ಸರಕಾರದ ವಿರುದ್ಧ ಪ್ರತಿಭಟನೆಗೆ ಸಿದ್ಧತೆ
Team Udayavani, Jul 11, 2019, 5:38 AM IST
ಬದಿಯಡ್ಕ: ರಾಜ್ಯ ಸರಕಾರವು ದೀನದಲಿತರ ಆರೋಗ್ಯ ಆರ್ಥಿಕ ಸವಲತ್ತುಗಳನ್ನು ಇಲ್ಲವಾಗಿಸಲು ಹಂತ, ಹಂತವಾಗಿ ಪ್ರಯತ್ನಿಸುತ್ತಿದೆ. ಆರೋಗ್ಯ ವಲಯದ ಅನುದಾನದಲ್ಲಿ ಸಂದಿಗ್ಧಾವಸ್ಥೆ ಉಂಟಾಗಿರುವುದಲ್ಲದೆ, ವಿದ್ಯಾರ್ಥಿ ಗಳಿಗೆ ಆರ್ಥಿಕ ಸಹಾಯ ನೀಡುವಲ್ಲೂ ಏರುಪೇರಾಗಿದೆ. ಈ ವ್ಯವಸ್ಥೆಯ ವಿರುದ್ಧ ಕಾಸರಗೋಡು ಜಿಲ್ಲೆಯ ಎಲ್ಲ ದಲಿತ ಸಂಘಟನೆಗಳ ನೇತೃತ್ವದಲಿ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿರುವುದಾಗಿ ಮದರು ಮಹಾಮಾತೆ ಮೊಗೇರ ಸಮಾಜದ ಅಧ್ಯಕ್ಷ ವಸಂತ ಅಜಕ್ಕೋಡು ಹೇಳಿದ್ದಾರೆ.
ಬದಿಯಡ್ಕದಲ್ಲಿ ನಡೆದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಈ ವಿಷಯ ತಿಳಿಸಿದರು. ಸಮಿತಿಯ ಗೌರವಾಧ್ಯಕ್ಷ ಆನಂದ ಕೆ. ಮವ್ವಾರ್ ಸಭೆಯನ್ನು ಉದ್ಘಾಟಿಸಿ ದಲಿತ ಸಮುದಾಯದ ಮೇಲೆ ದೇಶದಾದ್ಯಂತ ನಡೆಯುತ್ತಿರುವ ಅನ್ಯಾಯ, ಅವಮಾನಗಳ ವಿರುದ್ಧ ಧ್ವ್ವನಿಯೆತ್ತಲು ಎಲ್ಲರೂ ಒಂದಾಗಬೇಕೆಂದು ಕರೆ ನೀಡಿದರು.
ಕೃಷ್ಣ ದರ್ಬೆತ್ತಡ್ಕ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕೃಷ್ಣದಾಸ್ ದರ್ಬೆತ್ತಡ್ಕ, ರಾಮ ಪಟ್ಟಾಜೆ, ಡಿ. ಗೋಪಾಲ, ಸುರೇಶ ಅಜಕ್ಕೋಡು, ಅನಿಲ್ ಅಜಕ್ಕೋಡು, ಸುಂದರ ಬಾರಡ್ಕ, ಚಂದ್ರ ನೀರ್ಚಾಲು, ಶಶಿಧರ ಅಜಕ್ಕೋಡು, ಸುಂದರಿ ಮಾರ್ಪನಡ್ಕ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಶಂಕರ ಡಿ.ದರ್ಬೆತ್ತಡ್ಕ ಸ್ವಾಗತಿಸಿದರು. ಸುಧಾಕರ ಬೆಳ್ಳಿಗೆ ವಂದಿಸಿದರು.