019, 3:00 AM IST
ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ನ 14 ಶಾಸಕರು ರಾಜೀನಾಮೆ ನೀಡಿದ್ದು, ವಿಧಾನಸಭಾಧ್ಯಕ್ಷರು ಕೂಡಲೇ ಸಂವಿಧಾನಬದ್ಧವಾಗಿ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಬೇಕು ಎಂದು ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ.
ಯಡಿಯೂರಪ್ಪ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿ ಶಾಸಕರ ನಿಯೋಗ ಬುಧವಾರ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ವಿಧಾನಸಭಾಧ್ಯಕ್ಷರು ಇದೇ 12ರಿಂದ 26ರವರೆಗೆ ವಿಧಾನಮಂಡಲ ಅಧಿವೇಶನ ಕರೆದಿದ್ದು, ಮಹತ್ವದ 2019-2020ನೇ ಸಾಲಿನ ಆಯವ್ಯಯಕ್ಕೆ ಅನುಮೋದನೆ ನೀಡಬೇಕಿದೆ. ಜುಲೈ ಅಂತ್ಯಕ್ಕೆ ಲೇಖಾನುದಾನ ಬಳಕೆ ಅವಧಿ ಮುಕ್ತಾಯವಾಗಲಿದೆ. ಈ ನಡುವೆ ಕಾಂಗ್ರೆಸ್, ಜೆಡಿಎಸ್ನ 14 ಶಾಸಕರು ರಾಜೀನಾಮೆ ನೀಡಿದ್ದು, ಇಬ್ಬರು ಪಕ್ಷೇತರರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಬೆಂಬಲಿಸುವುದಾಗಿ ಪ್ರಕಟಿಸಿದ್ದಾರೆ ಎಂದು ನಿಯೋಗ ಮನವಿ ಪತ್ರದಲ್ಲಿ ತಿಳಿಸಿದೆ.
ಸಂವಿಧಾನದ ವಿಧಿ 190(3)(ಬಿ) ಹಾಗೂ ಕರ್ನಾಟಕ ವಿಧಾನಮಂಡಲ ಸದನ ಕಲಾಪ ನಡಾವಳಿ ನಿಯಮ-202ರ ಪ್ರಕಾರ ಯಾವುದೇ ಶಾಸಕ ಖುದ್ದಾಗಿ ರಾಜೀನಾಮೆ ನೀಡಿದರೆ ಸ್ಪೀಕರ್ ಅಂಗೀಕರಿಸಬೇಕು. ರಾಜೀನಾಮೆ ಪತ್ರವನ್ನು ಅಂಚೆ ಇಲ್ಲವೇ ಮತ್ತೂಬ್ಬರ ಮೂಲಕ ಸಲ್ಲಿಸಿದಾಗ ಅದರ ನೈಜತೆಯನ್ನು ಪರಿಶೀಲಿಸಬೇಕು.
ಹಾಗಾಗಿ, ರಾಜೀನಾಮೆ ಅಂಗೀಕರಿಸುವುದೊಂದೇ ಸ್ಪೀಕರ್ ಮುಂದಿರುವ ಆಯ್ಕೆ. ಇಷ್ಟಾದರೂ ಸ್ಪೀಕರ್ ನಾನಾ ದಿನಾಂಕಗಳನ್ನು ನಿಗದಿಪಡಿಸಿ ಕಚೇರಿಯಲ್ಲಿ ಭೇಟಿಯಾಗುವಂತೆ ಶಾಸಕರಿಗೆ ಸೂಚಿಸಿರುವ ಬಗ್ಗೆ ಮಾಧ್ಯಮಗಳಿಂದ ಗೊತ್ತಾಗಿದೆ. ಆ ಮೂಲಕ ಅಂಗೀಕಾರ ಪ್ರಕ್ರಿಯೆ ವಿಳಂಬ ಮಾಡಿದಂತೆ ಕಾಣುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
ರಾಜೀನಾಮೆ ಸಲ್ಲಿಸಿರುವ ಶಾಸಕರು, ಅದರ ಒಂದು ಪ್ರತಿಯನ್ನು ತಮಗೂ ಸಲ್ಲಿಸಿದ್ದಾರೆ. ಅಲ್ಲದೇ ತಾವು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ಹಲವು ಬಾರಿ ಹೇಳಿದ್ದಾರೆ. ತಾವೂ ಸಹ ತ್ವರಿತವಾಗಿ ರಾಜೀನಾಮೆಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸುವಂತೆ ಸೂಚಿಸಿದ್ದೀರಿ ಎಂಬ ಮಾಹಿತಿ ಇದೆ.
