ಚಿದಂಬರಂ ತನಿಖೆಗೆ ಸಹಕರಿಸಿಲ್ಲ, 5 ದಿನ ಕಸ್ಟಡಿಗೆ ಒಪ್ಪಿಸಿ-ಸಿಬಿಐ; ಕಪಿಲ್ ಸಿಬಲ್ ವಾದವೇನು?
Team Udayavani, Aug 22, 2019, 4:38 PM IST
ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಅವರನ್ನು ಗುರುವಾರ ಸಂಜೆ ಸಿಬಿಐ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗಿದೆ.
ಐಎನ್ ಎಕ್ಸ್ ಮೀಡಿಯಾ ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿತ್ತ ಸಚಿವ ಚಿದಂಬರಂ ಅವರು ಬಂಧನದಿಂದ ತಪ್ಪಿಸಿಕೊಳ್ಳಲು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಜಾಮೀನು ನೀಡಲು ನಿರಾಕರಿಸಿತ್ತು. ಬಳಿಕ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ತುರ್ತು ವಿಚಾರಣೆ ಸಾಧ್ಯವಿಲ್ಲ, ಜಾಮೀನು ಅರ್ಜಿಯಲ್ಲಿ ತಾಂತ್ರಿಕ ದೋಷಗಳಿದ್ದು, ಹೊಸದಾಗಿ ಅರ್ಜಿ ಸಲ್ಲಿಸುವಂತೆ ಹೇಳಿ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿತ್ತು. ಹೀಗೆ ಸುಮಾರು 25 ಗಂಟೆಗಳ ಹೈಡ್ರಾಮಾದ ಬಳಿಕ ಪಿ.ಚಿದಂಬರಂ ಅವರನ್ನು ಸಿಬಿಐ ನಿನ್ನೆ ರಾತ್ರಿ ಬಂಧಿಸಿತ್ತು.
ತನಿಖೆಗೆ ಸಹಕರಿಸಿಲ್ಲ, ಐದು ದಿನ ವಶಕ್ಕೊಪ್ಪಿಸಿ: ಸಿಬಿಐ
ಪ್ರಕರಣದಲ್ಲಿ ಚಿದಂಬರಂ ಅವರು ತನಿಖಾಧಿಕಾರಿಗಳಿಗೆ ಸಹಕಾರ ನೀಡಿಲ್ಲ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಚಿದಂಬರಂ ಅವರನ್ನು ಐದು ದಿನಗಳ ಕಾಲ ವಶಕ್ಕೆ ನೀಡಬೇಕೆಂದು ಸಿಬಿಐ ಪರ ವಕೀಲರು ವಾದ ಮಂಡಿಸಿದ್ದಾರೆ.
ಐಎನ್ ಎಕ್ಸ್ ಹಗರಣ ಗಂಭೀರವಾದ ಪ್ರಕರಣವಾಗಿದೆ. ಇದರಲ್ಲಿ ಭಾರೀ ಮೊತ್ತದ ಹಣದ ಅವ್ಯವಹಾರ ನಡೆದಿದೆ. ಇದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕಾಗಿದೆ ಎಂದು ಸಿಬಿಐ ವಾದಿಸಿದೆ.
ಚಿದಂಬರಂ ಪರ ವಕೀಲ ಸಿಬಲ್ ವಾದವೇನು?
ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕೇವಲ ಇಂದ್ರಾಣಿ ಮುಖರ್ಜಿ ಸಾಕ್ಷಿಯನ್ನು ಇಟ್ಟುಕೊಂಡು ವಾದಿಸುತ್ತಿದೆ. ಸಿಬಿಐ ಕಸ್ಟಡಿಯಲ್ಲಿದ್ದಾಗ ನನ್ನ ಕಕ್ಷಿದಾರ ಚಿದಂಬರಂ ಅವರಿಗೆ 12 ಪ್ರಶ್ನೆಗಳನ್ನು ಕೇಳಿದ್ದು, ಅದರಲ್ಲಿ ಆರು ಪ್ರಶ್ನೆಗಳಿಗೆ ಈಗಾಗಲೇ ಉತ್ತರ ನೀಡಿದ್ದಾರೆ ಎಂದು ಚಿದಂಬರಂ ಪರ ವಕೀಲರಾದ ಕಪಿಲ್ ಸಿಬಲ್ ಸಿಬಿಐ ವಿಶೇಷ ಕೋರ್ಟ್ ನಲ್ಲಿ ಪ್ರತಿವಾದ ಮಂಡಿಸಿದ್ದಾರೆ.