ಕಾರ್ಕಳ ನಗರ: ಮುಖ್ಯ ರಸ್ತೆಯಲ್ಲೇ ಹರಿಯುತ್ತಿದೆ ನೀರು!
ಹದಗೆಟ್ಟು ಹೋದ ರಸ್ತೆ; ಹೊಂಡಗುಂಡಿಗಳಿಂದ ಸಂಚಾರ ದುಸ್ತರ
Team Udayavani, Aug 8, 2019, 5:18 AM IST
ವಿಶೇಷ ವರದಿ-ಕಾರ್ಕಳ : ಅನಂತಶಯನದಿಂದ ಬಂಡಿಮಠದವರೆಗಿನ ಮುಖ್ಯ ರಸ್ತೆ ಹದಗೆಟ್ಟು ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ. ಚರಂಡಿ ವ್ಯವಸ್ಥೆ ಇಲ್ಲದೇ ಮಳೆಗೆ ರಸ್ತೆ ತೋಡಿ ನಂತಾಗಿದೆ.
ಡಾಮರೀಕರಣದ ವೇಳೆ ಮ್ಯಾನ್ಹೋಲ್ ಮೇಲೆಯೇ ಡಾಮರು ಹಾಕಲಾಗಿದ್ದು, ಬಳಿಕ ಆ ಭಾಗ ಅಗೆದು ಮ್ಯಾನ್ಹೋಲ್ಗೆ ಕಾಣುವಂತೆ ಮಾಡಲಾಗಿತ್ತು. ಇದರಿಂದಾಗಿ ಉಂಟಾದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದಿರುವುರಿಂದ ದ್ವಿಚಕ್ರ ವಾಹನ ಚಾಲಕರಿಗೆ ತೊಡಕಾಗಿದೆ.
ಚರಂಡಿ ಇಲ್ಲದೆ ರಾದ್ಧಾಂತ
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಭಾರೀ ಪ್ರಮಾಣದ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದು ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಡಕಾಗಿದೆ. ಇದರೊಂದಿಗೆ ಗುಂಡಿಗಳು, ಹಂಪ್ಸ್ ಗಳೂ ಸವಾರರನ್ನು ಸಂಕಷ್ಟಕ್ಕೆ ತಳ್ಳಿದೆ. ಮಳೆ ಬರುವ ವೇಳೆ ಅರಿವಿಲ್ಲದೆ ಸಾಗುವುದರಿಂದ ಅಪಘಾತ ಭಯ ಕಾಡಿದೆ.
ಫುಟ್ ಪಾತ್ ಕೂಡ ಇಲ್ಲ
ಸರಿಯಾದ ಫುಟ್ಪಾತ್ ಇಲ್ಲದ ಕಾರ್ಕಳದಲ್ಲಿ ಪಾದಚಾರಿಗಳು ಸಾಗುವುದೇ ತ್ರಾಸದಾಯಕ. ವಾಹನಗಳ ಓಡಾಡುವಾಗ ರಸ್ತೆಯ ನೀರು ಕಾರಂಜಿಯಂತೆ ಪಾದಚಾರಿಗಳತ್ತ ಚಿಮ್ಮುತ್ತಿದೆ.
