ಮಳೆಯಿಂದ 2276 ಮನೆಗಳು ಹಾಳು
ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಿ•ಚೆಕ್-ಆರ್ಟಿಜಿಎಸ್ನಿಂದ ಹಣ ನೀಡಿ
Team Udayavani, Aug 14, 2019, 12:34 PM IST
ಶಿವಮೊಗ್ಗ: ಅತಿವೃಷ್ಟಿಗೆ ಸಂಬಂಧಿಸಿದಂತೆ ನಡೆದ ಜಿಲ್ಲಾಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.
ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯಿಂದಾಗಿ 2276 ಮನೆಗಳು ಹಾಳಾಗಿದ್ದು, ಅವರಿಗೆ 10 ಸಾವಿರ ರೂ. ಪರಿಹಾರ ಹಣವನ್ನು ಇನ್ನೆರಡು ದಿನದೊಳಗೆ ಕೊಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾಧಿಕಾರಿಗೆ ಸೂಚಿಸಿದರು.
ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಅತಿವೃಷ್ಟಿ ಕುರಿತಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಬೇಕು. ಪೂರ್ತಿ ಮನೆ ಕಳೆದುಕೊಂಡವರಿಗೆ 5 ಲಕ್ಷ. ಭಾಗಶಃ ಹಾನಿಯಾದವರಿಗೆ 1 ಲಕ್ಷ, ಸಂತ್ರಸ್ತರಿಗೆ 10 ಸಾವಿರ ರೂ. ಕೊಡಬೇಕು. ಜಿಲ್ಲೆಯಲ್ಲಿ ಒಟ್ಟು ಏಳು ಮಂದಿ ಪ್ರಾಣ ಕಳೆದುಕೊಂಡಿದ್ದು ಅವರಿಗೆ ತಕ್ಷಣ ಪರಿಹಾರ ಕೊಡಬೇಕು. ಚೋರಡಿ ಬಳಿ ನದಿ ನೋಡುತ್ತಾ ನಿಂತಿದ್ದ ಮೂವರು ನೀರು ಪಾಲಾಗಿದ್ದಾರೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಅವರಿಗೂ ಪರಿಹಾರ ಕೊಡಬೇಕು ಎಂದು ಸೂಚಿಸಿದರು. ಸದ್ಯಕ್ಕೆ 2276 ಮನೆ ಇದೆ. ಕೆಲವು ಮನೆಗಳು ಶಿಥಿಲಗೊಂಡಿದ್ದು ಯಾವಾಗ ಬೇಕಾದರೂ ಬೀಳಬಹುದು. ವಾರದ ನಂತರ ಮತ್ತೂಂದು ಪಟ್ಟಿ ಸಲ್ಲಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಇದಕ್ಕೆ ದನಿಗೂಡಿಸಿದ ಶಾಸಕ ಕೆ.ಎಸ್.ಈಶ್ವರಪ್ಪ, ಪರಿಹಾರವನ್ನು ನಗದು ರೂಪದಲ್ಲಿ ಕೊಡಬೇಡಿ. ದುರುಪಯೋಗ ಆಗುವ ಸಾಧ್ಯತೆ ಇದೆ. ಚೆಕ್ ಅಥವಾ ಆರ್ಟಿಜಿಎಸ್ ಮೂಲಕವೇ ಕೊಡಬೇಕು. ಬ್ಯಾಂಕ್ ಅಕೌಂಟ್ ಇಲ್ಲದವರಿಗೆ ಅಕೌಂಟ್ ಮಾಡಿಸಿ ಕೊಡಬೇಕು ಎಂದರು.
