ಅತೃಪ್ತ ಶಾಸಕರು ಗೈರುಹಾಜರಾಗಲು ಸ್ಪೀಕರ್ ಅನುಮತಿ ಬೇಕು: ಕೃಷ್ಣಭೈರೇಗೌಡ
Team Udayavani, Jul 17, 2019, 4:45 PM IST
ಬೆಂಗಳೂರು: ಗುರುವಾರ ವಿಧಾನಸಭೆಯಲ್ಲಿ ನಡೆಯಲಿರುವ ಕಲಾಪದಿಂದ ಬಂಡಾಯ ಶಾಸಕರು ಗೈರು ಹಾಜರಾಗಲು ಸ್ಪೀಕರ್ ಅವರ ಅನುಮತಿ ಪಡೆಯಬೇಕು. ಈ ಬಗ್ಗೆ ನಮ್ಮ ವಿಧಾನಸಭಾ ನಿಯಮಾವಳಿಯಲ್ಲಿಯೇ ಇದೆ. ಈ ಬಗ್ಗೆ ಸ್ಪೀಕರ್ ಅವರಲ್ಲಿ ಸ್ಪಷ್ಟನೆ ಕೇಳಲು ಹೋಗಿದ್ದೇವು ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಕಾಂಗ್ರೆಸ್, ಜೆಡಿಎಸ್ ನಾಯಕರು ಭೇಟಿಯಾಗಿ ಚರ್ಚೆ ನಡೆಸಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಅತೃಪ್ತ ಶಾಸಕರು ಸದನಕ್ಕೆ ಹಾಜರಾಗಬೇಕೆಂದು ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಆದರೆ ಶಾಸಕರು ಸದನದಿಂದ ಹೊರಗಿರಬಾರದು ಎಂದು ಕಾಂಗ್ರೆಸ್, ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ತೀರ್ಮಾನಿಸಿದೆ. ಅದಕ್ಕಾಗಿ ಶಾಸಕರು ಗೈರು ಹಾಜರಾಗಬೇಕಿದ್ದರೂ ಸ್ಪೀಕರ್ ಅನುಮತಿ ಕಡ್ಡಾಯ ಎಂದು ವಿವರಿಸಿದರು.
ವಿಪ್ ಜಾರಿ ಅನ್ವಯ ಶಾಸಕರು ಸದನಕ್ಕೆ ಹಾಜರಾಗಬೇಕು. ಇದು ಶಾಸಕಾಂಗ ಪಕ್ಷದ ಹಕ್ಕು. ಈ ಬಗ್ಗೆ ಸ್ಪೀಕರ್ ಬಳಿ ಚರ್ಚಿಸಲು ಬಂದಿದ್ದೇವು. ಈ ಬಗ್ಗೆ ಅರ್ಜಿ ಕೊಡಿ ಎಂದು ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿದ್ದರು. ಜೊತೆಗೆ ಕಾನೂನು ತಜ್ಞರ ಸಲಹೆ ಪಡೆಯಿರಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.