ಮಾಹಿತಿ ಕೊರತೆಯಿಂದ ಜನಸಂಖ್ಯೆ ನಿಯಂತ್ರಣದಲ್ಲಿ ಹಿಂದೆ
ಕುಟುಂಬಕ್ಕೆ ಒಂದೇ ಮಗು ಸಾಕು • ತಾಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ಬಾಬು ಅಭಿಮತ
Team Udayavani, Jul 30, 2019, 4:52 PM IST
ಮಧುಗಿರಿಯ ಸಾಮರ್ಥ್ಯಸೌಧದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಪಾವಗಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜನಜಾಗೃತಿ ಮೂಡಿಸಲಾಯಿತು.
ಮಧುಗಿರಿ: ಹೆಚ್ಚುತ್ತಿರುವ ಜನಸಂಖ್ಯೆಯಿಂದ ದೇಶ ಆರ್ಥಿಕವಾಗಿ ಹಿಂದುಳಿಯಲಿದ್ದು, ಕುಟುಂಬಕ್ಕೆ ಒಂದೇ ಮಗು ಸಾಕು ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ.ರಮೇಶ್ಬಾಬು ತಿಳಿಸಿದರು.
ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ, ತಾಪಂ, ಪುರಸಭೆ, ಸಾರ್ವಜನಿಕ ಆಸ್ಪತ್ರೆ, ಶ್ರೀ ರಾಘವೇಂದ್ರ ನರ್ಸಿಂಗ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ನಡೆದ ವಿಶ್ವ ಜನ ಸಂಖ್ಯಾದಿನಾಚರಣೆಯಲ್ಲಿ ಮಾತನಾಡಿದರು.
ವಿವಿಧ ಕಾರ್ಯಕ್ರಮ: ಕುಟುಂಬ ಕಲ್ಯಾಣ ನಿಭಾಯಿ ಸುವ ಸಾಮರ್ಥ್ಯ ತಾಯಿಗೆ ಮಾತ್ರ ಇದೆ. 1989ರಿಂದ ವಿಶ್ವಸಂಸ್ಥೆಯಿಂದ ಈ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಸರ್ಕಾರವು ಹೆಚ್ಚು ಒತ್ತು ಕೊಟ್ಟ ಪರಿಣಾಮ ಶೇ.0.3 ಜನಸಂಖ್ಯೆ ಹೆಚ್ಚಳ ಕಡಿಮೆಯಾಗಿದೆ. 770 ಕೋಟಿ ವಿಶ್ವದ ಜನಸಂಖ್ಯೆಯಾದರೆ, ಭಾರತ-136, ಚೀನಾ-142 ಕೋಟಿಯಿದೆ. ಬಡತನ ಹಾಗೂ ಲಿಂಗ ಅಸಮಾನತೆಯಿಂದ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಸಮರ್ಪಕ ಜಾಗೃತಿ ಹಾಗೂ ಮಾಹಿತಿ ಕೊರತೆಯಿಂದ ನಿಯಂತ್ರಣಕ್ಕೆ ಬರುತ್ತಿಲ್ಲ. ಹಿಂದೆ ತುರ್ತುಪರಿಸ್ಥಿತಿಯಲ್ಲಿ ಇಂದಿರಾಗಾಂಧಿ ಪುರುಷರಿಗೆ ಸಂತಾನಶಕ್ತಿ ಹರಣ ಕಡ್ಡಾಯ ಶಸ್ತ್ರಚಿಕಿತ್ಸೆ ಜಾರಿಗೊಳಿಸಿದರೂ ಅನುಷ್ಠಾನ ವಾಗಲಿಲ್ಲ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಿನರಸಪ್ಪ ಮಾತನಾಡಿ, ಆಶಾ ಹಾಗೂ ಕಾರ್ಯಕರ್ತೆಯರ ಪಾತ್ರ ಜನಸಂಖ್ಯೆ ನಿಯಂತ್ರಣದಲ್ಲಿ ಮಹತ್ವ ದ್ದಾಗಿದೆ. ನೈರ್ಮಲ್ಯ ಹಾಗೂ ತಾಯಿಯ ಆರೋಗ್ಯದ ಬಗ್ಗೆ ಅಗತ್ಯ ಮಾಹಿತಿ ನೀಡಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಇವರ ಕಾರ್ಯ ಶ್ಲಾಘನೀಯ ಎಂದು ಹೇಳಿ ದರು. ತಾಪಂ ಇಒ ದೊಡ್ಡಸಿದ್ದಪ್ಪ ಮಾತನಾಡಿ, ಜನ ಸಂಖ್ಯೆಗೆ ಅನುಗುಣವಾಗಿ ದೇಶದ ಭೌಗೋಳಿಕ ಸಾಮರ್ಥ್ಯ ಹೆಚ್ಚುವುದಿಲ್ಲ. ಈ ಅಸಮ ತೋಲನ ಮನು ಕುಲಕ್ಕೆ ಮಾರಕವಾಗಲಿದೆ. ಆದ್ದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕುಟುಂಬಕ್ಕೆ ಒಂದು ಮಗು, ಮನೆತುಂಬಾ ನಗು ಎಂಬ ಘೋಷ ವಾಕ್ಯದೊಂದಿಗೆ ಈ ಕುಟುಂಬ ಕಲ್ಯಾಣ ಯೋಜನೆ ಯಡಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಜನಸಂಖ್ಯೆ ನಿಯಂತ್ರಣದಲ್ಲಿ ಹಿಂದೆ: ಸಂಪನ್ಮೂಲ ವ್ಯಕ್ತಿಯಾದ ನಿವೃತ್ತ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕುಲಕರ್ಣಿ ಮಾತನಾಡಿ, ಆಶಾ ಹಾಗೂ ಅಂಗನವಾಡಿ ಸಿಬ್ಬಂದಿ ಬದಲಾವಣೆಯ ಹರಿಕಾರರು. 1921 ರಲ್ಲಿ ದೇಶದ ಜನಸಂಖ್ಯೆ 25 ಕೋಟಿಯಿದ್ದು, 10 ವರ್ಷಕ್ಕೆ 27 ಕೋಟಿ. ಆದರೆ 1971ರಲ್ಲಿ ಇದು 54 ಕೋಟಿಗೆ ಏರಿಕೆಯಾಗಿದ್ದು, 40 ವರ್ಷಕ್ಕೆ ದುಪ್ಪಟ್ಟಾಗಿದೆ. ಹಾಗೂ 2001ರಲ್ಲಿ 102 ಕೋಟಿಯಾಗಿದ್ದು, ಈಗ 134 ಕೋಟಿಗೆ ಏರಿಕೆಯಾಗಿದೆ. ಜನಸಂಖ್ಯೆ ನಿಯಂತ್ರಣ ದಲ್ಲಿ ದೇಶ ಹಿಂದುಳಿದಿದೆ.
ಇದರಿಂದ ದೇಶವೂ ಹಿಂದುಳಿಯಲಿದೆ. ಇದಕ್ಕಾಗಿ 20ಕ್ಕೂ ಮೊದಲು ಮದುವೆ ಬೇಡವೆಂದು, ಮದುವೆಯಾದ 2 ವರ್ಷದ ತನಕ ಮಕ್ಕಳು ಬೇಡವೆಂದು, ಮೊದಲನೇ ಮಗು ವಿಗೂ 2ನೇ ಮಗುವಿಗೂ 3 ವರ್ಷದ ಅಂತರವಿದ್ದರೆ ತಾಯಿಯ ಆರೋಗ್ಯ ಹೆಚ್ಚಾಗಲಿದೆ ಎಂದು ಜನರಲ್ಲಿ ಜಾಗೃತಿ ತರಬೇಕು. ಪ್ರಸ್ತುತ ಆಹಾರ, ನೀರು, ಉದ್ಯೋಗ ಹಾಗೂ ಬದುಕಲು ಭೂಮಿ ಎಲ್ಲವೂ ಕಡಿತವಾಗುತ್ತಿದ್ದು, ಅಪಾಯದ ಮುನ್ಸೂಚನೆಯಾಗಿದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪರುಶ ರಾಮಯ್ಯ, ಸಿಡಿಪಿಒ ಟಿ.ಆರ್.ಸ್ವಾಮಿ, ತಾಪಂ ನಿರ್ದೇಶಕ ಸುಬ್ಬರಾಜ ಅರಸ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಧರಣೇಶ್ಗೌಡ, ಆರೋಗ್ಯ ನಿರೀಕ್ಷಕ ಕೇಶವರೆಡ್ಡಿ, ಹಾಗೂ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.