ಸಾರ್ವಜನಿಕ ಆಸ್ಪತ್ರೆಯಲ್ಲಿ ಪೌಷ್ಟಿಕ ಪುನರ್ವಸತಿ ಕೇಂದ್ರ ಆರಂಭ
Team Udayavani, Jul 24, 2019, 4:56 PM IST
ಬೇಲೂರು ಸರ್ಕಾರಿ ಅಸ್ಪತ್ರೆಯಲ್ಲಿ ತೆರದಿರುವ ಪೌಷ್ಟಿಕ ಆಹಾರ ಚೇತನ ಕೇಂದ್ರದಲ್ಲಿ ತಾಯಿಯೊಂದಿಗೆ ಮಗು ದಾಖಲಾಗಿದೆ.
ಬೇಲೂರು: ಚಿಕ್ಕ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಪೌಷ್ಟಿಕ ಪುನರ್ವಸತಿ ಕೇಂದ್ರ ಆರಂಭಿಸಿದೆ.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಪೌಷ್ಟಿಕ ಪುನರ್ವಸತಿ ಕೇಂದ್ರ ಆರಂಭಗೊಂಡಿದ್ದು ತಾಲೂಕಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಿ ಗುಣ ಮಟ್ಟದ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಮಕ್ಕಳ ಬೆಳವಣಿಗೆ ಮತ್ತು ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಈ ಕೇಂದ್ರ ಪೂರಕವಾಗಿದೆ.
5 ವರ್ಷದೊಳಗಿನ ಮಕ್ಕಳಿಗೆ ಚಿಕಿತ್ಸೆ: ತಾಲೂಕಿನ ಅಂಗನವಾಡಿಯಲ್ಲಿ ಕಲಿಯುವ 1ರಿಂದ 5 ವರ್ಷದೊಳಗಿನ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳನ್ನು ಸರ್ಕಾರಿಆಸ್ಪತ್ರೆಯಲ್ಲಿರುವ ಕೇಂದ್ರಕ್ಕೆ ದಾಖಲಿಸಿ 14 ದಿನ ಉತ್ತಮ ಪೌಷ್ಟಿಕ ಆಹಾರ ಮತ್ತು ಚಿಕಿತ್ಸೆ ನೀಡಿ ತೂಕ ಹೆಚ್ಚಳವಾದ ನಂತರ ಮನೆಗೆ ಕಳುಹಿಸಲಾಗುವ ಮಹತ್ತರ ಯೋಜನೆ ಇದಾಗಿದೆ.
ತಾಯಂದಿರಿಗೂ ದಿನಗೂಲಿ ಭತ್ಯೆ: ಕೇಂದ್ರದಲ್ಲಿ ದಾಖಲಾಗುವ ಮಕ್ಕಳಿಗೆ ಉಚಿತ ಔಷಧಿ, ಉಚಿತ ಆಹಾರ, ಉಚಿತ ಆರೋಗ್ಯ ತಾಯಂದಿರಿಗೂ ಉಚಿತ ಆಹಾರ ಮತ್ತು ದಿನಗೂಲಿ ಭತ್ಯೆ ಸಹ ನೀಡಲಾಗುತ್ತಿದ್ದು ಇದರ ಜೋತೆಯಲ್ಲಿ ಮಕ್ಕಳಿಗೆ ಅಗತ್ಯವಾದ ಶಿಕ್ಷಣ ನೀಡುವುದು ಸಹ ಕೇಂದ್ರ ಮುಖ್ಯ ಉದ್ದೇಶವಾಗಿದೆ.