ಪ್ರತಿ ಬಾರಿ ಮಳೆ ಬಂದಾಗ ಕೆಲ ಏರಿಯಾಗಳು ಮುಳುಗಡೆಯಾಗುತ್ತವೆ. ಅವರಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಬೇರೆ ಕಡೆ ಅವರಿಗೆ ಸ್ಥಳ ನಿಗದಿ ಮಾಡಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಇದಕ್ಕೆ ದನಿಗೂಡಿಸಿದ ಶಾಸಕ ಕುಮಾರ್ ಬಂಗಾರಪ್ಪ, ಸೊರಬದಲ್ಲೂ ಕೂಡ ಇದೇ ಪರಿಸ್ಥಿತಿ ಇದ್ದು ಅವರಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಅವರಿಗೆ ಕಂದಾಯ ಇಲಾಖೆಯಿಂದ ಭೂಮಿ ಗುರುತಿಸಿಕೊಡಬೇಕು ಎಂದು ಮನವಿ ಮಾಡಿದರು. ಶಿವಮೊಗ್ಗದಲ್ಲಿ ಜನರು ಒಪ್ಪಿದ್ದರೆ ಅಪಾರ್ಟ್ಮೆಂಟ್ ಮಾದರಿಯಲ್ಲಿ ನಿರ್ಮಾಣ ಮಾಡಿಕೊಡಲಾಗುವುದು ಎಂದು ಸಿಎಂ ತಿಳಿಸಿದರು.
ಹಸು ಸತ್ತಿರುವ ಸಂಖ್ಯೆ ತಾಳೆ ಆಗುತ್ತಿಲ್ಲ. ಪರಿಹಾರ ಹೇಗೆ ಕೊಡುತ್ತೀರಾ ಎಂದು ಎಂಎಲ್ಸಿ ಆಯನೂರು ಮಂಜುನಾಥ್ ಅಧಿಕಾರಿಗಳಿಗೆ ಪ್ರಶ್ನಿಸಿದರು. ಇದರಿಂದ ಸಿಡಿಮಿಡಿಗೊಂಡ ಸಿಎಂ ಬಿಎಸ್ವೈ ಅಂಕಿ ಅಂಶ ಕೊಡುವುದರಲ್ಲಿ ಗೊಂದಲ ಮೂಡಿಸಬೇಡಿ ಎಂದು ತಾಕೀತು ಮಾಡಿದರು. ಇನ್ನೂ ಮಾಹಿತಿ ತೆಗೆದುಕೊಳ್ಳುತ್ತಿದ್ದು ಅಂತಿಮ ವರದಿ ತಕ್ಷಣ ಸಲ್ಲಿಸಿ ಎಂದರು.
ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದರೆ ಅವರಿಗೆ ವರ್ಷವಾದರೂ ಪರಿಹಾರ ಸಿಗುತ್ತಿಲ್ಲ ಎಂದು ಶಾಸಕ ಹರತಾಳು ಹಾಲಪ್ಪ ಸಿಎಂ ಗಮನ ಸೆಳೆದರು. ಇನ್ನು ಮುಂದೆ ಈ ರೀತಿ ಕೆಲಸ ಮಾಡಬೇಡಿ. ನಿಮ್ಮ ಮನೆಯಿಂದಲೇನು ಹಣ ತಂದುಕೊಡುವುದಿಲ್ಲ. ನಿಮಗೆ ಇಲ್ಲೇ ಕೆಲಸ ಮಾಡಬೇಕೆಂಬ ಆಸೆ ಇದ್ದರೆ ತಕ್ಷಣ ಪರಿಹಾರ ಕೊಡಿ ಎಂದು ಮೆಸ್ಕಾಂ ಅಧಿಕಾರಿಗೆ ಸಿಎಂ ವಾರ್ನಿಂಗ್ ಕೊಟ್ಟರು. ಕಾಯಿದೆ ಬದಲಾಗಿದ್ದು ತಕ್ಷಣ ಪರಿಹಾರ ಕೊಡಬಹುದು ಎಂದು ಅಧಿಕಾರಿ ಸಮಜಾಯಿಷಿ ನೀಡಿದರು.
ಜಿಲ್ಲೆಯಲ್ಲಿ 503 ಹಳ್ಳಿ, ಉಪಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈಗ 96 ಹಳ್ಳಿಗಳು ಮಾತ್ರ ಬಾಕಿ ಇವೆ. ಅಲ್ಲಿಗೆ ಕಂಬಗಳನ್ನು ಕೊಂಡೊಯ್ಯಲು ಆಗುತ್ತಿಲ್ಲ. ನೀರು ಕಡಿಮೆಯಾದ ಮೇಲೆ ವ್ಯವಸ್ಥೆ ಮಾಡಲಾಗುವುದು ಎಂದು ಮೆಸ್ಕಾಂ ಎಸ್ಇ ತಿಳಿಸಿದರು.’
ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಹರತಾಳು ಹಾಲಪ್ಪ, ವಿದ್ಯುತ ಕಂಬಗಳಿಗೆ ಅಡ್ಡಲಾಗಿದ್ದ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಎರಡು ಹೋಬಳಿಗಳು 13 ದಿನ ವಿದ್ಯುತ್ ಇಲ್ಲದೆ ಕಾಲ ಕಳೆದಿವೆ. ಡಿಎಫ್ಒ ಇದಕ್ಕೆ ಅನುಮತಿ ಕೊಡುತ್ತಿಲ್ಲ ಎಂದು ಕಿಡಿಕಾರಿದರು. ಇದಕ್ಕೆ ಗರಂ ಆದ ಬಿಎಸ್ವೈ ಮಾನವೀಯತೆ ದೃಷ್ಟಿಯಿಂದ ಕೆಲಸ ಮಾಡಿ. ಅರಣ್ಯ ಉಳಿಯಬೇಕೆಂಬ ಕಾಳಜಿ ನಮಗೂ ಇದೆ. ಇಲ್ಲದಿದ್ದರೆ ರಾಯಚೂರು, ಬಳ್ಳಾರಿಗೆ ವರ್ಗ ಮಾಡಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ಕೊಟ್ಟರು.
ಕೃಷಿ ಮತ್ತು ತೋಟಗಾರಿಕೆ: ಮೆಕ್ಕೆಜೋಳ ಬೆಳೆಗೆ ನೀರು ನಿಂತಿದ್ದು ಬೆಳೆ ಹಾನಿ ಸಂಭವವಿದೆ ಎಂದು ಕೃಷಿ ಇಲಾಖೆ ಜೆಡಿ ತಿಳಿಸಿದರು. ಇದಕ್ಕೆ ಅಸಮಾಧಾನಗೊಂಡ ಬಿಎಸ್ವೈ, ನಾನು ಬೆಳಗ್ಗೆಯಿಂದ ಪ್ರವಾಸ ಮಾಡಿದ್ದೇನೆ. ಬಹಳಷ್ಟು ಕಡೆ ಬೆಳೆ ಉತ್ತಮವಾಗಿದೆ. ಆತುರಕ್ಕೆ ವರದಿ ಮಾಡಬೇಡಿ. ಇನ್ನೊಂದು ವಾರ ಕಾಯಿರಿ ಆಮೇಲೂ ಬೆಳೆ ಹಾಳಾಗಿದ್ದರೆ ವರದಿ ಕೊಡಿ ಎಂದರು. ಅಡಕೆ ಕೊಳೆ ರೋಗ ಕಾಡುತ್ತಿದ್ದು ಎನ್ಡಿಆರ್ಎಫ್ನಲ್ಲಿ 1 ಹೆಕ್ಟೇರ್ಗೆ 18 ಸಾವಿರ ರೂ. ಪರಿಹಾರ ಇದೆ. ಬಹಳಷ್ಟು ರೈತರದ್ದು ಅರ್ಧ, ಕಾಲ ಎಕರೆ ಮಾತ್ರ ಹಾಳಾಗಿದೆ. ಕಾಯಿದೆಯಲ್ಲಿ ತಿದ್ದುಪಡಿ ಮಾಡಬೇಕಿದೆ ಎಂದರು. ಕೊಳೆ ರೋಗಕ್ಕೆ ತಕ್ಷಣ ಪರಿಹಾರ ಕ್ರಮಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಡಿಡಿಗೆ ಆದೇಶಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ನೋಡಲ್ ಕಾರ್ಯದರ್ಶಿ ಕ್ಯಾ.ಮಣಿವಣ್ಣನ್, ಜಿಪಂ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆ ವೇದಾ, ಎಸ್ಪಿ ಶಾಂತರಾಜು, ಜಿಪಂ ಸಿಇಒ ಕೆ.ಶಿವರಾಮೇಗೌಡ, ಎಂಎಲ್ಸಿಗಳಾದ ಎಸ್.ರುದ್ರೇಗೌಡ, ಆರ್.ಪ್ರಸನ್ನಕುಮಾರ್ ಇತರರಿದ್ದರು.