ಸರಳತೆಯಿಂದಲೇ ಸಭಾಧ್ಯಕ್ಷ ಹುದ್ದೆಗೇರಿದ ರೈತನ ಮಗ
ಸಚಿವರಾಗುತ್ತಾರೆಂಬ ನಿರೀಕ್ಷೆಯಲ್ಲಿದ್ದ ಬೆಂಬಲಿಗರು, ಅನುಭವಕ್ಕೆ ಸಿಕ್ಕ ಫಲವೆಂದು ಸಂಭ್ರಮ
Team Udayavani, Jul 31, 2019, 5:00 AM IST
ಶಿರಸಿ: ಸರಳತೆ, ಪಕ್ಷ ನಿಷ್ಠೆ, ಸಜ್ಜನಿಕೆಯಿಂದಲೇ ಆರನೇ ಬಾರಿಗೆ ವಿಧಾನಸಭೆ ಗದ್ದುಗೆ ಏರಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಇದೀಗ ಸಂವಿಧಾನಾತ್ಮಕವಾಗಿ ಅತ್ಯಂತ ಮಹತ್ವದ ಹುದ್ದೆಗಳಲ್ಲಿ ಒಂದಾದ ವಿಧಾನಸಭೆ ಅಧ್ಯಕ್ಷ ಹುದ್ದೆಗೇರಲು ಸನ್ನದ್ಧರಾಗಿದ್ದಾರೆ.
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಾಗೇರಿ, ಈ ಬಾರಿ ಮಂತ್ರಿ ಆಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಜಿಲ್ಲೆಯಲ್ಲಿ ಕೇಂದ್ರ ಸಚಿವರಾಗಿ, ಕರ್ನಾಟಕದ ಮುಖ್ಯಮಂತ್ರಿಗಳಾಗಿ ದೊಡ್ಮನೆ ರಾಮಕೃಷ್ಣ ಹೆಗಡೆ ಅವರ ಬಳಿಕ ಇಂಥದ್ದೊಂದು ದೊಡ್ಡ ಹುದ್ದೆ ಕಾಗೇರಿ ಅವರಿಗೆ ಬಂದಿದ್ದಕ್ಕೂ ಸಂಭ್ರಮ ಉಂಟಾಗಿದೆ.
ವಿಶ್ವೇಶ್ವರ ಹೆಗಡೆ, ಅಡಕೆ ಬೆಳೆಗಾರ ಕುಟುಂಬದಲ್ಲಿ ಜನಿಸಿ ದವರು. ಅಡಕೆ, ಭತ್ತ, ಕಬ್ಬು, ಕಾಳು ಮೆಣಸು ಕೃಷಿ ಮಾಡಿ ಕೊಂಡು ಜೀವನ ನಡೆಸುತ್ತಿದ್ದ ಶಿರಸಿ ಸಮೀಪದ ಕಾಗೇರಿ ಸಹಕಾರಿ, ಶಿಕ್ಷಣ ಪ್ರೇಮಿ ದಿ|ಅನಂತ ಹೆಗಡೆ, ಸರ್ವೇಶ್ವರಿ ಹೆಗಡೆ ಅವರ ಮಗ. ನಾಲ್ವರು ಸಹೋದರರು ಒಟ್ಟಾಗಿ ಬದುಕುವ ಕೂಡು ಕುಟುಂಬದ ವ್ಯಕ್ತಿ.
ಈ ಹಿಂದೆ ಶಿಕ್ಷಣ ಸಚಿವರಾಗಿದ್ದಾಗಲೂ ಬೆಂಗಳೂರಿನಲ್ಲಿ ಸಂಸಾರ ಉಳಿಸಿಕೊಳ್ಳದೆ ಸರ್ಕಾರಿ ಶಾಲೆಗೆ ಮಗಳನ್ನು ಕಳುಹಿಸಿ, ಹಳ್ಳಿ ಜೀವನ ನಡೆಸಿದರು. ಉತ್ತರ ಕನ್ನಡ, ಮಲೆ ನಾಡು, ಕರಾವಳಿ ಸೇರಿದಂತೆ ನಾಡಿನ ಕೃಷಿಕನ ನೋವು- ನಲಿವು ಅರಿತವರು. ಪರಿಸರ ಚಳವಳಿಗಳಲ್ಲಿ ಕೂಡ ಮುಂಚೂಣಿಯಲ್ಲಿ ಇದ್ದವರು. ಊರಿನಲ್ಲಿ ಬಿಡುವಿದ್ದಾಗ ತೋಟ, ಗದ್ದೆ, ಬೇಣ ಎನ್ನುತ್ತಾ ಓಡಾಡುತ್ತಲೇ ಇದ್ದವರು.
ವಕೀಲರಾಗಲಿಲ್ಲ, ಎಬಿವಿಪಿ ಬಿಡಲಿಲ್ಲ: 1961ರ ಜು.10ರಂದು ಜನಿಸಿದ ಕಾಗೇರಿ ಅವ ರಿಗೆ ಮೂವರು ಹೆಣ್ಣು ಮಕ್ಕಳು. ಪತ್ನಿ ಭಾರತಿ ಹೆಗಡೆ. ಊರ ಸಮೀಪದ ಬರೂರು, ಕುಳವೆ ಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ವಾಣಿಜ್ಯ ಪದವಿ, ಎಲ್ಎಲ್ಬಿ ಓದಿದ್ದು ಮತ್ತೆ ಶಿರಸಿಯಲ್ಲಿ. ಓದುವಾಗಲೇ ಎಬಿವಿಪಿ ಸೇರಿದ್ದ ಹೆಗಡೆ, ವಿದ್ಯಾರ್ಥಿ ಸಂಘಟನೆಯಲ್ಲಿ ಪೂರ್ಣಾವಧಿ ಕಾರ್ಯಕರ್ತ ರಾಗಿ ರಾಜ್ಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.