ಪಾರ್ಕಿಂಗ್ಗೆ ಜಾಗವಿಲ್ಲ
ಕಾರ್ಕಳ ನಗರ ವ್ಯಾಪ್ತಿಯಲ್ಲಿ ಪಾರ್ಕಿಂಗ್ಗೆ ಸೂಕ್ತವಾದ ಜಾಗವೇ ಇಲ್ಲ. ಇಲ್ಲಿನ ಪಾರ್ಕಿಂಗ್ ಸಮಸ್ಯೆ ಕುರಿತು ಕಾರ್ಕಳದ ನಾಗರಿಕರು ಎಸ್ಪಿ ನಿಶಾ ಜೇಮ್ಸ್ ಅವರ ಗಮನಕ್ಕೂ ತಂದರು. ಆದರೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾವೊಂದು ಕ್ರಮವೂ ಆಗಿಲ್ಲ. ನಗರದಲ್ಲಿ ಪೊಲೀಸ್ ನಿಯೋಜನೆ ಮಾಡಿದಲ್ಲಿ ತಕ್ಕಮಟ್ಟಿಗೆ ಸಮಸ್ಯೆ ಬಗೆಹರಿಸಬಹುದೆನ್ನುವ ಅಭಿಪ್ರಾಯವಿದೆ. ಈ ಹಿಂದೆ ಬಿಇಒ ಕಚೇರಿ ಇದ್ದ ಸ್ಥಳ ಸಾರ್ವಜನಿಕರ ವಾಹನ ಪಾರ್ಕಿಂಗ್ಗೆ ದೊರೆಯಬಹುದೆನ್ನುವ ಆಶಾವಾದ ಜನತೆಯಲ್ಲಿ ಇತ್ತಾದರೂ ಅದೂ ಈಡೇರಿಲ್ಲ.
ರಸ್ತೆ ತುಂಬೆಲ್ಲ ನೀರು ಹರಿಯುತ್ತಿರುವುದರಿಂದ ಹೊಂಡಗಳನ್ನು ಗುರುತಿಸಲಾರದೇ ವಾಹನಗಳು ಹೊಂಡಕ್ಕೆ ಬೀಳುತ್ತಿವೆ. ಆ ವೇಳೆ ವಾಹನ ಚಾಲಕರು, ದ್ವಿಚಕ್ರ ಸವಾರರು ಪುರಸಭೆಗೆ ಹಿಡಿಶಾಪ ಹಾಕಿಯೇ ಮುಂದುವರಿಯುತ್ತಾರೆ. ಇವುಗಳನ್ನು ಸರಿಪಡಿಸುವ ಗೋಜಿಗೇ ಆಡಳಿತ ಹೋಗುತ್ತಿಲ್ಲ ಎನ್ನುವುದು ನಾಗರಿಕರ ಆರೋಪವಾಗಿದೆ.
ನಗರ ಅಭಿವೃದ್ಧಿಯ ನೀಲನಕ್ಷೆಯಾಗಲಿ
ಕಿಷ್ಕಿಂಧೆಯಂತಿರುವ ಕಾರ್ಕಳ ನಗರದ ಅಭಿವೃದ್ಧಿ ಕುರಿತು ನೀಲನಕ್ಷೆ ತಯಾರು ಮಾಡುವುದು ಅವಶ್ಯ. ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಲ್ಲಿ ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ.
ಕ್ರಮಕ್ಕೆ ಸೂಚನೆ
ಪುರಸಭೆಯಲ್ಲಿನ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಚರಂಡಿಯಲ್ಲೇ ನೀರು ಸರಾಗವಾಗಿ ಹರಿಯುವಂತೆ ಮಾಡುವಲ್ಲಿ ಕ್ರಮ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಈಗಾಗಲೇ ತಿಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಪಾರ್ಕಿಂಗ್ ಜಾಗ ಗುರುತಿಸಿ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಬಸ್ ಚಾಲಕರು ರಸ್ತೆಯಲ್ಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬಾರದು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಆರ್ಟಿಒ, ಪೊಲೀಸ್ ಇಲಾಖೆಗೆ ಸೂಚಿಸುತ್ತೇನೆ.
-ಡಾ| ಎಸ್.ಎಸ್. ಮಧುಕೇಶ್ವರ್,
ಸಹಾಯಕ ಆಯುಕ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ
Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು
Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು
Theme Park Karkala ಅವಶೇಷ ತೆರವಿಗೆ ಕೋರ್ಟ್ ಆದೇಶ; ಜಿಲ್ಲಾಧಿಕಾರಿ ತಡೆ!
Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್ ಶೆಟ್ಟಿ ಆರೋಪ