ಹಳಿ ಮೇಲಿನ ಮಣ್ಣು ತೆರವು: ರೈಲು ಸಂಚಾರ ಪುನಾರಂಭ
Team Udayavani, Jul 26, 2019, 3:45 PM IST
ಸಕಲೇಶಪುರ ರೈಲು ನಿಲ್ದಾಣದಲ್ಲಿ ಮಂಗಳೂರು ಕಡೆಗೆ ಹೋಗುತ್ತಿರುವ ರೈಲು
ಸಕಲೇಶಪುರ: ರೈಲು ಹಳಿಗಳ ಮೇಲೆ ಭೂ ಕುಸಿತದ ಹಿನ್ನೆಲೆಯಲ್ಲಿ ಕಳೆದ 5 ದಿನಗಳಿಂದ ಬೆಂಗಳೂರು-ಮಂಗಳೂರು ನಡುವೆ ರದ್ದುಗೊಂಡಿದ್ದ ರೈಲು ಸಂಚಾರ ಗುರುವಾರದಿಂದ ಆರಂಭ ಗೊಂಡಿದೆ.
ತಾಲೂಕಿನ ಶಿರಿವಾಗಿಲು ಸಮೀಪದ 86ನೇ ಮೈಲುಗಲ್ಲಿನ ಸುರಂ ಗದ ಸಮೀಪ ರೈಲು ಹಳಿಗಳ ಮೇಲೆ ಶನಿವಾರ ಮುಂಜಾನೆ ಕೆಲವು ಮಧ್ಯಮ ಗಾತ್ರದ ಬಂಡೆಗಳು ರೈಲು ಹಳಿಗಳ ಮೇಲೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವನ್ನು ರದ್ದುಪಡಿಸಿ ಮಣ್ಣು ತೆರವುಗೊಳಿಸಲು ಕಾರ್ಯಾ ಚರಣೆ ಆರಂಭಿಸಲಾಗಿತ್ತು.
ಸೋಮವಾರ ಮಧ್ಯಾಹ್ನದ ಹೊತ್ತಿಗೆ ಮಣ್ಣು ತೆರವು ಗೊಳಿಸಿ ಕಾರ್ಯಾಚರಣೆ ಮುಕ್ತಾಯದ ಹಂತಕ್ಕೆ ಬಂದಿದ್ದರೂ ಸಹ ರಾತ್ರಿಯ ವೇಳೆಗೆ ಸುರಿದ ಭಾರೀ ಮಳೆಯ ಪರಿಣಾಮ ಮಣ್ಣು ರೈಲು ಹಳಿ ಗಳ ಮೇಲೆ ಕುಸಿದಿದ್ದರಿಂದ ಮಂಗಳವಾರ ವಿಡೀ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಕಾರ್ಯಾಚರಣೆ ಮುಗಿಯದ ಕಾರಣ ಬುಧವಾರ ಕಾರ್ಯಾಚರಣೆ ನಡೆಸಿದ ಪರಿಣಾಮ ಗುರುವಾರದಿಂದ ಬೆಂಗಳೂರು- ಮಂಗಳೂರು ನಡುವಿನ ರೈಲು ಮಾರ್ಗ ಸಂಚಾರಕ್ಕೆ ಮುಕ್ತ ವಾಗಿದೆ. ಮಣ್ಣು ತೆರವು ಕಾರ್ಯಾಚರಣೆಗಾಗಿ ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿಗಳು ಸೇರಿದಂತೆ 2 ಹಿಟಾಚಿ ಗಳನ್ನು ಬಳಸಲಾಗಿತ್ತು. ರೈಲು ಸಂಚಾರ ಸತತ 5 ದಿನ ರದ್ದುಗೊಂಡಿದ್ದರಿಂದ ಗುರುವಾರ ರೈಲು ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು.