ದೇಶದಲ್ಲಿರುವ ಪ್ರತಿಯೊಬ್ಬ ಅಕ್ರಮ ವಲಸಿಗರನ್ನ ಗುರುತಿಸಿ, ಗಡಿಪಾರು ಮಾಡ್ತೇವೆ: ಶಾ
Team Udayavani, Jul 17, 2019, 5:22 PM IST
ನವದೆಹಲಿ:ದೇಶದ ಯಾವುದೇ ಭಾಗದಲ್ಲಿ ಅಕ್ರಮ ವಲಸಿಗರು ವಾಸ್ತವ್ಯ ಹೂಡಿದ್ದರೆ ಅಂತಹವರನ್ನು ಗುರುತಿಸಿ, ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಅವರನ್ನು ಗಡಿಪಾರು ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ರಾಜ್ಯ ಸಭೆಗೆ ತಿಳಿಸಿದ್ದಾರೆ.
ಈಗ ದೇಶದ ಅಸ್ಸಾಂನಲ್ಲಿ ಮಾತ್ರ ಜಾರಿಯಲ್ಲಿರುವ ಕೇಂದ್ರ ಸರ್ಕಾರದ ಎನ್ ಆರ್ ಸಿ(ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್)ಯನ್ನು ದೇಶದ ಉಳಿದ ರಾಜ್ಯಗಳಲ್ಲಿಯೂ ಜಾರಿಗೊಳಿಸುವ ಯೋಜನೆ ಇದೆಯೇ ಎಂಬ ಸಮಾಜವಾದಿ ಪಕ್ಷದ ಸಂಸದ ಜಾವೇದ್ ಅಲಿ ಖಾನ್ ಕೇಳಿದ ಪ್ರಶ್ನೆಗೆ ಶಾ ಈ ಉತ್ತರ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದು ತುಂಬಾ ಉತ್ತಮವಾದ ಪ್ರಶ್ನೆ. ಎನ್ ಆರ್ ಸಿ ಈಗ ಅಸ್ಸಾಂ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಅಲ್ಲದೇ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದರೆ ದೇಶಾದ್ಯಂತ ಎನ್ ಆರ್ ಸಿ ಜಾರಿ ಮಾಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿಯೇ ಘೋಷಿಸಲಾಗಿತ್ತು. ಅದರಂತೆ ಕೇಂದ್ರ ಸರ್ಕಾರ ದೇಶದ ಮೂಲೆ, ಮೂಲೆಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರನ್ನು ಪತ್ತೆ ಹಚ್ಚಿ ಅಂತಹವರನ್ನು ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಗಡಿಪಾರು ಮಾಡಲಾಗುವುದು ಎಂದು ವಿವರಿಸಿದರು.
ಅದೇ ರೀತಿ ಭಾರತದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿರುವ ರೋಹಿಂಗ್ಯಾ ಮುಸ್ಲಿಮರ ಕುರಿತು ಕೇಳಿದ ಅಂಕಿ ಅಂಶದ ಬಗ್ಗೆ ಮಾಹಿತಿ ನೀಡಿದ ಗೃಹಖಾತೆ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ್ ರಾಯ್, ಈ ಬಗ್ಗೆ ನಮ್ಮ ಬಳಿ ನಿಖರವಾದ ಅಂಕಿ,ಅಂಶಗಳಿಲ್ಲ. ರೋಹಿಂಗ್ಯಾ ಮುಸ್ಲಿಮರು ದೇಶಾದ್ಯಂತ ಉಳಿದುಕೊಂಡಿದ್ದಾರೆ. ಕೆಲವರು ಬಾಂಗ್ಲಾದೇಶಕ್ಕೆ ವಾಪಸ್ ಆಗಿದ್ದಾರೆ. ಈ ಬಗ್ಗೆ ಶೀಘ್ರವೇ ಅಂಕಿ, ಅಂಶ ಪಡೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.