ಪೌಷ್ಟಿಕ ಆಹಾರ ವಿತರಣೆ: ದಾಖಲಾಗಿರುವ ಮಕ್ಕಳಿಗೆ ಪ್ರತಿ ನಿತ್ಯವಿವಿಧ ಬಗೆಯ ಉಟೋಪಾಚಾರ ಮಾಡು ತ್ತಿದ್ದು, ಅಪೌಷ್ಟಿಕ ಆಹಾರಗಳಾದ ಮೊಳಕೆ ಕಾಳು, ಸೊಪ್ಪು, ತರಕಾರಿ, ಮೊಟ್ಟೆ ಹಾಗೂ ಶುದ್ಧ ಕುಡಿಯುವ ನೀರು ಇನ್ನಿತರೆ ಗುಣ ಮಟ್ಟದ ಆಹಾರ ಪದಾರ್ಥ ಗಳನ್ನು ಮಕ್ಕಳಿಗೆ ನೀಡುತ್ತಿರುವುದಲ್ಲದೇ ಮಕ್ಕಳ ಪೋಷಕರಿಗೂ ಸಹ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಉತ್ತಮ ಪ್ರತಿಕ್ರಿಯೆ: ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ಕುಮಾರ್ ಸರ್ಕಾರ ಎನ್ಆರ್ಸಿ ಯೋಜನೆಯಲ್ಲಿ ಅಪೌಷ್ಟಿಕತೆಉಂಟಾಗಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಮಕ್ಕಳ ಆರೋಗ್ಯವನ್ನು ಉತ್ತಮ ಪಡಿಸುವ ಯೋಜನೆ ಇದಾಗಿದೆ. ಈಗಾಗಲೇ ಬೇಲೂರು, ಅರಸಿಕೇರೆ, ಹಾಸನ ಆಸ್ಪತ್ರೆಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಿದ್ದು ಸಾರ್ವಜನಿಕರಲ್ಲಿ ಉತ್ತಮ ಪ್ರತಿಕ್ರಿಯೆ ಉಂಟಾಗಿದೆ ಎಂದು ತಿಳಿಸಿದರು.
ಕೇಂದ್ರಕ್ಕೆ ದಾಖಲಾದ ಮಗುವಿನ ದೈಹಿಕ ಮಾನಸಿಕ, ಅರ್ಥಿಕ ಮತ್ತು ಪೋಷಕಾಂಶದ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸುವುದು, ಗಂಭೀರ ಸ್ಥಿತಿಯಿಂದ ಕೇಂದ್ರಕ್ಕೆ ಬರುವ ಮಕ್ಕಳಿ ಗೆ ತುರ್ತು ಆರೋಗ್ಯ ಸೇವೆಯನ್ನು ನೀಡುವುದು, ಮಗುವಿನ ವೈದ್ಯಕೀಯ ಮತ್ತು ಪೋಷಕಾಂಶ ಯುಕ್ತ ಆಹಾರ ಸೇವೆಯನ್ನು ಒದಗಿಸುವುದು, ಮಗು ಮತ್ತು ತಾಯಿಗೆ ಸುರಕ್ಷಿತ ವಾತಾವರಣ ಒದಗಿಸುವುದು, ಮಗುವಿನ ಬಿಡುಗಡೆ ಸಮಯದಲ್ಲಿ ತಾಯಿಗೆ ಪೋಷಕಾಂಶ ಯುಕ್ತ ಆಹಾರ ಕುರಿತು ಮಾಹಿತಿ ನೀಡುವ ಯೋಜನೆ ಇದಾಗಿದೆ ಎಂದು ಹೇಳಿದರು.
4 ಲಕ್ಷ ರೂ. ವೆಚ್ಚ: ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನರಸೇಗೌಡ ಮಾತನಾಡಿ, ಸರ್ಕಾರ ಸುಮಾರು 4 ಲಕ್ಷ ವೆಚ್ಚದಲ್ಲಿ ಪೌಷ್ಟಿಕ ಆಹಾರ ಚೇತನ ಕೇಂದ್ರ ಸ್ಥಾಪನೆ ಮಾಡಿದ್ದು, ಈಗಗಲೆ 6 ಮಕ್ಕಳಿಗೆ ಚಿಕಿತ್ಸೆ ನೀಡಿ 3 ಮಕ್ಕಳನ್ನು ಮನೆಗೆ ಕಳುಹಿಸಿದ್ದು, ಮಕ್ಕಳಿಗೆ ಚಿಕಿತ್ಸೆ ನೀಡುವ ಜೊತೆಯಲ್ಲಿ ವಿವಿಧ ಬಗೆಯ ಆಟಿಕೆ ಮತು ಟೀವಿ ವೀಕ್ಷಣೆಗೆ ಅನುಕೂಲಮಾಡಿಕೊಡಲಾಗಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್ ಇದ್ದರು.