ಶಾಸಕರು ಜು.6ರಂದು ರಾಜೀನಾಮೆ ನೀಡಿದರೂ ಸ್ಪೀಕರ್, ಆಡಳಿತ ಪಕ್ಷಕ್ಕೆ ಸರ್ಕಾರ ನಡೆಸಲು ಅವಕಾಶ ನೀಡಿದ್ದಾರೆ. ಅವರು ಶಾಸಕರಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಜತೆಗೆ, ಕೆಲ ಸಚಿವರು ಶಾಸಕರಿರುವ ಸ್ಥಳಗಳಿಗೆ ತೆರಳಿ ಬೆದರಿಕೆ ಒಡ್ಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಅಣಕದಂತಿದೆ. ಯಾವುದೇ ಶಾಸಕರು ರಾಜೀನಾಮೆ ನೀಡಿದರೆ ಅದನ್ನು ಪ್ರಶ್ನಿಸುವುದು ಎಷ್ಟು ಸರಿ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಹಾಗಾಗಿ, ಸಂವಿಧಾನಾತ್ಮಕವಾಗಿ ಸ್ಪೀಕರ್ ಅವರು ತಕ್ಷಣವೇ ರಾಜೀನಾಮೆಗಳನ್ನು ಇತ್ಯರ್ಥಪಡಿಸುವಂತೆ ತಾವು ಸಲಹೆ ನೀಡಬೇಕು. ಜತೆಗೆ, ಅಲ್ಪಮತಕ್ಕೆ ಕುಸಿದಿರುವ ಸರ್ಕಾರ ಯಾವುದೇ ಆದೇಶ, ನಿರ್ಧಾರ ಕೈಗೊಳ್ಳದಂತೆ ತಡೆಯಲು ಕ್ರಮ ವಹಿಸುವಂತೆಯೂ ಸಲಹೆ ನೀಡಬೇಕು.
ಇಂತಹ ಸಂದರ್ಭದಲ್ಲಿ ಪ್ರತಿಪಕ್ಷವಾಗಿ ರಾಜ್ಯದ ಹಿತ ಕಾಪಾಡುವುದು ನಮ್ಮ ಕರ್ತವ್ಯ. ನಮ್ಮ ಭಾವನೆಯನ್ನು ಅರ್ಥ ಮಾಡಿಕೊಂಡು ತಾವು ಸಂವಿಧಾನಾತ್ಮಕವಾಗಿ ಸೂಕ್ತ ಕ್ರಮವನ್ನು ತ್ವರಿತವಾಗಿ ಕೈಗೊಳ್ಳುವ ನಿರೀಕ್ಷೆ ಇದೆ. ಹಾಗೆಯೇ ಆಡಳಿತ ಪಕ್ಷ ಹಾಗೂ ಸ್ಪೀಕರ್ಗೆ ಮಾರ್ಗದರ್ಶನ ಮಾಡುವ ವಿಶ್ವಾಸವಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸ್ಪೀಕರ್ಗೆ ನಿರ್ದೇಶನ ನೀಡಲು ಮನವಿ: ರಾಜ್ಯಪಾಲರ ಭೇಟಿ ಬಳಿಕ ಪ್ರತಿಕ್ರಿಯಿಸಿದ ಬಿ.ಎಸ್.ಯಡಿಯೂರಪ್ಪ, ರಾಜ್ಯಪಾಲರಿಗೆ ಎರಡು ವಿಚಾರಗಳ ಬಗ್ಗೆ ಮನವಿ ಮಾಡಲಾಗಿದೆ. ಕಾಂಗ್ರೆಸ್, ಜೆಡಿಎಸ್ನ 14 ಮಂದಿ ರಾಜೀನಾಮೆಯಿಂದ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಕೂಡಲೇ ತಾವು ಮಧ್ಯಪ್ರವೇಶಿಸಿಬೇಕು.
ರಾಜೀನಾಮೆ ಇತ್ಯರ್ಥಪಡಿಸಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂಬ ಭಾವನೆ ಬರುತ್ತಿದ್ದು, ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸ್ಪೀಕರ್ಗೆ ಸೂಚನೆ ನೀಡಬೇಕು. ಹಾಗೆಯೇ, ಯಾವುದೇ ಶಾಸಕರು ರಾಜೀನಾಮೆ ಸಲ್ಲಿಸಲು ಹೋದರೆ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡುವಂತೆ ಕೋರಲಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್
Pen drive case; ಇಂದೇ ಪ್ರಜ್ವಲ್ ರೇವಣ್ಣ ಎಸ್ಐಟಿ ಮುಂದೆ ಶರಣು?
Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ
ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ
Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ
Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ
Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ
Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್