ಧರೆಗುರುಳಿದ ವಿದ್ಯುತ್ ಕಂಬಗಳು: ಮೆಸ್ಕಾಂಗೆ ಅಪಾರ ನಷ್ಟ
ಹೆಬ್ರಿ: ಮುಂದುವರಿದ ಗಾಳಿ-ಮಳೆ
Team Udayavani, Jul 12, 2019, 5:51 AM IST
ಹೆಬ್ರಿ: ಹೆಬ್ರಿ ಸುತ್ತಮುತ್ತ ಮತ್ತೆ ಗಾಳಿ ಸಹಿತ ಮಳೆ ಮುಂದುವರಿದಿದ್ದು ಬೃಹತ್ ಮರಗಳು ವಿದ್ಯುತ್ ಕಂಬದ ಮೇಲೆ ಉರುಳಿದ ಪರಿಣಾಮ ಮೆಸ್ಕಾಂಗೆ ಅಪಾರ ನಷ್ಟ ಸಂಭವಿಸಿದೆ.
ಜು. 11ರಂದು ಬೆಳಗ್ಗೆಯಿಂದಲೇ ಗಾಳಿ ಸಹಿತ ಮಳೆ ಸುರಿಯುತ್ತಿದ್ದು ಕೆಲವೆಡೆ ಚರಂಡಿ ವ್ಯವಸ್ಥೆ ಸರಿ ಇಲ್ಲದ ಪರಿಣಾಮ ರಸ್ತೆಯಲ್ಲಿ ನೀರು ಹರಿದು ಸಂಚಾರಕ್ಕೆ ಸಮಸ್ಯೆಯಾಗಿದೆ. ಬೃಹದಾಕಾರದ ಮರಗಳು ವಿದ್ಯುತ್ ಕಂದ ಮೇಲೆ ಬಿದ್ದು ಸುಮಾರು 19ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ.
ಹೆಬ್ರಿ ಮೆಸ್ಕಾಂ ವ್ಯಾಪ್ತಿಯ ಕುಚ್ಚಾರು ಗ್ರಾಮದಲ್ಲಿ 3, ಕಬ್ಬಿನಾಲೆ ಗ್ರಾಮದಲ್ಲಿ 6, ಶಿವಪುರ ಗ್ರಾಮದಲ್ಲಿ 4, ಕಬ್ಬಿನಾಲೆ ಪೆರಡಾರ್ ಬಾಕ್ಯಾರ್ನಲ್ಲಿ 2, ಮೇಗದ್ದೆ ಗ್ರಾಮದಲ್ಲಿ 4 ಕಂಬಗಳು ಧರೆಗುರುಳಿದ್ದು ಲಕ್ಷಾಂತರ ರೂ.ನಷ್ಟವಾಗಿದೆ. ಬೇಳಂಜೆ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಿದೆ. ಹೆಬ್ರಿ ಮೆಸ್ಕಾಂ ಶಾಖಾಧಿಕಾರಿ ಲಕ್ಷ್ಮೀಶ ನಾಯ್ಕ ಅವರ ನೇತೃತ್ವದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ.
ಬೆಳಗ್ಗೆಯಿಂದ ಮಳೆ ಸುರಿಯುತ್ತಿದ್ದರು ಮಳೆಯನ್ನು ಲೆಕ್ಕಿಸದೆ ಕಬ್ಬಿನಾಲೆ ಗ್ರಾಮದ ಮತ್ತಾವು ಬಳಿ ಗಾಳಿಗೆ ವಿದ್ಯುತ್ ಕಂಬದ ಮೇಲೆ ಉರುಳಿ 6 ವಿದ್ಯುತ್ ಕಂಬಗಳು ಸಂಪೂರ್ಣ ತುಂಡಾಗಿದ್ದು ದುರಸ್ತಿ ಕಾರ್ಯದಲ್ಲಿ ಮೆಸ್ಕಾಂ ತೊಡಗಿಸಿಕೊಂಡಿದೆ. ಸುಮಾರು 1.5 ಕೀ.ಮೀ. ದೂರದಲ್ಲಿ ಕಂಬ ತುಂಡಾದ ಪ್ರದೇಶಕ್ಕೆ ಯಾವುದೇ ವಾಹನ ಹೋಗದ ಸ್ಥಿತಿ ಇರುವುದರಿಂದ 6 ಕಂಬಗಳನ್ನು ಮೆಸ್ಕಾಂ ಕೆಲಸದ ಸಿಬಂದಿ ತಲೆಯಲ್ಲಿ ಹೊತ್ತು ನದಿಯನ್ನು ದಾಟಿ ಸಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.