1981ರಲ್ಲಿ ಗುವಾಹಟಿಯಲ್ಲಿ ನಡೆದ ಅಸ್ಸಾಂ ಉಳಿಸಿ, 1992-93ರಲ್ಲಿ ಜಮ್ಮುವಿನಲ್ಲಿ ನಡೆದ ಭಯೋತ್ಪಾದನೆ ವಿರೋಧಿಸಿ ಹೋರಾಟ, ಬೇಡ್ತಿ, ಅಘನಾಶಿನಿ ಉಳಿಸಿ ಹೋರಾಟಗಳಲ್ಲೂ ತೊಡಗಿಕೊಂಡವರು. 1990ರಿಂದ ಬಿಜೆಪಿ ಮೂಲಕ ಸಕ್ರಿಯ ರಾಜಕೀಯ ಪ್ರವೇಶಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾಧ್ಯಕ್ಷ, ರಾಜ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಶಿಕ್ಷಣ ಸಂಯೋಜಕರಾಗಿ ಕೂಡ ಪಕ್ಷ ಸಂಘಟನೆ ಮಾಡಿದ್ದಾರೆ.
ಸತತ ಎಂಎಲ್ಎ: 1994ರ ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ ಬಳಿಕ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಮೂರು ಸಲ ಅಂಕೋಲಾ ವಿಧಾನಸಭೆ, 2008ರಿಂದ ಮರು ವಿಂಗಡನೆ ಗೊಂಡ ಶಿರಸಿ ವಿಧಾನಸಭೆ ಕ್ಷೇತ್ರದಲ್ಲಿ ಸತತ ಮೂರು ಸಲ, ಒಟ್ಟು ಆರು ಸಲ ವಿಧಾನಸಭೆ ಪ್ರವೇಶಿಸಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸದಸ್ಯ, 2006ರ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, 2008ರ ಮೇ 30ರಿಂದ ಬಿಜೆಪಿ ಸರ್ಕಾರ ದಲ್ಲಿ ಶಿಕ್ಷಣ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ಮಾಡಿದ್ದಾರೆ. ಪ್ರಧಾನಿ ಮೋದಿ ಅವರಾದಿಯಾಗಿ ಆರ್ಎಸ್ಎಸ್, ಎಬಿವಿಪಿ, ಪಕ್ಷಗಳಲ್ಲಿ ಉನ್ನತ ಸಂಪರ್ಕ ಹೊಂದಿದ್ದು, ಪಕ್ಷಾತೀತ ಗೆಳೆತನ ಸಂಪಾದಿಸಿದ್ದೂ ವಿಶೇಷ.
ಹೆಬ್ಟಾರ್ಗೆ ನೆಮ್ಮದಿ: ಕಾಗೇರಿಗೆ ಸ್ಪೀಕರ್ ಸ್ಥಾನ ಸಿಕ್ಕಿದ್ದು, ಒಂದು ಕಾಲಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ, ಅನರ್ಹಗೊಂಡ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಟಾರ್ ಅವರಿಗೆ ಖುಷಿ ಕೊಟ್ಟಿದೆ ಎನ್ನಲಾಗಿದೆ. ಅನರ್ಹತೆ ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಲ್ಲಿಂದ ತೀರ್ಪು ಬಂದ ಬಳಿಕ ಅವರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೂಡ ಬೇಡಿಕೆಯಲ್ಲಿತ್ತು. ಈ ಕಾರಣದಿಂದ ಹೆಬ್ಟಾರ ಬೆಂಬಲಿಗರಿಗೂ ಕಾಗೇರಿ ಉಸ್ತುವಾರಿ ಸಚಿವ ಸ್ಥಾನದಿಂದ ಹೊರಗೆ ಉಳಿದದ್ದು ಖುಷಿ ತಂದಿದೆ!
ಕ್ಷೇತ್ರ ನೋಡಿ: ಈ ಹಿಂದೆ ಉತ್ತಮ ನಿರ್ವಹಣೆ ಮಾಡಿದ್ದ ಶಿಕ್ಷಣ ಇಲಾಖೆಯ ಸಚಿವರಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಮತದಾರರಿಗೆ ಸ್ಪೀಕರ್ ಹುದ್ದೆ ಹೆಡ್ ಮಾಸ್ಟರ್ ಸ್ಥಾನ ಎಂಬ ಖುಷಿ ಇದೆ. ಆದರೆ, ಕ್ಷೇತ್ರದಲ್ಲಿ ಆಗಬೇಕಾದ ರಸ್ತೆ, ಸೇತುವೆ, ಕರೆಂಟ್, ಬಸ್ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿವೆ. ರೈತರ ಸಾಲ ಮನ್ನಾ, ಶಿರಸಿ ಪ್ರತ್ಯೇಕ ಜಿಲ್ಲೆ ಪ್ರಸ್ತಾಪ, ಪ್ರವಾಸಿ ತಾಣಗಳಿಗೆ ಅನುದಾನ ಸೇರಿದಂತೆ ಅನೇಕ ಬೇಡಿಕೆಗಳಿವೆ. ಅವುಗಳನ್ನೂ ಆದ್ಯತೆಯಲ್ಲಿ ಕಾಗೇರಿ ಅವರು ಮಾಡಿಸಬೇಕಾ ಗುತ್ತದೆ. ಜವಾಬ್ದಾರಿಯುತ ಹುದ್ದೆಯನ್ನೂ ನಿರ್ವಹಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