ವಾಯುಗಡಿ ನಿರ್ಬಂಧ ಮುಕ್ತ
ಭಾರತೀಯ ವಿಮಾನ ವಲಯಕ್ಕೆ ಸಿಹಿ ಸುದ್ದಿ ಕೊಟ್ಟ ಪಾಕ್
Team Udayavani, Jul 17, 2019, 5:31 AM IST
ಹೊಸದಿಲ್ಲಿ: ಮಹತ್ವದ ಬೆಳವಣಿಗೆಯಲ್ಲಿ, ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶ ಪ್ರವೇಶಿಸದಂತೆ ವಿಧಿಸಿದ್ದ ನಿರ್ಬಂಧವನ್ನು ಪಾಕಿಸ್ಥಾನ ಹಿಂಪಡೆದಿದೆ. ಬಾಲಕೋಟ್ ಮೇಲೆ ಭಾರತೀಯ ವಾಯುಪಡೆಯು (ಐಎಎಫ್) ದಾಳಿ ನಡೆಸಿದ ಹಿನ್ನೆಲೆಯಲ್ಲಿ ಫೆ. 26ರಿಂದ ಪಾಕಿಸ್ಥಾನ ಸರಕಾರ ಈ ನಿಷೇಧ ಹೇರಿತ್ತು. ಮಂಗಳವಾರ ಮಧ್ಯಾಹ್ನ ಸುಮಾರು 12:41ಕ್ಕೆ ಪಾಕಿಸ್ಥಾನ ನಾಗರಿಕ ವಿಮಾನಯಾನ ಪ್ರಾಧಿಕಾರ (ಪಿಸಿಎಎ), ಈ ನಿರ್ಧಾರ ಪ್ರಕಟಿಸಿದೆ.
ಏರ್ ಇಂಡಿಯಾಗೆ ರಿಲೀಫ್!: ಪಾಕಿಸ್ಥಾನದ ನಡೆಯಿಂದಾಗಿ, ನಿರ್ಬಂಧ ಜಾರಿಗೊಂಡಲ್ಲಿಂದ ಇಲ್ಲಿಯವರೆಗೆ 491 ಕೋಟಿ ರೂ. ನಷ್ಟ ಅನುಭವಿಸಿದ್ದ ಭಾರತದ ಏರ್ ಇಂಡಿಯಾ ಸಂಸ್ಥೆ ಈಗ ನಿಟ್ಟುಸಿರು ಬಿಟ್ಟಿದೆ. ಭಾರತದಿಂದ ಅಮೆರಿಕ ಹಾಗೂ ಯುರೋಪ್ಗೆ ತೆರಳಲು ಈವರೆಗೆ ತಾನು ಅನುಭವಿಸುತ್ತಿದ್ದ ಮಾಸಿಕ ನಷ್ಟದಲ್ಲಿ 20 ಲಕ್ಷ ರೂ. ಹಾಗೂ 5 ಲಕ್ಷ ರೂ.ಗಳಷ್ಟು ಇಳಿಮುಖವಾಗಲಿದೆ ಎಂದಿದೆ.
ಬಾಲಕೋಟ್ ದಾಳಿಯಿಂದ ಐಎಎಫ್ ಶಕ್ತಿ ಅನಾವರಣ: ಬಾಲಕೋಟ್ನಲ್ಲಿ ಫೆ.26ರಂದು ನಡೆಸಿದ ದಾಳಿಯಿಂದ ಐಎಎಫ್ನ ಶಕ್ತಿ ಏನು ಎನ್ನುವುದು ಅನಾವರಣಗೊಂಡಿದೆ ಎಂದು ಏರ್ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ “ಆಪರೇಷನ್ ಸಫೇದ್ ಸಾಗರ್’ಗೆ 20 ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತಕ್ಕೆ ಮತ್ತೂಂದು ಬಿಸಿ
ಮತ್ತೂಂದೆಡೆ, ಅಮೆರಿಕ-ಇರಾನ್ ನಡುವಿನ ಜಗಳದಿಂದಾಗಿ, ಭಾರತೀಯ ವೈಮಾನಿಕ ಸಂಸ್ಥೆಗಳು ದಿನವೊಂದಕ್ಕೆ 37 ಲಕ್ಷ ರೂ. ಕಳೆದುಕೊಳ್ಳುತ್ತಿವೆ ಎಂದು ಹೇಳಲಾಗಿದೆ. ಇರಾನ್ ವಾಯು ಪ್ರದೇಶವನ್ನು ಬಳಸದಿರಲು ಈ ಸಂಸ್ಥೆಗಳು ನಿರ್ಧರಿಸಿದ್ದು, ಸುತ್ತು ಹಾಕಿ ಕೊಂಡು ಹೋಗುವ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಈ ನಷ್ಟ ಉಂಟಾಗುತ್ತಿದೆ ಎಂದು ಹೇಳಲಾಗಿದೆ.