ರಸ್ತೆ ಅಪಘಾತ: ವಿದ್ವಾಂಸ ಯೂಸುಫ್ ಹಾಜಿ ಸಾವು
Team Udayavani, Aug 3, 2019, 10:23 AM IST
ಬಂಟ್ವಾಳ: ಬಿ.ಸಿ.ರೋಡ್ ಕೈಕಂಬದಲ್ಲಿ ಗುರು ವಾರ ಸಂಭವಿಸಿದ ಅಪಘಾತದಲ್ಲಿ ಹಿರಿಯ ಇಸ್ಲಾಂ ವಿದ್ವಾಂಸ, ವಾಗ್ಮಿ, ಅಡೂರು ಗ್ರಾಮ ಅದ್ಯಪಾಡಿ ನಿವಾಸಿ ಉಸ್ತಾದ್ ಯೂಸುಫ್ ಹಾಜಿ (69) ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಏಳು ಮಂದಿ ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.
ಕೈಕಂಬದಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಇವರಿಗೆ ಕಾರು ಢಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ತತ್ಕ್ಷಣ ಸ್ಥಳೀಯರು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿತ್ತು. ಆದರೆ ರಾತ್ರಿ 9.30ಕ್ಕೆ ಕೊನೆಯುಸಿರೆಳೆದರು.
ಮೆಲ್ಕಾರ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕು ಅಡ್ಡೂರು ಸುರಿಬೈಲು ನಿವಾಸಿಯಾಗಿದ್ದ ಇವರು ಕಾಂಜಿಲ ಮಸೀದಿಯಲ್ಲಿ 37 ವರ್ಷ ಉಸ್ತಾದರಾಗಿದ್ದರು. ಸುರಿಬೈಲು ಮಸೀದಿ ಸ್ಥಾಪಕ ಖತೀಬ ಅಬ್ದುಲ್ ಖಾದಿರ್ ಉಸ್ತಾದರ ಪುತ್ರರಾಗಿದ್ದ ಇವರು ಎಲ್ಲ ಜಾತಿ ಧರ್ಮದ ಜನರೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದರು. ದ.ಕ.ಜಿಲ್ಲೆಯ ಬಹುತೇಕ ಎಲ್ಲ ಮಸೀದಿಗಳಲ್ಲಿ ಪ್ರಭಾಷಣ ನೀಡುವ ಮೂಲಕ ಖ್ಯಾತರಾಗಿದ್ದರು