ಚಿರತೆ ದಾಳಿಯಿಂದ ಯಜಮಾನಿಯನ್ನು ರಕ್ಷಿಸಿದ ನಾಯಿ ಈಗ ಹೀರೋ!
Team Udayavani, Aug 17, 2019, 4:46 PM IST
ಡಾರ್ಜ್ಲಿಂಗ್: ಚಿರತೆ ಅಂದರೆ ಸಾಕು ಎಂಥವರೂ ಓಡಬೇಕು. ಆದರೆ ಚಿರತೆ ದಾಳಿ ನಡೆಸಿದ ವೇಳೆ ಯಜಮಾನಿಯನ್ನು ರಕ್ಷಿಸಿದ್ದು, ಆಕೆಯ ಸಾಕು ನಾಯಿ!
ಇಂಥದ್ದೊಂದು ಘಟನೆ ನಡೆದಿದ್ದು, ಪ.ಬಂಗಾಲದ ಡಾರ್ಜ್ಲಿಂಗ್ನಲ್ಲಿ. ಆ.14ರಂದು ಅರುಣಾ ಲಾಮಾ ಅವರು ಮನೆಯ ಸ್ಟೋರ್ ರೂಂನಲ್ಲಿ ಏನೋ ಶಬ್ದ ಆಗುತ್ತಿದೆ ಎಂದು ಬಾಗಿಲು ತೆರೆಯಲು ನೋಡಿದ್ದರು. ಕೆಲವೊಮ್ಮೆ ಅಲ್ಲಿ ಅವರು ಕೋಳಿಯನ್ನೂ ಇಡುತ್ತಿದ್ದರಂತೆ. ಆದರೆ ಇವತ್ಯಾಕೋ ಶಬ್ದ ಬೇರೆ ಕೇಳುತ್ತಿದೆಯಲ್ಲಾ..? ಎಂದುಕೊಂಡು ಬಾಗಿಲು ತೆರೆದಿದ್ದು, ಏಕಾಏಕಿ ಕಪ್ಪಗಿನ ಆಕೃತಿಯೊಂದು ಮೈಮೇಲೆ ಹಾರಿತ್ತು.
ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಚಿರತೆ ಪಂಜದಿಂದ ದಾಳಿ ಮಾಡಿತ್ತು. ಈ ವೇಳೆ ಬೊಬ್ಬೆಗೆ ಮನೆ ನಾಯಿ ಟೈಗರ್ ಓಡೋಡಿ ಬಂದಿದ್ದು ಸೀದಾ ಚಿರತೆ ಮೇಲೆ ನೆಗೆದಿದೆ. ನಾಯಿ ವೀರಾವೇಷ ನೋಡಿ ಚಿರತೆ ಇನ್ನೊಂದು ಬಾಗಿಲಿಂದ ಓಡಿಹೋಗಿದೆ. ಅಂತೂ ನಾಯಿ ಸಾಹಸದಿಂದಾಗಿ ಯಜಮಾನಿಯ ಮುಖಕ್ಕೆ, ತುಸು ತರಚಿದ ಗಾಯವಾಗಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಸ್ಟೋರೂಂನಲ್ಲಿದ್ದ ಕೋಳಿಯನ್ನು ಚಿರತೆ ತಿನ್ನಲು ಬಂದಿದ್ದು, ಹೀಗಾಗಲು ಕಾರಣವಾಗಿದೆ ಎಂದು ಅರುಣಾ ಅವರ ಪುತ್ರಿ ಹೇಳಿದ್ದಾರೆ. ಈಗ ಅವರ ಊರಿನಲ್ಲಿ ಟೈಗರ್ ನಾಯಿ ಹೀರೋ ಆಗಿದೆಯಂತೆ!